ಭಾನುವಾರ, ನವೆಂಬರ್ 22, 2020

'ವೈಷ್ಣವ ಜನತೋ' ಕನ್ನಡ ಅನುವಾದ

ಸರ್ವರ ಕಷ್ಟವ ಅರಿತು ನೀ ನಡೆದರೆ
(ಎಲ್ಲರ ಬೇವಿಗೆ ಬೆಲ್ಲ ನೀನಾದರೆ)
ಕಲ್ಲಿನ ದೇವನೂ ಕರಗುವನು!
ಉಪಕಾರದ ಅಭಿಮಾನವ ಮರೆತರೆ
ಪುಣ್ಯದ ಹೊಳೆಯನು ಹರಿಸುವನು!!

ಲೋಕದಿ ಸಕಲರೂ ಬಂಧುಗಳಂತೆ
ನಿಂದಿಸದಿರು ನೀ ಯಾರನ್ನೂ
ನಡೆ-ನುಡಿಯಲ್ಲಿ ಮಡಿವಂತನಾದರೆ
ತಾಯಿಗೆ ಸಿರಿತನ ಬೇಕೇನು?

ಸಮದೃಷ್ಟಿಯಲ್ಲಿ ಸರ್ವರೂ ನಿಲ್ಲಲಿ
ಪರಸ್ತ್ರೀ ಎಂದಿಗೂ ನಿನ್ನ ತಾಯಿ!
ನಾಲಗೆಯಿಂದ ಅಸತ್ಯವ ನುಡಿದು 
ನೀ ಪರಸ್ವತ್ತಿಗೆ ಕೈ ಹಾಕದಿರು!!

'ಮೋಹ' ಎಂಬ ಮಾಯೆಗೆ ಬೀಳದೆ
ದೃಢವೈರಾಗ್ಯ ಇರಿಸು ಮನದೊಳಗೆ!
ರಾಮನಾಮ ಕೇಳಿ ಪುಳಕಿತ ನೀನಾದೊಡೆ 
ಸಕಲ ತೀರ್ಥಂಗಳೂ ಎದೆಯೊಳಗೆ!!

ಜಿಪುಣಿಯಾಗದೆ ದುರಾಸೆಯ ಬಿಡುನೀ
ಕೋಪದ ಬಾವಿಗೆ ಬೀಳದಿರು!
ಕವಿ ನಿನ್ನಾ ರೂಪವ ಕಾಣಲು ಕಾಯ್ವನು
ಪುಣ್ಯದ ಪ್ರಾಪ್ತಿ ಅಂದು ಜಗಕ್ಕೆಲ್ಲಾ!!



~ ಗುಜರಾತಿ ಆದಿಕವಿ ನರಸಿಂಹ ಮೆಹ್ತಾ
 
(ಕನ್ನಡ ಭಾವಾನುವಾದ : ಮಾಳಿಂಗರಾಯ ಹರಕೆ)





ಶನಿವಾರ, ನವೆಂಬರ್ 21, 2020

NCC ಮತ್ತು ನಾನು!

2016ರ, ಆಗಸ್ಟ್ ಮಾಹೆಯ ಹೊತ್ತು. ಪ್ರಥಮ ವರ್ಷದ ನಮಗೆ, ಓರಿಯೆಂಟೇಶನ್ ಪ್ರೋಗ್ರಾಂ! ನನಗಿಲ್ಲಿ ವಿಶೇಷವಾಗಿ ಕಂಡದ್ದು ಖಾಕಿ ಸಮವಸ್ತ್ರ ಧರಿಸಿ ಶಿಸ್ತಾಗಿ ಕಾರ್ಯಕ್ರಮ ಅಚ್ಚುಗೊಳಿಸುತ್ತಿದ್ದ ಎನ್.ಸಿ.ಸಿ ಕೆಡೆಟ್ಸ್. ಅದೇ ಕ್ಷಣದಲ್ಲೇ ನಾನೂ ಈ ಸಮವಸ್ತ್ರ ಧರಿಸಿಯೇ ತೀರಬೇಕೆಂದು ನಿಶ್ಚಯಿಸಿ, ಅವರು ನಡೆಸುವ ದೇಹಧಾರ್ಢ್ಯತಾ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು NCC ಕ್ಯಾಪ್ ಧಕ್ಕಿಸಿಕೊಂಡದ್ದು ಇನ್ನೂ ಕಣ್ಣಂಚಿನಲ್ಲಿ ಉಳಿದಿರುವ ದೃಶ್ಯ.
.
.
 ಪ್ರತಿ ವಾರದಂಚಿನಲ್ಲಿ ಕ್ಲಾಸು, ಲ್ಯಾಬು ಎಲ್ಲವನ್ನೂ ಮುಗಿಸಿ ಕ್ಷಣಾರ್ಧದಲ್ಲಿ ಸಮವಸ್ತ್ರ ಧರಿಸಿ, ಬೂಟುಗಳನ್ನು ಸಿಕ್ಕಿಸಿಕೊಂಡು ಗ್ರೌಂಡಿನಲ್ಲಿ ಫಾಲ್-ಇನ್ ಆಗುವುದರೊಳಗೆ ಹೆಣಬಿದ್ದಂತಾಗುತ್ತಿತ್ತು. ಅದರ ನಡುನಡುವೆ ಶೂ ಫಾಲಿಶ್ ಇಲ್ಲದೆ, ಖಾಕಿ ಇಸ್ತ್ರಿ ಮಾಡದೆ, ಗಲಿಬಿಲಿಯೊಳಗೆ ಏನಾದರೂ ಮರೆತು ಧರಿಸದೇ ಬಂದಿದ್ದರೆ ಮುಗೀತು ನಮ್ಮ ಕಥೆ!! ಶನಿವಾರದ ಮಧ್ಯಾಹ್ನ ಊಟ ಮುಗಿದ ಕೂಡಲೇ (ನನ್ನ ಇತರ ಸ್ನೇಹಿತರು ಕಾಲೇಜಿನಲ್ಲಿ ಜಾಲಿಯಾಗಿ ಹಲ್ಲುಗಿಂಜುತ್ತಾ ಸುತ್ತುತ್ತಿರುವಾಗ) ಇಡೀ ಕಾಲೇಜನ್ನು ಅವರೆದುರು ಐದು ಸುತ್ತು ಓಡುವ ಗೀಳು, ತದನಂತರ ವ್ಯಾಯಾಮ, ಮುಗಿದೊಡನೆ ಶುರು ನೋಡಿ 'ಪರೇಡ್' ಎಂಬ ಹಬ್ಬ. ಶಿಸ್ತಿನ ಸಾಲಿನಲ್ಲಿ ನಿಂತು, ಉರಿ ಬಿಸಿಲಿನ ಧೂಳು ಹಿಂಸೆಯಲ್ಲಿ ಸೀನಿಯರ್ ನೀಡುವ ಕಮಾಂಡಿಗೆ ತಕ್ಕಂತೆ, ತಪ್ಪಿಲ್ಲದೆ ಕೈಬೀಸುವುದರಲ್ಲಿ ಏನೋ ಸಾಹಸ, ತೃಪ್ತಿ! ಈ ಸಾಹಸದಲ್ಲಿ ಹೆಣ್ಮಕ್ಕಳು ಬಿಡದೇ ನಮ್ಮೊಡನೆ ಸರಿಸಮಾನರಾಗಿ ಪಾಲ್ಗೊಳ್ಳುವ ಪರಿ ಆಶ್ಚರ್ಯಕರ ಹಾಗೂ ಶ್ಲಾಘನೀಯ..!
.
.
NCC ಎಂಬುದು ಕೇವಲ ಗ್ರೌಂಡಿನಲ್ಲಿ ಲೆಫ್ಟ್-ರೈಟ್ ಮಾಡಿ ಕೈತೊಳೆದುಕೊಳ್ಳುವ ಗುಂಪಲ್ಲ. ಕಾಲೇಜಿನ ಇತರ ಎಲ್ಲಾ ಕ್ಲಬ್ಗಳಿಗಿಂತ ಇದು ತೀರಾ ಭಿನ್ನ. ಇದು ministry of defense, GOVT of India ಇದರಡಿಯಲ್ಲಿ ಪಳಗುವ ಒಂದು ನಿರ್ದಿಷ್ಟ ಸಾಹಸಿ ಯುವ ಸಂಸ್ಥೆ. ಇದರ ಇನ್ನೊಂದು ಮುಖ ಹಲವರಿಗೆ ಪರಿಚಯವೇ ಇರುವುದಿಲ್ಲ.
ನಮ್ಮ ವರ್ಷಾಂತ್ಯದ ಪರೀಕ್ಷೆಗಳು ಮುಗಿದ ಬಳಿಕ (ಜುಲೈ-ಆಗಸ್ಟ್) ನಾವು ಕ್ಯಾಂಪ್ಗಳಿಗೆ ಹೋಗಿದ್ದಿದೆ. ನನ್ನ ಸ್ನೇಹಿತರೆಲ್ಲ ತಮ್ಮ-ತಮ್ಮ ಊರುಗಳಲ್ಲಿ ರಜೆಯೊಂದಿಗೆ ಮಜವಾಗಿದ್ದರೆ, ಪುನಃ ನಾವು ಒಂದೆಡೆ ಬೀಡು ಬಿಟ್ಟು ಬೆವರು ಹರಿಸಬೇಕಿತ್ತು. ನೆನಪಿರಲಿ, ಹೋಗುವಾಗ ಇರುವ ನಿಮ್ಮ ಮುಖ ಬಣ್ಣ ಬರುವಾಗ ಇರುವುದಿಲ್ಲ. ಆದರೆ ಕ್ಯಾಂಪ್ನಲ್ಲಿ ಭೇಟಿಯಾಗುವ ಬೇರೆ ಕಾಲೇಜಿನ ಸ್ನೇಹಿತರು, ಪರೇಡ್ ಕಲಿಸುವ ಡ್ರಿಲ್ ಮಾಸ್ತರ್, ಮೂಕವಿಸ್ಮಿತಗೊಳಿಸುವ ಮೇಜರ್-ಕರ್ನಲ್ ಸಾಹೇಬರು, ಮನಸ್ಸಿಗೆ ಮುದ ನೀಡುವ ಆಟೋಟ ಸ್ಪರ್ಧೆ ಪ್ರತಿಯೊಂದೂ ನಮ್ಮಲ್ಲಿ ವಿಶೇಷ ತೆರನ ಅನುಭವ ಹುಟ್ಟು ಹಾಕುತ್ತದೆ. ಪ್ರತಿನಿತ್ಯ ನಸುಕಿನಲ್ಲಿ ಏಳುವುದು, ಬಿಡುವಿಲ್ಲದ ಡ್ರಿಲ್, ಮ್ಯಾರಥಾನ್, ವ್ಯಾಯಾಮ, ವೆಪನ್ ಟ್ರೈನಿಂಗ್, ಮ್ಯಾಪ್ ರೀಡಿಂಗ್, ಬ್ಯಾಂಡ್, ಟೆಂಟ್ ನಿರ್ಮಿಸುವಿಕೆ, ಮಿಲಿಟರಿ ಹಿಸ್ಟರಿ, ಮಧ್ಯಾಹ್ನದ ಪಿ-ಟಿ ಈ ಎಲ್ಲವೂದರ ಜತೆಗೆ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ದಿನವಿಡೀ ನಾವು ಸುಸ್ತಾಗಿದನ್ನು ಮರೆಸುವಂತಿರುತ್ತಿತ್ತು. ಹೀಗೆ ಹತ್ತು ದಿನ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ. ಇದರ ಮಧ್ಯೆ ಚಿತ್ತಾಕರ್ಷಕ ಚಹರೆಯಿಂದ ಓಡಾಡುವ ಲಲನೆಯರ ಮೊಗಸೌಂದರ್ಯ ನಿಮ್ಮನ್ನು ಆಕರ್ಷಿಸದೆ ಇರಲಾರದು!!
ಟ್ರೆಕ್ಕಿಂಗ್ ಕ್ಯಾಂಪ್ಗಳೂ ಸಹ ನಮ್ಮ ಪಯಣದ ಒಂದು ಭಾಗ. ಕಾಲೇಜಿನ ಸಹಯೋಗದಲ್ಲಿ ನಮ್ಮ ತಂಡ ಮೊದಲ ವರ್ಷ ನಂದಿಬೆಟ್ಟ, ನಂತರದಲ್ಲಿ 'ಕುದುರೆಮುಖ' ಹಾಗೂ ಶಿವಮೊಗ್ಗದ ಸುತ್ತಲ ಪಶ್ಚಿಮ ಘಟ್ಟಗಳಲ್ಲಿ ದಣಿವರಿಯದೆ ಸುತ್ತಿ, ಸಾಗಿ ಸಂಭ್ರಮಿಸಿದ್ದು ಈಗ ನೆನಪು ಮಾತ್ರ.
.
.
                   ( ಚಿತ್ರಕೃಪೆ: ಅಂತರ್ಜಾಲ )


 ಸಾಧನೆ ಮಾಡಲು, ಸಾಧಿಸುವ ಮಾರ್ಗದಲ್ಲಿ ನಡೆಯಲು ಅನೇಕ ಅವಕಾಶಗಳನ್ನು ಎನ್.ಸಿ.ಸಿ ನಿಮಗೆ ತೆರೆದಿಡುತ್ತದೆ. ಬೇರೆಯವರು ನೋಡಿಯೂ ಇರದ ಶಸ್ತ್ರಗಳ ಪರಿಚಯ ನಿಮಗಾಗುತ್ತದೆ. ಸರಳ ರೈಫಲ್ಗಳಿಂದ ಕೆಲ ಗುಂಡುಗಳನ್ನೂ ಹಾರಿಸಲೂಬಹುದು. ಮಿಲಿಟರಿ ಬದುಕಿನ ಕೊಂಚ ಪ್ರಮಾಣದ ವಿಶಿಷ್ಟತೆ ನಮಗರಿವಾಗುತ್ತದೆ. ಹಲವಾರು ರಾಷ್ಟ್ರೀಯ ಮಟ್ಟದ ಕ್ಯಾಂಪ್ಗಳಲ್ಲಿ ಭಾಗವಹಿಸಬಹುದು. ವಿಶೇಷ ಅನುಭವಗಳನ್ನು ಸಂಪಾದಿಸಬಹುದು. ರಾಜ್-ಪಥ್ ನಲ್ಲಿ ನಡೆಯುವ RD ಪರೇಡ್ ಹಾಗೂ TSC ಕ್ಯಾಂಪ್ಗಳಿಗೆ ಆಯ್ಕೆ ಆಗಿ ಹೋಗಿ ಬಂದರಂತೂ ನಿಮ್ಮ ಅರ್ಧ ಜೀವನಕ್ಕಾಗುವಷ್ಟು (ಗೆಳೆಯರು-ನೆನಪುಗಳು) ನಿಮ್ಮನ್ನು ಬಂಧಿಸುತ್ತವೆ. ನಮ್ಮ BMSCE-NCCಯ ನನ್ನ ಮಿತ್ರರೂ ಈ ಹಂತಕ್ಕೆ ತಲುಪಿ ಸಾಧನೆಗೈದದ್ದು ನಮ್ಮೆಲ್ಲರ ಹೆಮ್ಮೆ. 
NCC ನನ್ನ ಇಂಜಿನಿಯರಿಂಗ್ ಬದುಕಿನ ಅವಿಭಾಜ್ಯ ಅಂಗ. ಸಹಸ್ರಾರು ಸಂಗತಿಗಳನ್ನು ಕಲಿಸಿದ ವೇದಿಕೆ. ಮನಮಿಡಿಯುವ ನೆನಪುಗಳ ಹೂಗುಚ್ಛ. ಈ ಸವಿ-ನೆನಪುಗಳ ಸರಮಾಲೆಯಲ್ಲಿ ಮಿಂದೆದ್ದು ಸಹಕರಿಸಿದ ನನ್ನೆಲ್ಲಾ ಸಹಪಾಠಿಗಳು, ಬೋಧಕ-ಭೋದಕೇತರ ವರ್ಗ, ವಿಶೇಷವಾಗಿ (ತಪ್ಪಿಸಿಕೊಂಡಿದ್ದ ಟೆಸ್ಟ್- ಕ್ವಿಜ್ಗಳನ್ನು ಪುನಃ ನಡೆಸಿಕೊಟ್ಟ) ಅಧ್ಯಾಪಕರಿಗೆ ನನ್ನ ಹೃದಯಸ್ಪರ್ಶಿ ಕೃತಜ್ಞತೆಗಳು!!
ಧನ್ಯವಾದ...

~ಎಂ. ಕೆ. ಹರಕೆ

ಗುರುವಾರ, ನವೆಂಬರ್ 12, 2020

'ಬಯಕೆ'


ಬರಿದಾದ ಬದುಕಲೂ 
ಭರಪೂರ ಭರವಸೆ ಬಿತ್ತಿ
'ಬಯಕೆ' ಬೇಯಿತು ಬಿಡದೆ ಬರಿಮಾತಿನಲ್ಲಿ!

ಬತ್ತಳಿಕೆಯ ಬಾಣ 
ಬಾರದು ಬಯಸಿದಾಗ
ಬವಣೆ ಭಾಗ್ಯವ ಬೆನ್ನಟ್ಟುವುದು ಬಹಳ
ಭಾರವಾಯಿತು ಬದುಕು 
ಬಾಗಿತು ಭವಿಷ್ಯದ ಬಳ್ಳಿ
ಬಿರುಸಿನ ಬಿರುಗಾಳಿಗೆ ಬೆಲೆತೆತ್ತಿತು!

              ( ಚಿತ್ರಕೃಪೆ: ಅಂತರ್ಜಾಲ )


ಬಂಧುಗಳ ಬೆನ್ನುಡಿ
ಬಿನ್ನಾಣದ ಬಿಡಿಗಾಸು
ಬಿರಿಯದೇ ಭಾವದ ಬಸಿರ ಬಂದೂಕಿನಲ್ಲಿ?
ಬಿಕ್ಕಟ್ಟಿನ ಬಿಂದಿಗೆಯಲ್ಲೇ
ಬಾಳಿನ ಬೇಗೆಯ ಬಿಗಿದು
ಬದುಕ ಬಿಂಬಿಸುವ ಭಾವವೇ ಬಲಿಯಾಗಿದೆ!

ಬೆಲ್ಲದ ಭಾಗ್ಯೋದಯಕೆ
ಬದಲಾದ ಬಯಲಾಟವು
ಬಳಲಿಸಿದೆ ಬಣ್ಣದ ಬಾಳ ಬಡಿದಾಡಿಸಿ
'ಬಯಕೆ'ಯನ್ನು ಬಿಟ್ಟು
ಬಿರುದಾವಳಿಗಳ ಬದಿಗೊತ್ತಿ
ಬಾಯ್ಮುಚ್ಚಿ ಬಿಡದೇ ಭಜಿಸು ಭಗವಂತನ!
ಬರೀ, ಭಯ ಭಕ್ತಿಯಲಿ ಭಜಿಸು ಬಯಲಾತ್ಮನ!


~ಎಂ.ಕೆ.ಹರಕೆ

ಭಾನುವಾರ, ನವೆಂಬರ್ 1, 2020

ನೂರು ಭಾಷೆ ಮೀರಿ ನಿಲ್ಲುವ ಭಾಷೆ ನನ್ನದು!

ನೂರು ಭಾಷೆ ಮೀರಿ ನಿಲ್ಲುವ
 ಭಾಷೆ ನನ್ನದು!
ಅಂತರಂಗ ಸೂರೆಗೊಳ್ಳುವ
ನುಡಿಯು ನನ್ನದು....|
ಹರಿವಾ ಕಾವೇರಿಯಲ್ಲಿ ಜಿಗಿದು
ಸ್ವರವಾಗಿ ಚಿಮ್ಮುವ|
ಜನರ ಉಸಿರಲ್ಲಿ ಬೆರೆತು
ಧಗಿಸಿ ದನಿಯಾಗಿ ಹೊಮ್ಮುವ....||

ಇತಿಹಾಸದ ಗತವೈಭವ
ನನ್ನ ಭಾಷೆಯ ಐಸಿರಿ|
ರನ್ನ-ಪೊನ್ನರು ಕವಿ ಪಂಪನೂ
ರಸಕಾವ್ಯದ ವೈಖರಿ...|
ಕುಮಾರವ್ಯಾಸನ ಭಾರತ
ಕರುನಾಡ ಕಾವ್ಯ ಚೆಲುವು|
ನಮ್ಮ ದಾಸ-ಶರಣ ನುಡಿಸಂಸ್ಕೃತಿ
ಈ ಭಾಷೆ ಕಂಡ ಗೆಲುವು.....|

                       【ಚಿತ್ರಕೃಪೆ: ಅಂತರ್ಜಾಲ】

ನೂರು ಭಾಷೆ ಮೀರಿ ನಿಲ್ಲುವ
ಭಾಷೆ ನನ್ನದು...!
ಅಂತರಂಗ ಸೂರೆಗೊಳ್ಳುವ
ನುಡಿಯು ನನ್ನದು!!

ಶಿಲೆಶಾಸನ ಕಲ್ಬಂಡೆಯೂ
ಈ ಭಾಷೆಗೆ ಮಂದಿರ|
ಗಡಿನಾಡಲೂ ಒಳನಾಡಲೂ
ನುಡಿಯಾಗಿದೆ ಸುಮಧುರ...|
ಕುವೆಂಪು ಬೇಂದ್ರೆ ಕವಿ ಶ್ರೇಷ್ಠರು
'ಜೈ' ಎಂದು ನುಡಿದ ಭಾಷೆ|
ಕರ್ಣಾಟ ಜನಮನ ಅನುಕ್ಷಣ
'ಕೈ' ಎತ್ತಿ ಮುಗಿವ ಭಾಷೆ....|

ಎಂದೂ ಎಂದೆಂದೂ ನುಡಿ
ಕನ್ನಡ ಸಿರಿಗನ್ನಡ....
ಬಾಳಲ್ಲಿ ಎಂದೆಂದೂ ನುಡಿ
ಕನ್ನಡ ಸಿರಿಗನ್ನಡ||

                        
   ~ಎಂ.ಕೆ.ಹರಕೆ


(ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಜೊತೆಜೊತೆಯಲಿ' ಧಾರಾವಾಹಿಯ ಶೀರ್ಷಿಕೆ ಗೀತೆಯ ಕವರ್ ಸಾಂಗ್ ಇದಾಗಿದ್ದು, ಅದೇ ಧಾಟಿಯಲ್ಲಿ ಹಾಡಿಕೊಂಡರೆ ಮತ್ತಷ್ಟು ಮೆರಗು ಸಾಹಿತ್ಯಕ್ಕೆ!)




ಬುಧವಾರ, ಜುಲೈ 8, 2020

ಬದುಕು ಬದಲಿಸಿದ ಬಾಲಕ!

ಉರಿ ಉರಿ ಬಿಸಿಲು, ಒಣಧೂಳು, ಬಂಡೆ ಸೀಳುವಂತ ಕರ್ಕಶ ಶಬ್ಧಕ್ಕೆ ಬೇಯುತ್ತಿರುವ ತ್ರಾಣವನ್ನು ಮುಖಕ್ಕಂಟಿದ್ದ ಮುಖಗವಸು ಮತ್ತಷ್ಟು ಪೀಡಿಸುತ್ತಿದ್ದ ದೃಶ್ಯ. ಇದರ ನಡುವೆ ಧೂಳಿನಿಂದಾವೃತವಾದ ಕಣ್ರೆಪ್ಪೆ, ಉಸುಕಿನಲ್ಲಿ ತೇಯ್ದ ತಲೆಕೂದಲು, ಆ ತಲೆಮೇಲೊಂದು ಸಿಂಬಿ, ಡೊಗಳು ಅಂಗಿ, ತುಂಡ ಪ್ಯಾಂಟೊಂದನ್ನು ಧರಿಸಿದ್ದ ಬಾಲಕ ಎದುರಾದ. ಕಲ್ಲೇಶನಿಗೆ ತಾನು ಕಂಡ ದೃಶ್ಯದಲ್ಲಿ ಈ ಬಾಲಕನ ಹರ್ಷ ಚಹರೆಯೊಂದೆ ಆಕರ್ಷಿತ, ಮತ್ತೆಲ್ಲವೂ ಗೌಣ. ಆ ಹುಡುಗನ ಸಾಮೀಪ್ಯ ಧಾವಿಸಿ ಕಲ್ಲ ಹೀಗಂದ-

'ಏನು ನಿನ್ನ ಹೆಸ್ರು?'

'ರಂಜನ್ ಅಂತಾರೆ ನನ್ನ, ನೀವು ಬೇಕಾದರೆ ರಂಜು ಅಂತಲೂ ಕರೀಬಹುದು!'

ಹುಡುಗನ ಪ್ರತ್ಯುತ್ತರ ಕೇಳಿ ಕಲ್ಲೇಶನಿಗೆ ಕಲ್ಲು ಬಡಿದಂತಾಯಿತು. ಆದರೂ ಬಾಲಕನ ಧೈರ್ಯೋಚಿತ ಮಾತುಗಳಿಗೆ ಮನಸ್ಸು ಶರಣಾಯಿತು. ಹುಡುಗನ ಬಗ್ಗೆ ಕುತೂಹಲ ಹೆಚ್ಚಿತು.
.
ತಿರುಗಿ ನೋಡಲು ಹುಡುಗ ಅಲ್ಲಿರಲಿಲ್ಲ. ಬುಟ್ಟಿಯಲ್ಲಿ ಉಸುಕು ಹೊತ್ತು ಮೇಸ್ತ್ರಿ ಇದ್ದಲ್ಲಿಗೆ ದೌಡಾಯಿಸಿದ್ದ.
ಕಲ್ಲೇಶ ಕರಗುವ ಮನಸ್ಸುಳ್ಳವನು, ಭಾವಜೀವಿ. ಓದೋವಯಸ್ಸಿನ ಪುಟ್ಟಬಾಲಕನೋರ್ವನ ಕಷ್ಟ-ಕಾರ್ಪಣ್ಯ ಕಂಡು ಮನದೊಳಗೆ ಬಿಕ್ಕಿದ. ಅಂದ ಹಾಗೆ, ಈದಿನ ಕಲ್ಲೇಶನೂ ಸಹ ಇಲ್ಲಿ ನಡೆಯುತ್ತಿದ್ದ ಕಟ್ಟಡ ಕಾಮಗಾರಿಗೆ ಕೂಲಿಕನಾಗಿ ಆಗಮಿಸಿದ್ದ. ಇನ್ನೂ ಓದುತ್ತಿರುವ ಹೈದ. ಬೆಂಗ್ಳುರಿನ ದೊಡ್ಡ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ಅಭ್ಯಸಿಸುತ್ತಿದ್ದ. ಡಿಗ್ರಿ ಕೈಸೇರುವ ಹೊತ್ತಲ್ಲಿ ಕೋವಿಡ್-19 ರ ಛಾಯೆ ಅಡ್ಡಲಾಗಿ ಎಲ್ಲವನ್ನೂ ಮುಂದೂಡಿತ್ತು. ಮನೆಯಲ್ಲಿದ್ದು ಎಂತ ಮಾಡುವುದೆಂದು, ತಾನು ಓದುತ್ತಿರುವ ವಿಷಯಕ್ಕನುಗುಣ ಏನಾದರೂ ಕಲಿತಂತಾಗುತ್ತದೆಂದು ಕಾಮಗಾರಿ ಸ್ಥಳಕ್ಕೆ ಕಾಲಿಟ್ಟಿದ್ದ. ಇವನಿಗೆ ಈ ಕೆಲ್ಸ ಹೊಸತಲ್ಲದಿದ್ದರೂ ತುಂಬಾ ದಿನಗಳ ವಿಶ್ರಮದ ಕಾರಣ ಜಡದೇಹಿಯಾಗಿದ್ದ. ಕೊಂಚ ದುಗುಡವೂ, ನಿರುತ್ಸಾಹವೂ ಮನದೊಳಗೆ ಮನೆಮಾಡಿದ್ದವು. ಈ ಬಾಲಕನ ಕಂಡಾಕ್ಷಣದಿಂದ ಒಂದಿಷ್ಟು ಉತ್ಸಾಹ ನೀರೊಡೆದು, ಕಾಯಕದ ಉಲ್ಲಾಸ ಕೈಬೀಸಿ ಕರೆಯುತ್ತಿತ್ತು.
.
ಮೇಸ್ತ್ರಿ ಪಕ್ಕದೂರಿನವ. ಯಜಮಾನನಿಂದ ಕೆಲಸ ಒಪ್ಪಿಕೊಂಡು ಕಾಂಪೌಂಡ್ ಕಟ್ಟುತ್ತಿದ್ದ ಕಾರಣಕ್ಕೆ ಎಲ್ಲ ಕೂಲಿಕರನ್ನು  'ಬಿರ್ ಬಿರ್ರನೆ ಬನ್ನಿ' ಎಂದು ಸದ್ದು ಮಾಡಿ ಕರೆಯುತ್ತಿರುತ್ತಿದ್ದ. ದಿನಗೂಲಿಗೂ, ಒಪ್ಪಿಕೊಂಡು ಮಾಡುವ ಕೆಲಸಕ್ಕೆ ವ್ಯತ್ಯಾಸವಿದೆ. 'ದಿನಗೂಲಿ'ಯೆಂದರೆ ಯಜಮಾನನು ಕಾರ್ಯಸ್ಥಾನದಲ್ಲಿ ನಿಂತು ಕೆಲಸ ಮಾಡಿಸಿ ಮೇಸ್ತ್ರಿ ಸೇರಿದಂತೆ ಎಲ್ಲ ಕೂಲಿಕಾರರಿಗೆ ದಿನಕ್ಕಿಂತಿಷ್ಟೆಂದು ನೀಡುವ ಹಣ. 'ಒಪ್ಪಿದ ಕೆಲಸ'ವೆಂದರೆ ಯಜಮಾನ ಇಷ್ಟು ಪ್ರಮಾಣದ ಕೆಲಸವನ್ನು ಮೇಸ್ತ್ರೀಗೆ ಒಪ್ಪಿಸಿ ಇಂತಿಷ್ಟು ಹಣವನ್ನು ಒಮ್ಮೆಲೇ ಮೇಸ್ತ್ರಿಯ ಕೈಗೊಪ್ಪಿಸುತ್ತಾನೆ. ಕಡಿಮೆ ದಿನಗಳಲ್ಲಿ ಕೆಲಸ ಮುಗಿದರೆ ಕೂಲಿಕರಿಗೆ ನೀಡುವ ತುಸು ಹಣ ಮಿಕ್ಕಿ, ಮೇಸ್ತ್ರಿ ಲಾಭಗಳಿಸುತ್ತಾನೆ. ಆದ್ದರಿಂದ ಯಾರಾದರೂ ಒಂದುಕ್ಷಣ ಸುಧಾರಿಸಿಕೊಳ್ಳುತ್ತ ನಿಂತಿದ್ದರೆ,
'ಅಲ್ಲಯ್ಯ, ಹಿಂಗ್ ನಿಂತ್ರೆ ಗೋಡೆ ಯಾವಾಗ್ ಏರ್ಸೋದು?' 
ಎಂದು ವ್ಯಂಗ್ಯವಾಡುತ್ತಿದ್ದ. ಅಂತೂ ಕೆಲಸ ಕಾಮಗಾರಿ ಸರಾಗವಾಗಿ ನಡೆಯುತ್ತಿತ್ತು.
.
ಬಂದ ಕಲ್ಲೇಶನಿಗೆ ಕಲ್ಲೆತ್ತುವ ಕೆಲಸ ನಿಗಧಿಯಾಯಿತು. ತನ್ನ ಹೆಸರಿಗೆ ಅನ್ವರ್ಥವಿರುವ ಕೆಲಸ ಕಂಡು ಮನಸ್ಸೊಳಗೆ ಮುಗುಳ್ನಕ್ಕ 'ಕಲ್ಲ'. ಸುಮಾರು 20 ಕೆಜಿ ತೂಗುವ ಬಂಡೆಗಲ್ಲುಗಳನ್ನು ಹುಮ್ಮಸ್ಸಿನಲ್ಲಿ ಎತ್ತಿ ತಂದು ಗೋಡೆ ಕಟ್ಟುವ ಜಾಗಕ್ಕೆ ತಂದೆಸೆಯತೊಡಗಿದ. ಹುಡುಗನ ವೀರಾವೇಶವನ್ನು ಕಂಡು ಅಲ್ಲಿದ್ದ ಹಿರಿಜೀವಗಳು ಒಳಗೊಳಗೆ ಹುಸಿನಗೆಯಿತ್ತರು. ಈ ನಗೆಯಿಂದ ಕಲ್ಲನ ಹುಮ್ಮಸ್ಸು ಕರಗಿ ಎಲ್ಲರಂತೆ ಸಾವಕಾಶದ ಕಾರ್ಯಕ್ಕೆ ಅಣಿಯಾದ. ಇದರಿಂದ ಅವನ ಒಣತ್ರಾಣವು ಕೊಂಚ ಉಸಿರಾಡುವಂತಾಯಿತು. ಸೂರ್ಯನ ರಶ್ಮಿ ನೆತ್ತಿಯನು ದಾಟಿ ಪಶ್ಚಿಮದ ಕಡೆಯಿಂದ ಒರೆಯಾಗಲಾರಂಭಿಸಿದವು. ಸಮಯ ಎರಡಾಯಿತು.
'ಊಟ ಮುಗಿಸಿ ಬನ್ನಿ ಬೇಗ, ಹೊರಡಿ' ಎಂದು ಆಜ್ಞೆಯಿತ್ತ ಟೋಪಿ ಧರಿಸಿದ್ದ, ಕೈಯಲ್ಲಿ ಕರಣಿಯಾಡಿಸುವ 'ಮೇಸ್ತ್ರಿ'.
.
ಬಿಡುವಿಲ್ಲದೆ ಕಲ್ಲು ಮಣ್ಣು ಹೊತ್ತು, ಹಸಿದು ಹೈರಾಣಾಗಿ ಕಂಗೆಟ್ಟಿದ್ದ ಕೂಲಿ ಮಾಡುವ ಜೀವಗಳಿಗೆ ಕೊಂಚ ವಿರಾಮ ದೊರೆಯಿತು. ಜೀವಕ್ಕೆ ಚೈತನ್ಯ ಸ್ಫುರಣವಾಯಿತು.ಕಲ್ಲ ಭಾರದ ನಡಿಗೆಯಲ್ಲಿ ಬಂದು, ಧೂಳಾಗಿದ್ದ ಕೈಕಾಲು ತೊಳೆದು ಕಟ್ಟಡದ ಪಕ್ಕದಲ್ಲಿಯೇ ಇದ್ದ ಮರದ ನೆರಳಿನಲ್ಲಿ ಊಟ ಮಾಡಲು ಬುತ್ತಿಯನ್ನು ಹರವಿದ. ಮತ್ತೆಲ್ಲರೂ ತಮ್ಮ-ತಮ್ಮ ಬುತ್ತಿಯನ್ನು ಬಿಚ್ಚಿ ಅದಾಗಲೇ ಪ್ರಸಾದ ಸವಿಯುತ್ತಿದ್ದರು. ತಾನೂ ಬುತ್ತಿ ಬಿಚ್ಚಿ ಅರ್ಧ ತಿನ್ನುತ್ತಲೇ ರಂಜು ಹಾಗೂ ಆತನ ತಂದೆತಾಯಿಯರು ಕೈಗೆಟಕುವ ದೂರದಲ್ಲೇ ಪಿಸುಗುಟ್ಟುತ್ತ ತಿನ್ನುತ್ತಿರುವುದನ್ನು ಕಂಡ. ಕಣ್ಣಿನ ಸನ್ನೆಯಿಂದಲೇ ಅರಿತು ರಂಜು, ಕಲ್ಲನ ಬಳಿ ಬಂದು 'ಊಟ ಮುಗಿಯಿತೇ ಅಣ್ಣಯ್ಯ?' ಎಂದ. 'ತಗೋ ಈ ಸಿಹಿಯನ್ನು, ಹ್ಞೂ ಈಗ ಮುಗೀತು ನೋಡು!' ಎಂದು ಬುಟ್ಟಿಯಂಚಿನಲ್ಲಿದ್ದ ಸಿಹಿಖಾದ್ಯವನ್ನು ಅವನ ಕರದಲ್ಲಿಟ್ಟ. ರಂಜು ಸಿಹಿಪ್ರಿಯ. ಕ್ಷಣಾರ್ಧದಲ್ಲಿ ತಿಂದು ತೇಗಿದ.
.
ಬುತ್ತಿ ಕಟ್ಟಿಟ್ಟು ಪಕ್ಕದಲ್ಲಿ ಹರಿಯುತ್ತಿದ್ದ ಪೈಪಿನ ನೀರಿನಲ್ಲಿ ಕೈತೊಳೆದ ಕಲ್ಲ ಮುಗುಳ್ನಗುತ್ತಾ ಹೀಗಂದನು.
'ಎಷ್ಟು ಮಂದಿ, ನಿಮ್ಮನೇಲಿ?'

'ನಾಲ್ವರು ನಾವು'

'ಯಾರ್ಯಾರಿದ್ದೀರಿ?'

'ನಾನು ನನ್ನ ತಂಗಿ, ಜತೆಗೆ ಅಪ್ಪ-ಅಮ್ಮ'

'ಓಹ್ ಚಿಕ್ಕ ಕುಟುಂಬ ಚೊಕ್ಕ ಕುಟುಂಬ'

'ಅದೆಂತ ಚೊಕ್ಕ? ನಾ ಓದಿ ದುಡಿದು ತಿರುವವರೆಗೂ,
ಚೊಕ್ಕದ ಮಾತೆಲ್ಲಿ!'

ತಕ್ಷಣ ಟೋಪಿವಾಲ ಮೇಸ್ತ್ರಿಯಿಂದ ಕಿರುಚಾಟ ಶುರುವಾಯಿತು. 'ಮಾಡ ಆಗಿದೆ, ಮಳೆ ಬರೋ ಹೊತ್ತು! ಬಿರ್ರನೆ ಕೆಲ್ಸ ಮುಗ್ಸದ್ರೆ ಮನೆ. ಬನ್ನಿ ಬೇಗಬೇಗ'..
.
ಆಜ್ಞೆ ಹೊರಬೀಳುತ್ತಲೇ ಹುಡುಗ ಮರುಮಾತಾಡದೆ ಅಲ್ಲಿಂದ ಕೆಲಸಕ್ಕೆ ಹಿಂತಿರುಗಿದ. ಕಲ್ಲನ ತಲೆಯಲ್ಲಿ ಇನ್ನೂ ಏನೋ ಓಡಾಡುತ್ತಿತ್ತು. ರಂಜು ಉಸುರಿದ ಮಾತುಗಳು, ಅವನಲ್ಲಿದ್ದ ಜವಾಬ್ದಾರಿತನ, ಕಷ್ಟಗಳನ್ನು ಹಿಮ್ಮೆಟ್ಟಿಸಿ ದುಡಿದು ಮಕ್ಕಳೀರ್ವರಿಗೆ ಶಿಕ್ಷಣವೀಯುತ್ತಿರುವ ಆತನ ಪೋಷಕರು ಎಲ್ಲವೂ ಕಣ್ಣಿನಂಚಿನ ಪರದೆಯಲ್ಲಿ ಸಾಗಿ ಓಡಿದವು.
.
ಎಂತಹ ಜಾಣ್ಮೆ, ಆದರ್ಶಪ್ರಾಯ ಬದುಕು ಈತನದು. ಇವನ ತೇಜಸ್ಸನ್ನು ನೋಡಿದರೆ ಮುಂದೆ ಅಪ್ರತಿಮ ಸಾಧಕನಾಗುವುದರಲ್ಲಿ ಸಂಶಯವಿಲ್ಲಯೆಂದುಕೊಂಡ ಕಲ್ಲ. ಒಂದರ್ಥದಲ್ಲಿ 'ದುಡಿಮೆಯೇ ದೇವರು', 'ದುಡಿಮೆಯನ್ನೇ ನಂಬಿ ಬದುಕು' ಎಂಬ ಸಿದ್ಧಾಂತದಲ್ಲಿ ನಂಬಿಕಸ್ಥನೀತ. ಆದರೆ ಇತ್ತೀಚಿಗೆ ತುಸು ದೇಹ ದಣಿದರೆ ಸಂಕಟವಾದಂತೆ ಅನ್ನಿಸುತ್ತಿರಬೇಕು. ಅವ್ವ-ಅಪ್ಪ ಏನಾದ್ರೂ ಸಣ್ಣ ಕೆಲಸ ಹೇಳಿದರೂ ಸಿಡಿಮಿಡಿಗೊಳ್ಳುತ್ತಿದ್ದ. ರಂಜುವಿನ ಕಾರ್ಯ ನೋಡಿ ಈತನಿಗೂ ಅರಿವಾಗಿರಬೇಕು; 'ಜಡದೇಹ ವ್ಯರ್ಥಕಾಯವೆಂದು!'
.
ಕಲ್ಲನು ಯೋಚನಾಲಹರಿಯಿಂದ ಹೊರಬರಲು, ಮೇಸ್ತ್ರಿ ಮತ್ತೊಮ್ಮೆ ಅಬ್ಬರಿಸಿ ಕರೆಯಬೇಕಾಯಿತು. ಈ ಸರತಿಯ ಕೂಗು 'ಲೌಡ್ ಸ್ಪೀಕರ್'ಗಳನ್ನು ಮೀರಿಸುವಂತಿತ್ತು. ಕರ್ಣಪಟಲಗಳನ್ನೇ ಗೋಳಿಟ್ಟ ಕರೆಗೆ, ಕಂಗಾಲಾದ ಕಲ್ಲ ಮತ್ತೆ ಕಲ್ಲೆತ್ತುವ ಕೆಲಸಕ್ಕೆ ಮುನ್ನಡೆದ.
.
ಕೆಲಸದಲ್ಲಿನ ತಲ್ಲೀನತೆ ಸಮಯ ಸಾಗಿದ್ದನ್ನೇ ಮರೆಮಾಚಿತ್ತು. ಸಂಜೆ ಐದರ ಹೊತ್ತು. ಹೆಣ್ಣಾಳುಗಳು ಕ್ರಮೇಣ ಕರಣಿ, ಸಣಿಕೆ, ಬುಟ್ಟಿ ಮುಂತಾದ ಸಾಮಗ್ರಿಗಳನ್ನು ತೊಳೆದು ಇಡುವ ಜಾಗದಲ್ಲಿ ನೇಮಿಸುತ್ತಿದ್ದರು. ಮೆಸ್ತ್ರೀಯು ಗೋಡೆಯ ಎತ್ತರ ನೆತ್ತಿ ಎತ್ತರಕೆ ಏರಿದ್ದನ್ನು ಕಂಡು ಸಮಾಧಾನಿಯಾಗಿದ್ದ. ಕೆಲಸಿಗರು ಅಲ್ಲಲ್ಲೇ ಸುಧಾರಿಸಿ ನೀರು ಕುಡಿಯುತ್ತಾ ವಿಶ್ರಮಿಸಿದ್ದರು. ಇನ್ನೂ ಕೆಲವರು ಬೀಡಿಯ ಹೊಗೆಯನ್ನು ಗಾಳಿಯಲ್ಲಿ ಸೂಸುತ್ತಿದ್ದರು! ಬಿಡುವಾಗಿದ್ದ ಕಲ್ಲ, ರಂಜುವಿನ ಸಂಗಡ ಮಾತನಾಡಲು ಅವನ ಹತ್ತಿರ ಸುಳಿದನು.
.
'ಅಂತೂ ಕೆಲ್ಸ ಮುಗೀತು, ಅಬ್ಬಾ!'

'ಏನೋ ಅಣ್ಣಾ, ಶೀಘ್ರ ಮುಗೀತು, ನೆಮ್ಮದಿ'

'ಮತ್ತೆ, ಏನು ಓದುತ್ತಿದ್ದೀಯ? ಎಕ್ಸಾಮು ಮುಗೀತಾ?'

'ನಾನು ಒಂಬತ್ತನೇ ವರ್ಗ, ಅದೇನೋ ಪಾಸು ಮಾಡಿ ಮುಂದಕ್ಕೆ ಹಾಕ್ತಾರಂತೆ. ನಮ್ಗೆ'

'ಪರೀಕ್ಷೆ ನಡೀಲಿಲ್ಲ ಒಳ್ಳೇದು ಅಲ್ವಾ, ಯಾರ್ಗ್ ಬೇಕು ಆ ಸಾವು'

'ಹಾಗೇನಿಲ್ಲ.. ಅದರಲ್ಲೇನು? ಒಂದ್ ವಾರ ಬುಕ್ ಹಿಡದ್ರೆ ಸಾಕು, 90+ ಗೆ ಬರೀಬಹುದು'

'ಓಹ್, ಭೇಷ್.. ಏನು ಅಷ್ಟು ಧೈರ್ಯ! ಎಲ್ಲಾ ಓದಿ ಅಭ್ಯಾಸ ಮಾಡಿದ್ದಿಯ ಅಂತಾಯ್ತು. ಇರಲಿ ಬಿಡು, ನಿನ್ ತಂಗಿ?'

'ಅವ್ಳು 7ನೇ ಮುಗ್ಸಿ ಎಂಟಕ್ಕೆ ಹೋಗ್ತಾಳೆ. ಮನೇಲಿ ಅದೇನೋ ಅಡುಗೆ, ಪಾತ್ರೆ ಅಂತ ಇರ್ತಾಳೆ. ಬಿಡುವಿದ್ದಾಗ ಬೊಂಬೆ ಹಿಡೀತಾಳೆ. ಅದೂ ಬೇಡವಾದಾಗ ಅದೆಂತವೋ ಬುಕ್ಸ್ ಎಲ್ಲಾ ಓದುತ್ತಿರ್ತಾಳೆ. ನನ್ನನ್ನೇ ಜಾಣ ಅಂತಾರೆ, ಆದ್ರೆ ನಂಕಿಂತ ಜಾಣೆ ನನ್ ತಂಗಿ'

'ಹೋಗ್ಲಿ ಏನು ಆಗ್ಬೇಕಂತಿದಿಯಾ? ಮುಂದೆ.'

'ನಂಗಿನ್ನೂ ಏನು ಕ್ಲಾರಿಟಿ ಇಲ್ಲ. ಆದ್ರೆ ವಿಶ್ವೇಶ್ವರಯ್ಯ ತರ ಇಂಜಿನಿಯರ್ ಆಗ್ತೀನಿ. ಒಂದೊಂದ್ಸಲ ಐಎಎಸ್ ಆಫೀಸರ್ ಆಗ್ಬೇಕು ಅಂತಾನೂ ಅನ್ಸುತ್ತೆ'

ಹೀಗೆ ನುಡಿದ ರಂಜನ್, ತನ್ನ ಪೋಷಕರ ಕರೆಗೆ ಓಗೊಟ್ಟು ಅವರೆಡೆಗೆ ಓಡಿದ. ತನ್ನವ್ವ ಅಪ್ಪನ ಜತೆಗಿನ ರಂಜು, ಅವನ ಕನಸು, ಅವನಲ್ಲಿನ ಆತ್ಮಸ್ಥೈರ್ಯ ಎಲ್ಲವೂ ಕಲ್ಲನ ಕಂಗಳಿಗೆ ಹರ್ಷವನ್ನು ತುಂಬಿದವು. ಅವನಲ್ಲಿ ಆಗಾಗ್ಗೆ ಕಾಡುತ್ತಿದ್ದ ಕೊರಗು, ನಿರುತ್ಸಾಹ ಇವರಲ್ಲಿನ ಉತ್ಸಾಹದ ಸ್ಪರ್ಶಕ್ಕೆ ತನ್ನಿಂತಾನೇ ಕರಗಲಾರಂಭಿಸಿತು. ಹೊಸ ಹುಮ್ಮಸ್ಸು ಮನಸ್ಸಿಗೆ ಚೈತನ್ಯ ತುಂಬಿ ಸಾಂತ್ವನ ಹೇಳಿತು.
.
ತನ್ನ ಬದುಕೂ ಇದೆ ತೆರನಾಗಿ ಅಂದರೆ, ರಂಜುವಿನ ಬದುಕಿನಂತೆ ಸಾಗಿ ಬಂದದ್ದನ್ನು ನೆನಪಿಸಿಕೊಂಡು ಗದ್ಗದಿತನಾದ 'ಕಲ್ಲ'. ತಾನು ಕಳೆದ ಬಡತನದ ಬಾಲ್ಯ. ಅವ್ವ-ಅಪ್ಪನ ದುಡಿಮೆ. ಕಾರ್ಪಣ್ಯಗಳನ್ನು ಬಲವಂತವಾಗಿ ಬದಿಗೊತ್ತಿ ಕಟ್ಟಿಕೊಂಡ ಕಲಿಕಾ ಬದುಕು. ಕಲಿಯುತ್ತಲೇ ಕಳೆದ ವಿದ್ಯಾರ್ಥಿ ಜೀವನ. ಇಂಜಿನಿಯರಿಂಗ್ ಓದುವಾಗ ಬದಲಾದ ಜೀವನಕ್ರಮ. ತಾನು ಮಾನಸಿಕವಾಗಿ ನೊಂದು ಬೆಂದ ದಿನಗಳು, ಉಡಾಫೆಯಲ್ಲೇ ಮುಗಿಸಿದ ತಾಂತ್ರಿಕ ವಿದ್ಯಾಭ್ಯಾಸ ಅಪ್ರಯೋಜಕವಾಯಿತೆಂದು ಕೊಂಚ ಬೇಸತ್ತ. ಕಾಲ ಬದಲಾಗಿತ್ತು. ಇನ್ನೊಬ್ಬರ ಬದುಕಿನ ಪರೋಕ್ಷ ದೃಷ್ಟಾಂತ ತನ್ನ ಬದುಕಿನ ಭವ್ಯತೆಯನ್ನು ಪರಾಮರ್ಶಿಸಿತು. ಬದುಕು ಸಾಗಬೇಕಿದ್ದ ದಾರಿಗೆ ಪುನಃ ತಂದು ತಲುಪಿಸಿತ್ತು. 'ರಂಜು'ವಿನ ಮುಖೇನ ತನ್ನನ್ನೇ ತಾ ಕಂಡ ಕಲ್ಲೇಶ. ಆತನಿಗೆ ಆ ಹುಡುಗ ತನ್ನಂತೆ ಚಿಗುರುತ್ತಿರುವ ಮತ್ತೋರ್ವ ಸಾಹಸಿಗನೆನಿಸಿತು.
.
ಆಲೋಚನೆಗಳ ಆಲಾಪಗಳ ನಡುವೆ ರಂಜು 'ಬೈ ಅಣ್ಣಾ' ಅಂದಿದ್ದು ಈತನಿಗೆ ಕೇಳಿಸಿರಬೇಕು. ಕಣ್ಣರಳಿಸಿ ಮತ್ತೊಮ್ಮೆ ಆತನಲ್ಲಿ ದೃಷ್ಟಿ ಹಾಯಿಸಿ ತುಟಿಬಿಚ್ಚದೆ ಕೈಬೀಸಿ ಹೋಗಿ ಬಾಯೆಂದನು. ತಂದೆ ತಾಯಿಯರ ಕನಸಿನ ಕೂಸು ಅವರಿಬ್ಬರ ಜತೆ ಉಲ್ಲಾಸದಿ ಸಾಗಿತು.

ಚಿತ್ರಕೃಪೆ: ಅಂತರ್ಜಾಲ
.
ಕಲ್ಲನ ಅರಳಿದ ಕಣ್ಣುಗಳು ತೆರೆದೇ ಇದ್ದವು. ಕಣ್ಣಿನಂಚಿನಲ್ಲಿ ಕೊಂಚ ಕಾಣದ ಕಣ್ಣೀರಿದ್ದವು. ಅದೆಂಥ ಸಡಿಲಿಕೆ, ಅದೆಂಥ ನಿರಾಳತೆ, ಅದೆಂತಹ ಮನಸ್ಥಿತಿ.. 
ಹೇಳತೀರದ ಬದಲಾವಣೆಗೆ ಶುರುವಾಗಿತ್ತು ಕ್ಷಣಗಣನೆ...

ಪರಿವರ್ತಿತ ಕಲ್ಲನ ಹೃದಯ ಸದ್ದಿಲ್ಲದೇ ಸಾಗಿತು, ಮನೆಕಡೆಗೆ!

      **  **  ***  **  **  ***  ***  ** **  **  ***  

~ಎಂ.ಕೆ.ಹರಕೆ

ಬುಧವಾರ, ಜೂನ್ 17, 2020

ಕಾಯಕದ ಹೊಳಪು!

ಹೊಳೆಯುವ ಹೊಳಪು, ಹೊಳಪಲ್ಲ
ಚಿಂತನಾ ಕ್ರಾಂತಿಯ ಹರಿವು!
ಹೊಳೆದು ಹರಿದು ಮುನ್ನುಗ್ಗಿ ಭುಗಿಲೆದ್ದು
ನಭಾತೀರದ ಕದವ ತಟ್ಟಿ
ಮುಗಿಲ ಮಲ್ಲಿಗೆಯೊಳು ಸದ್ದಿಲ್ಲದೆ ರಮಿಸುವುದು!
ಹೊಳೆವುದು ಹೊಳಪು ಹದವಿಲ್ಲದೆ||


                     (ಚಿತ್ರಕೃಪೆ: ಅಂತರ್ಜಾಲ)

ಒಂದರ್ಥದಲಿ ಮಿಗಿಲು ಕಾಯಕಗಯ್ಯುವುದು
ಭೂದೇವಿಯ ಮಡಿಲ ಸುಪ್ಪತ್ತಿಗೆಯಲಿ|
ಗೆಲ್ಲುವುದು ಮನವು ಬಿಡದೆ ಗೈದರೆ ತಾನು
ಒಗ್ಗದೇ ಹರಿವ ಬೆವರ ತ್ರಾಣದಲಿ|
ಒಗ್ಗುವುದು ಹಿಗ್ಗುವುದು ಒಗ್ಗಿನೊಳು ಹೊಕ್ಕಿದರೆ
ಒಗ್ಗದ ಕಾಯವೊಮ್ಮೆಲೆ ಒಗ್ಗರಣೆಯ ಸಕ್ಕರೆ|
ಮನವ ಸೈರಿಸಿ ದುಡಿದೊಡೆ 
ಭಕ್ತಿ ಕಾಣ, ಅದುವೇ ಮುಕ್ತಿ||

ಬಯಸಿ ಬರದಿರೆ ದೇಹ, ಆಕ್ರಮಿಸಿ ಕರೆ ತಾ
ದೇಹವಿದು ಅಲ್ಪ, ಕೊಳಕು ಪಿಂಡ|
ಸಿಟ್ಟಿನಲಿ ಮೋಹದಲಿ ಅರಿಷಡ್ವರ್ಗರಾದಿಯಲಿ
ಕ್ಷಣಿಕ ಸುಖಕೆ ಮೀಯ್ವ ಮಂಕು ಹೊಂಡ||

ದೇಹವಿದು ಕ್ಷಣಿಕ, ನೀರಮೇಲಣ ಗುಳ್ಳೆ
ಎನಿತುಪಕಾರದ ಬಳಿಕ ಮುಚ್ಚಲಿ ನಾಸಿಕ ಹೊಳ್ಳೆ|
ಕಾಲ-ಕಾಲರಾದಿಯಲೂ ಕಾಯಕದೆ ಜಯಾ-ವಿಜಯ
ಕಾಯಕಶೂನ್ಯದವಗೆ ತಪ್ಪದು ಪರಾಜಯ|
'ಜೀವನ ಗ್ರಹಿಕೆ' ಇದುವೇ ಬದುಕಿನ ನಿಜಮಂತ್ರ
ಜೀವ ಜಂಜಾಟದಲಿ ಅರಿತುಕೋ ಈ ತಂತ್ರ||

-ಎಂ.ಕೆ.ಹರಕೆ

ಗುರುವಾರ, ಜೂನ್ 11, 2020

ಮೆಲ್ಲ ಮೆಲ್ಲನೆ ಮೆಲ್ಲು

ಮೆಲ್ಲ ಮೆಲ್ಲನೆ ಮೆಲ್ಲು ನೀ ನೆಲ್ಲಿಕಾಯಿಯ
ನನ್ನಯ್ಯ ಕಲ್ಲಯ್ಯ-ಮಲ್ಲಯ್ಯನೇ||

ಹಾಲು ಹಲ್ಲಿನ, ಜೊಲ್ಲ ಸುರಿಸುವ, ಪ್ರಫುಲ್ಲ ತೊದಲು ಸೊಲ್ಲಿಗನು ನೀ;
ನೀಳ ಕಾಯನು ಕೂಡ|
ಕಹಿ ಕಾರುವ, ಪಿತ್ತವುಕ್ಕಿಸುವ, ಕಲ್ಲಿನಂತಹ ಕಗ್ಗಾಯಿ ನೆಲ್ಲಿಯಿದು;
ಬಿಸುಟುವುದು ನಿನ್ನ ಬಾಯ ಒಸಡು||

ನೆಲ್ಲಿಯಿದು ಕಂದ ಸಿಹಿ-ಬೆಲ್ಲವಲ್ಲ
ಹಿಂಡುವುದು ಹುಳಿ ನೆತ್ತರಲಿ, ಮಿತಿಯಿರಲಿ|
ಮೆಲ್ಲುವ ಪರಿಭಾಷೆ ನೀನೆಲ್ಲಿ ಬಲ್ಲೆ, ಮೃದು ಮಲ್ಲಿಗೆಯಲಿ ಹೆಣೆದ ಹೂಬಿಲ್ಲು ನೀನಿನ್ನು|
ಮೆಲ್ಲುವ ಪರಿಯ ನಾಬಲ್ಲೆ ಮಲ್ಲ, ಕೇಳಿಲ್ಲಿ!
ಕಲ್ಲು ತಿಂದು ಕರಗಿಸುವ, ನೀನಾಗಬೇಕಿದ್ದಲ್ಲಿ ಈಗಿಂದೀಗಲೇ
ಕೊಲ್ಲು ಈ 'ನೆಲ್ಲಿ'ಯ ಮೋಹ ||

                     (ಚಿತ್ರಕೃಪೆ: ಅಂತರ್ಜಾಲ)

ನಿಜಕೂ ತಪ್ಪಲ್ಲ! ನೆಲ್ಲಿಯನು ತಿಂಬುವುದು
ತೊಳೆದು ತಾ ನೆಲ್ಲಿಯನು ನಲ್ಲಿಯ ತಿಳಿ ನೀರಿನಲ್ಲಿ;
ತುಂಬದಕೆ ಸಮ-ಪ್ರಮಾಣದ ಉಪ್ಪು-ಖಾರದಾಗರವನು|
ಕೇಳಿಲ್ಲಿ,
ಮಿತವಿರಲಿ ತಿನಿಸಿನಲ್ಲಿ, ಹಿತವಿರಲಿ ಮನಸ್ಸಿನಲ್ಲಿ, ಹಿತ-ಮಿತ ಮತ್ತೆಲ್ಲದರಲಿ||

* * * * * * * * * * * * * * * * * * * * 

ನಲ್ಲ ಬೆಳೆದು ನಲ್ಲಿಯ ಬಳಿನಿಂತು ನೆಲ್ಲಿಯನು ತೋರುತ
ನಲ್ಲೆಗೆ ಹೀಗೆಂದನು- 
ಅಂದು ನನ್ನಪ್ಪನಿಂದ ಬಾಳೆಂಬ ಪಥಕೆ ಬೆಳಕು ಚೆಲ್ಲಿದ ಸದ್ಗುಣದ ನೆಲ್ಲಿಯಿದು|
ಉಪ್ಪು-ಹುಳಿ-ಖಾರ ಪ್ರಮಾಣದಲ್ಲಿ ಬೆಸೆದು ಹಿತಿಮಿತಿಯನ್ನರುಹಿದ ಸಾರವಿದು|
ಜೀವ ಭಾವ ಭೇದಗಳ ಪರಿಯ ಪರಿಚಯಿಸುವ ಜೀವನಾನ್ವಯದ ಸೊಲ್ಲಿದು|
ಕೇಳು ನನ್ನ ನಲ್ಲೆ ಇದ, ನಾ ನಿನಗೆ ತಿಳಿಪೆನು;
ನನ್ನಪ್ಪ ನನಗರುಹಿದಂತೆ!!

ಎಲ್ಲದಕೂ ಪ್ರಮಾಣವುಂಟು, ನಲ್ಲೆ ನೀನದನು ಬಲ್ಲೆಯಾ?
ಬದುಕೇ ಹೀಗೆ!
ಹೆಚ್ಚೆಂದರೆ ಕಡಿಮೆ ತುಚ್ಛವೆಂದರೆ ಘನ!
ಕಡಿಮೆಯಾದರೆ ಗ್ರಹಿಸು, ಹೆಚ್ಚಿದರೆ ನಿಗ್ರಹಿಸು|
ನೀ ಒಲ್ಲೆಯೆಂದರೂ ನಿನ್ನ ಬಿಡದು ಬದುಕು....
ನೆಲ್ಲಿಯ ಕತೆಯಲ್ಲವಿದು, ಬಾಳಿನ ವ್ಯಥೆಯು! ನೆಲ್ಲಿ ಇಲ್ಲಿ ನಿಮಿತ್ತ ಕಾಣು!

ಪ್ರಮಾಣ ಮಾಡಿ ಹೇಳುವೆ- ಕೇಳು ನನ್ನ ಹೂವೆ!
ಸಮಪ್ರಮಾಣದಲ್ಲಿ ನಿಂತಿಹುದು ಸುತ್ತಲ ಜಗವೆಲ್ಲ||

- ಎಂ.ಕೆ. ಹರಕೆ

ಸೋಮವಾರ, ಏಪ್ರಿಲ್ 13, 2020

ಮರೆಯಾದ ಮಾಣಿಕ್ಯ!!

                      "ವ್ಯರ್ಥವಾಯಿತಲ್ಲ  ಜನ್ಮವು, ಸಾರ್ಥಕಾಗಲಿಲ್ಲ" ಪುರಂದರದಾಸರ ಈ ಸಾಲನ್ನು ಕೇಳುತ್ತಾ ಕುಳಿತಿದ್ದ ಸಂದರ್ಭವದು. ಆಗಸ್ಟ್  ೧೫ ಎಂದಾಕ್ಷಣ ನಮಗೆಲ್ಲಾ ನೆನಪಾಗುವುದು ಸ್ವತಂತ್ರದಿನ. ಪ್ರತಿ ಭಾರತೀಯನು ಸ್ವಾತಂತ್ರ್ಯ ಯೋಧರ, ಹೋರಾಟಗಾರರನ್ನು ಸ್ಮರಿಸುವ ದಿನ. ಒಂದು ರೀತಿಯ ಹಬ್ಬದ ವಾತಾವರಣವೇ ಸರಿ. ಆದರೆ ನನ್ನ ಮನಸ್ಸು ಮಾತ್ರ ಆಗಸ್ಟ್ ೧೫ ಎಂದಾಕ್ಷಣ ವಿಚಲಿತವಾಗುತ್ತದೆ. ಬೇರೊಬ್ಬರ ದಾಸ್ಯಕ್ಕೆ ಒಳಗಾಗಿ ಪರತಂತ್ರವಾಗುತ್ತದೆ. ಅತ್ಯಮೂಲ್ಯ ರತ್ನವೊಂದು ವಿನಾಃ ಕಾರಣ ಕೈತಪ್ಪಿತಲ್ಲ ಎಂಬ ಕೊರಗು ಆವರಿಸುತ್ತದೆ. ಹೌದು, ಆಗಸ್ಟ್ 15, ಆ ಮಾಣಿಕ್ಯ ಹಠಾತ್ತನೆ ಮರೆಯಾದ ದಿನ.
      ಅದು ೨೦೦೨-೦೩ ರ ಇಸವಿ, ಕರ್ನಾಟಕದಲ್ಲಿ ಎಸ್.ಎಂ.ಕೃಷ್ಣರವರು ಮುಖ್ಯಮಂತ್ರಿಯಾಗಿದ್ದ ಸಮಯ. ಸುಮಾರು ೭ ವರ್ಷಗಳ ಭಾರೀ ಬರಗಾಲವು  ಉತ್ತರ ಕರ್ನಾಟಕವನ್ನು ಅಲ್ಲೋಲ  ಕಲ್ಲೋಲಗೊಳಿಸಿತ್ತು. ತಮ್ಮ ಸ್ವಂತ ಊರನ್ನು ಬಿಟ್ಟು ಅಂತರ್ ರಾಜ್ಯ, ಬೆಂಗಳೂರು, ಗೋವೆ, ಪುಣೆ ಹೀಗೆ ಮುಂತಾದ ಉದ್ಯೋಗನಗರಿಗಳಿಗೆ ನಮ್ಮ ಜನ ವಲಸೆ ಹೋಗುತ್ತಿದ್ದರು. ಬರಗಾಲ ಯಾವ ಮಟ್ಟಿಗೆ ಇತ್ತೆಂಬುದು ನಮ್ಮ ದೃಷ್ಟಿಕೋನದಲ್ಲಿ ಅಳೆಯುವುದು ಅಸಾಧ್ಯದ ಮಾತು. ಒಟ್ಟಿನಲ್ಲಿ ಬದುಕಬೇಕಾದರೆ ಪರ ಊರಿಗೆ ಹೋಗಲೇಬೇಕೆಂಬುದು ಮಾತ್ರ ನಿಶ್ಚಿತವಾಗಿತ್ತು.
                      ನಾನು ಆಗತಾನೆ ಶಾಲೆಗೆ ಸೇರಿದ್ದೆ. ನಮ್ಮ ಹಳ್ಳಿಯಲ್ಲಿ 1-5 ನೇ ತರಗತಿಯವರೆಗೆ  ನಡೆಸುವ ಪ್ರಾಥಮಿಕ  ಶಾಲೆಯಿತ್ತು. ನಾನು ೨ನೇ ವರ್ಗವಿರುವಾಗ ನನ್ನ ತಮ್ಮ ತುಂಟತನ ಮಾಡುತ್ತಿದ್ದರಿಂದ ಒಂದು ವರ್ಷ ಮುಂಚಿತವಾಗಿಯೇ ಶಾಲೆಗೆ  ಸೇರಿಸಿದರು. ಇಂತಿರುವಾಗಲೇ ನಮ್ಮ ಹೊಲದ ಮನೆಯಿಂದ ಸುಮಾರು ೧ ಮೈಲಿ ದೂರದಲ್ಲಿದ್ದ ನನ್ನ  ಸ್ನೇಹಿತರ ಮನೆಗೆ ಆಗಾಗ್ಗೆ ಹೋಗುತ್ತಿದ್ದ ನೆನಪಿದೆ. ಆ ಸ್ಥಳ ತುಂಬಾ ಹಸಿರುಮಯವಾದ ತಪಸ್ವಿಗಳ ಸ್ಥಳ. ಹೆಸರು 'ಕೂಡಲ'. ಶರಣರ ಕೇಂದ್ರವಾಗಿದ್ದರಿಂದ ಅದನ್ನು 'ಕೂಡಲಸಂಗಮ'ದಷ್ಟೇ ವಿಶೇಷವಾಗಿ ನಮ್ಮೂರಿನ  ಜನ ಭಾವಿಸಿದ್ದರು. ಇದರ ಮಾರ್ಗವಾಗಿ ಒಂದು ಹಳ್ಳ ಹರಿಯುತ್ತದೆ. ಅಲ್ಲಿ ಸುಮಾರು ಆಲದಮರಗಳು, ಬನ್ನಿ ಮರಗಳು, ನೇರಳೆ, ಈಚಲುಗಳ ಸಾಲಿವೆ. ನಾವು ಸಣ್ಣವರಿದ್ದಾಗ ಆಲದಮರಕ್ಕೆ ಜೋತುಬಿದ್ದಿರುವ  ಬಾವಲಿಗಳನ್ನು ಹಿಡಿದು ಜೋಕಾಲಿ ಆಡುವ ಮಜಾ, ಅಂತಿದ್ದಲ್ಲ......
                      ಇವು ನನ್ನ ತಂದೆಯ ಸ್ನೇಹಿತರ ಹೊಲದ ಅಂಚಿಗಿದ್ದವು. ಅವರು ಲಿಂಗಾಯತರು, ವಿಭೂತಿಯಿಂದ ತಮ್ಮನ್ನು ಆವರಿಸಿರುತ್ತಿದ್ದರು. ಹೆಸರು ಮಲ್ಲಪ್ಪ, ನನ್ನ ತಂದೆ ಮತ್ತು ಇವರ ಪರಿಚಯ ತುಂಬಾ ಹಿಂದಿನದು. ಒಂದೇ ಊರಿನವರು;  ಜತೆಗೆ ಈರ್ವರಿಗೂ ಒಬ್ಬರ ಬಳಿಯೇ ಅಧ್ಯಾತ್ಮ ದೀಕ್ಷೆ ಒಲಿದಿತ್ತು. ಊರಿನಲ್ಲಿ ಆಡಿದ 'ಮೂರು ದಿನದ ಸಂತೆ' ಎಂಬ ನಾಟಕದಲ್ಲಿ ಇಬ್ಬರು ಗಂಡ-ಹೆಂಡತಿಯಾಗಿ ಅಭಿನಯಿಸಿದ್ದರು. ಅವರ ಮನೆಯಲ್ಲಿ ಅಂದಿನ ಕಾಲಕೀರ್ತಿಗೆ ಬ್ಲಾಕ್&ವೈಟ್ ಟೀವಿ ಸಹ ಇತ್ತು. ಈ ಕಾರಣದಿಂದಲೇ ಏನೋ ನಮ್ಮಪ್ಪ ಪ್ರತಿದಿನ ಇವರ ಮನೆಗೆ ತಪ್ಪದೆ ಹೋಗುತ್ತಿದ್ದರು.
                      ಮಲ್ಲಪ್ಪ ಶರಣರಿಗೆ ಇಬ್ಬರು ಮಕ್ಕಳು. ಮಗ-ಶಿವಾನಂದ , ಮಗಳು-ಶ್ರೀದೇವಿ . ನನ್ನ ತಮ್ಮ ೧ನೇ, ನಾನು ೨ನೇ, ಶ್ರೀದೇವಿ ಮೂರನೇ ಹಾಗೂ ಶಿವಾನಂದ ೪ನೇ ಕ್ಲಾಸಿನಲ್ಲಿ ಕ್ರಮೇಣವಾಗಿ ಓದುತ್ತಿದ್ದೆವು. ಒಂದು ದಿನ ಶಾಲೆಯಲ್ಲಿ ನಾಡಗೀತೆ ಹಾಡುವಾಗ ಎಲ್ಲರೂ ತಪ್ಪಿ ನಿಲ್ಲಿಸಿದಾಗ ನಾವಿಬ್ಬರೂ(ನಾನು-ಶಿವಾನಂದ) ನಿಲ್ಲಿಸದೇ ಹಾಡುತ್ತಿದ್ದಾಗ  ನಮ್ಮ ಗುರುಗಳು ನಮ್ಮಿಬ್ಬರನ್ನೂ ಗಮನಿಸಿ ಪ್ರಶಂಶಿಸಿದ ಕ್ಷಣ ಇನ್ನೂ ನೆನಪಿದೆ. [ನಮಗೆ ಪೂರ್ಣ ನಾಡಗೀತೆ ಹಾಡಿಸುವ ಕ್ರಮವಿತ್ತು]. ಶಿವಾನಂದ ಅತ್ಯಂತ ಪ್ರತಿಭಾವಂತ; ಎಲ್ಲದರಲ್ಲೂ ಮುಂದಿದ್ದ. ಓದು, ಚಿತ್ರಕಲೆ, ಆಟೋಟ ಹೀಗೆ ಪ್ರತಿಯೊಂದರಲ್ಲೂ ಉತ್ಸಾಹಪೂರ್ಣನಾಗಿ ಬೆರೆಯುತ್ತಿದ್ದ. ಒಮ್ಮೆ ತನ್ನ ತಂಗಿಯನ್ನು ಯಾರೋ ರೇಗಿಸಿದಕ್ಕೆ ಓಡಿಸಿಕೊಂಡು ಹೋಗಿ ತಾಕೀತು ಮಾಡಿದ ಘಳಿಗೆ ಮರೆಯುವಂತದಲ್ಲ.
                      ಅವರ ಹೊಲದಲ್ಲಿ ದ್ರಾಕ್ಷಿಯನ್ನು ಬೆಳೆದಿದ್ದರು. ಪ್ರತಿದಿನ ಒಟ್ಟಿಗೆ ಕುಳಿತು ಅಭ್ಯಸಿಸುತಿದ್ದೆವು. ಶಿವಾನಂದನಿಗೆ ನನ್ನನ್ನು ಕಂಡರೆ ಅಪಾರ ಪ್ರೀತಿ, ನನಗೂ ಅದೇನೋ ಗೌರವ,ವಾತ್ಸಲ್ಯ. ಮನೆಯಲ್ಲಿ ಯಾವುದೇ ಸಂತೆ, ಅದು-ಇದೂ ಏನೇ ಹೇಳಲಿ ನನ್ನನ್ನು ಜೊತೆಗೆ ಕರೆದೊಯ್ಯುವ ಹಂಬಲ ಆತನದು. ರಾಜ್ಯದ ಹಲವೆಡೆ ಭೀಕರ ಬರಗಾಲವಾಗಿತ್ತು, ಕೃತಕ ಮೋಡ ಬಿತ್ತನೆ (Artificial cloud seeding by silver iodide) ಹೆಲಿಕಾಪ್ಟರ್ನಿಂದ ನಡೆಯುತ್ತಿತ್ತು. ಈ ದೃಶ್ಯಗಳು ಉದಯವಾರ್ತೆಗಳಲ್ಲಿ ಪ್ರಸಾರವಾಗುತ್ತಿದ್ದವು.
                      ನಾನು ಪ್ರತಿದಿನ ನನ್ನ ತಂದೆಯ ಆಧ್ಯಾತ್ಮ ಗುರುಗಳ ಮನೆಗೆ ಹಾಲು ಕೊಟ್ಟು ಬರುತ್ತಿದ್ದೆ. ನಮ್ಮ ಹೊಲದಲ್ಲಿ ನಿಂಬೆಯನ್ನು ಬೆಳೆದಿದ್ದೆವು. ಬರಗಾಲದಿಂದ ತತ್ತರಿಸಿಸಿದ ವೇಳೆಯಲ್ಲೇ , ನನ್ನ ಅಪ್ಪ-ಅವ್ವ ಇಬ್ಬರೂ ಜತೆಗೂಡಿ ಬಾವಿಯಿಂದ ನೀರು ಹೊತ್ತು ಸಸಿಗಳನ್ನು ಪೋಷಿಸಿದ್ದರು. ದಿನಾಲೂ ಶಾಲೆಗೆ ತಪ್ಪದೇ ಹಾಜರಾಗಬೇಕಿತ್ತು, ಆಗುತ್ತಿದ್ದೆವೂ ಸಹ. ಒಂದು ದಿನ ಶಾಲಾಕೈಬೋರಿನಿಂದ ನೀರು ಕುಡಿಯುವಾಗ ನನ್ನ ಕೈಬೆರಳು ಬೋರ್ವೆಲ್  ನಡುವಲ್ಲಿ ಸಿಕ್ಕು, ತೋರುಬೆರಳು ಅಪ್ಪಚ್ಚಿಯಾಯಿತು. ಅದಕ್ಕೆ ಕಾರಣೀಭೂತಳಾದವಳು 'ಅಕ್ಕ ಶ್ರೀದೇವಿ'. ಆಕೆಯದು ಸಹ ಕೈಮೊಂಡಾಗಿತ್ತು; ಚಿಕ್ಕ ವಯಸ್ಸಿನಲ್ಲಿ ತೊಟ್ಟಿಲಲ್ಲಿ ಆಡುವಾಗ ವಿದ್ಯುತ್ ಸ್ಪರ್ಷಿಸಿದರಿಂದ ಹೀಗಾಗಿತ್ತು. "ನಿನ್ನದು  ಮೊದಲೇ ಕೈಮೊಂಡು, ಈಗ ನಿನ್ ಲಿಸ್ಟ್ಗೆ ಅವ್ನು ಸೇರ್ಸ್ಕೊಂಡಿಯಾ?"-ಎಂದು ಶಿವಾನಂದ ತನ್ನ ತಂಗಿಯನ್ನು ಬೈಯುತ್ತಿದ್ದ.
                        ಹೀಗಿರುವಾಗ ಒಮ್ಮೆಲೇ ನಮ್ಮ ಈ ಎರಡು ಕುಟುಂಬಗಳು ಬೆಂಗಳೂರಿಗೆ ವಲಸೆ ಬರಲು ನಿರ್ಧರಿಸಿದವು. ಈ ನಿರ್ಣಯ ಅದೊಂದು ರಾತ್ರಿಯಲ್ಲಿ ನಿರ್ಣಯವಾದತ್ತಿಂತ್ತು. ಮನೆಯಲ್ಲಿದ್ದ ದನ-ಕರು, ಕುರಿಮರಿ, ಕೋಳಿ ಎಲ್ಲವನ್ನೂ ನಾಲ್ಕಾರು ಕಾಸಿಗೆ ಮಾರಿ ಹೊಸದಿಕ್ಕಿನತ್ತ ಪಯಣ ಬೆಳೆಸಿದ್ದೆವು. ಸುಮಾರು ೪ ಗಂಟೆ ಮುಂಜಾವಿನಲ್ಲಿ  ಎಲ್ಲಾ ಸರಕು-ಸಾಮಗ್ರಿಗಳನ್ನು ಪ್ಯಾಕ್ ಮಾಡಿ, ಬೆಳಗು ಹರಿಯುವ ಮೊದಲೇ ಕಾಜಿಬೀಳಗಿ ಮಾರ್ಗವಾಗಿ ಬಿಜಾಪುರ ತಲುಪಿದ್ದೆವು. ಮೊದಲ ಬಾರಿ VRL ಬಸ್ಸನ್ನು ಹತ್ತಿದ ನೆನಪು. ನನ್ನನ್ನು-ತಮ್ಮನನ್ನು ಸೀಟಿನ ಕೆಳಭಾಗದಲ್ಲಿ ಮಲಗಿಸಿದ್ದರು. ನಾವು ಕಣ್ಬಿಡುವ ಮೊದಲೇ ಸಿಲಿಕಾನ್ ಸಿಟಿಗೆ ಕಾಲಿಟ್ಟಿದ್ದೆವು. ಟ್ರ್ಯಾಕ್ಟರ್ನಲ್ಲಿ ನಾವು ನೆಲೆಸಲು ಬಂದಿದ್ದ ಸ್ಥಳಕ್ಕೆ ಕರೆದೊಯ್ದರು. ಅದು ಕೆಂಗೇರಿ ಮಾರ್ಗವಾಗಿ ಬರುವ ರಾಮೋಹಳ್ಳಿ ಸಮೀಪದ ಲಕ್ಕಯ್ಯನ ಪಾಳ್ಯ ಗ್ರಾಮ. ಸುಮಾರು ೫೦ ಎಕರೆ ತೆಂಗಿನತೋಟದಲ್ಲಿ ನಮ್ಮ ವಾಸ್ತವ್ಯ..
                        ನಾವು ಬೆಂಗಳೂರಿಗೆ ಬಂದು ೪ ತಿಂಗಳಾದರೂ ನಮ್ಮ ವರ್ಗಾವಣೆ ಪತ್ರ ಬರಲೇ ಇಲ್ಲ. ಆದರೂ ಶಾಲೆಗೇ ಹೋಗೆಹೋಗುತ್ತಿದ್ದೆವು. ಮೊದಲ ದಿನವೇ ನಮ್ಮನ್ನು ತುಂಬಾ ವಿಶೇಷವಾಗಿ ಬರಮಾಡಲಾಯಿತು. ಗುರುಗಳು ನಮ್ಮ ಕಲಿಕೆಯ ಬಗ್ಗೆ ವಿಚಾರಿಸುತ್ತಾ "ಎಲ್ಲಿಯವರೆಗೆ ಮಗ್ಗಿ ಕಲಿತಿದ್ದೀರಿ?" ಎಂದು ಪ್ರಶ್ನಿಸಿದರು. ಅದಕ್ಕೆ ಶಿವಾನಂದ ೪೦ರವರೆಗೆ ಬರುತ್ತೆ ಸರ್ ಎಂದ; ನಾನಿದ್ದವನು "ಸರ್ ರೀ,ನಂಗ ೩೨ರ ಮಟ್ಟ ಅಷ್ಟ ಬರ್ತಾವ್ರಿ " ಅಂದೆ. ಏಕೋ ವಾತಾವರಣ ಗಲಿಬಿಲಿಗೊಂಡಂತೆ ಕಂಡಿತು. "ನಾನು ಅಂಕಿಗಳನ್ನಲ್ಲ ಕೇಳ್ತಿರೋದು,ಎರಡೊಂದ್ಲಾ ಎರಡು ಮಗ್ಗಿ" ಎಂದು ಪುನಃ ಮತ್ತೊಮ್ಮೆ ಪ್ರಶ್ನಿಸಿದರು. ಹೌದು ಸರ್ ಅದೇ ನಾವೂ ಹೇಳ್ತಿರೋದು ಎಂದು ಉತ್ತರಿಸಿದೆವು. (ಉತ್ತರಕರ್ನಾಟಕದ ಶಾಲೆಗಳಲ್ಲಿ ೩೦ರವರೆಗೆ ಮಗ್ಗಿ ಕಡ್ಡಾಯವಾಗಿರುತ್ತದೆ; ಆದರೆ ಬೆಂಗಳೂರಿನ  ಶಾಲೆಗಳಲ್ಲಿ ಇದು ೨೦ಕ್ಕೆ ಸೀಮಿತವಾಗಿತ್ತು). ನಾನು ಕೇವಲ ಎರಡನೇ ವರ್ಗದಲ್ಲಿಯೇ ಮೂವತ್ತು ರವರೆಗೆ ಮಗ್ಗಿಯನ್ನು ಉತ್ಸಾಹ ಪೂರ್ಣವಾಗಿ ಕಲಿತಿದ್ದೆ . ನಮ್ಮಲ್ಲಿ ಹಿರಿಯರ ಮುಂದೆ ಮಗ್ಗಿಯನ್ನು ಉಲ್ಟಾ ಸೀದಾ ತಪ್ಪಿಲ್ಲದಂತೆ ಹೇಳುವುದು ನಮ್ಮ ಕೌಶಲ್ಯಕ್ಕೆ ಹಿಡಿದ ಕೈಗನ್ನಡಿಯಂತೆ ಅಂದು ನಮಗೆ ಭಾಸವಾಗುತ್ತಿತ್ತು .
                ಮೊದಲನೇ ದಿನವೇ ನಾವು ಸಂಪೂರ್ಣ ಪರಿಚಿತರಾಗಿ ಬಿಟ್ಟೆವು. ಶಿವಾನಂದನು ಐದನೇ ವರ್ಗ, ಅವನಿಗೆ ಇಂಗ್ಲಿಷ್ ,ಸಮಾಜ ಎಂಬ ಎರಡು ಹೆಚ್ಚಿನ ವಿಷಯಗಳು ಬಂದಿದ್ದವು. ಅವನು ನೈಸರ್ಗಿಕವಾಗಿ ವಾತಾವರಣವನ್ನು ನೋಡಿ ಹೋಲಿಸಿ ಪಠ್ಯವನ್ನು ಕಲಿಯುತ್ತಿದ್ದ. ಐವತ್ತು ಎಕರೆ ತೋಟ ಬಿಟ್ಟರೆ ಆ ಪುಟ್ಟ ಗ್ರಾಮವಷ್ಟೇ ನಮಗೆ ಆಗ... ಸುಮಾರು ಐದರಿಂದ ಆರು ಕುಟುಂಬಗಳು ತೋಟದಲ್ಲಿದ್ದು ಎಲ್ಲರಿಗೂ ವಸತಿ ಸೌಲಭ್ಯವೂ ಇತ್ತು. ಶಿವಾನಂದನ ಮನೆಯು ಯಜಮಾನರ ಮುಖ್ಯ ಕಟ್ಟಡದ ಹತ್ತಿರವಿದ್ದುದರಿಂದ ಪ್ರತಿದಿನ ಬೆಳಗ್ಗೆ ರಂಗೋಲಿಯನ್ನು ಅವನೇ  ಹಾಕುತ್ತಿದ್ದನು. ಹೆಣ್ಣು ಮಕ್ಕಳು ನಾಚುವಂತೆ ರಂಗೋಲಿಯಲ್ಲಿ ಅಕ್ಷರ ಬರೆಯುತ್ತಿದ್ದನು.. ಬಸವಣ್ಣನ ವಚನಗಳನ್ನು ಮನನ ಮಾಡಿ ಹೇಳುತ್ತಿದ್ದನು. ಈ ಎಲ್ಲಾ ವಿಚಾರಗಳು ತೋಟದ ಯಜಮಾನನಿಗೆ ಅಚ್ಚುಮೆಚ್ಚು ಹಾಗಾಗಿ ಅವನಿಗೆ ಬಹುಮಾನವಾಗಿ ಪ್ರೋತ್ಸಾಹ ಧನ ಸಲ್ಲುತ್ತಿತ್ತು..
                  ಒಂದು ದಿನ ನಾನಾರೀತಿಯ ಸಸ್ಯ, ಗಿಡ-ಮರಗಳು, ಹೂ-ಹಣ್ಣುಗಳ ಪಟ್ಟಿ ಮಾಡುವ ಚಟುವಟಿಕೆ ನೀಡಿದ್ದರು. ಶಿವಾನಂದನು ನಮ್ಮೆಲ್ಲರನ್ನು ಕರೆದೊಯ್ದು, ಪಟ್ಟಿ ಮಾಡಲಾರಂಭಿಸಿದನು.. ಎಲ್ಲ ಮುಗಿದು ಮನೆ ಸೇರುವುದು ಸಂಜೆಯಾಗಿತ್ತು. ಮನೆಗೆ ಬಂದೊಡನೆ ವಿಶೇಷವಾಗಿ ಬೆತ್ತಪೂಜೆ ನಡೆಯುತ್ತದೆ.. ಅವರಪ್ಪ ಬಾಸುಂಡೆ ಬರೋ ಹಾಗೆ ಬಡಿದಿದ್ದರು. ನನಗೆ ಅದನ್ನು ಕಂಡು ಮರುಕ ಹುಟ್ಟಿತ್ತು; ಆದರೆ ಅವನಿಗದು ಅಗಣನೀಯ, ತಾನು ಸುತ್ತಿ ಪಟ್ಟಿ ತಯಾರಿಸೆದನಲ್ಲ ಎಂಬ ಸಂತಸ..ಅವನ ಗಟ್ಟಿತನ, 'passion towards his work' ಪ್ರತಿಯೊಬ್ಬರನ್ನು ಹುರಿದುಂಬಿಸುವಂತಿತ್ತು...
                    ನನಗೆ ಇನ್ನೂ ನೆನಪಿರುವಂತೆ, ಅವನದು ಮುತ್ತು-ರತ್ನದಂತಹ ಬರೆವಣಿಗೆ. ಅದರಲ್ಲೂ ಕನ್ನಡವನ್ನು ಮುತ್ತ ಪೋಣಿಸಿದ ಹಾಗೆ ಹೊತ್ತಿಗೆಯ ಪುಟಗಳಲ್ಲಿ ಹರಡುತ್ತಿದ್ದನು. ಒಮ್ಮೆ ತನ್ನ ಶಾಲೆಯಲ್ಲಿ(ಕೇತೋಹಳ್ಳಿ) ಕೃಷ್ಣನ ಚಿತ್ರವನ್ನು ತನ್ನ ಕುಂಚದಲ್ಲಿ ಅರಳಿಸಿದ್ದನು... ಆ ಚಿತ್ರವನ್ನು ಕೆಲವು ವರ್ಷಗಳ ಕಾಲ ಶಾಲಾ ತರಗತಿಯಲ್ಲಿ ನೇತುಹಾಕಿದ್ದನ್ನು ನಾ ನೋಡಿದ್ದೆ.. ಕ್ರಿಕೆಟ್ ಆಟ ಆಡುವ ಆಕರ್ಷಣೆ ಅವನಿಂದಲೇ ಹುಟ್ಟಿದ್ದು.. ಕೆಲ ತಿಂಗಳುಗಳ ನಂತರ ಅವರ ಕುಟುಂಬ 50 ಎಕರೆ ಬೃಹತ್ ತೋಟ ಬಿಟ್ಟು, ಒಂದೆರಡು ಮೈಲಿ ದೂರದಲ್ಲಿದ್ದ 'ದಿ ಬ್ಯಾನಿಯನ್ ಕೌಂಟಿ' ಎಂಬಲ್ಲಿ ಬೀಡು ಬಿಟ್ಟಿತು.. ಅಲ್ಲಿ ಸ್ವಿಮ್ಮಿಂಗ್ ಫೂಲ್ನಲ್ಲಿ ಪ್ರಥಮ ಬಾರಿಗೆ ನೀರಲ್ಲಿ ಆಟವಾಡಿ ಸಂಭ್ರಮಿಸಿದ ಕ್ಷಣಗಳು, ಹಸಿರಾದ ಗರಿಯ ಮೇಲೆ ಕ್ರಿಕೆಟ್ ಆಡುತ್ತಿದ್ದ ನೆನಪುಗಳು ಅಚಲವಾಗಿ ಕಣ್ಣಿನಲ್ಲೇ ಸೆರೆಯಾಗಿವೆ.. ಅಲ್ಲಿನ ವಿದೇಶಿ ಸಂಸ್ಕೃತಿ ನನ್ನನ್ನು ಮೂಕವಿಸ್ಮಿತಗೊಳಿಸಿತ್ತು...
                      ಆ ವೇಳೆಗಾಗಲೇ ನಾವು ಒಂದೆಡೆ ನೆಲೆ ನಿಲ್ಲಲು ಪರದಾಡುವಂತಾಗಿತ್ತು. ಕೇವಲ ಎರಡು ವರ್ಷಗಳ ಅವಧಿಯಲ್ಲಿ 2-3 ಶಾಲೆ ಬದಲಾಯಿತು.. ರಾಮೋಹಳ್ಳಿಯ ಬೃಹತ್ ನಾಗದೇವಾಲಯದ ಪ್ರಾರಂಭಿಕ ಕಟ್ಟಡ ನಿರ್ಮಾಣ ಹಂತದಲ್ಲಿ ನಾವೂ ಭಾಗಿಯಾಗಿದ್ದೆವು. ಆನಂತರ ದೊಡ್ಡ ಆಲದ ಮರದ ಒಂದು ಎಸ್ಟೇಟ್ಗೆ ಬಂದ ನೆನಪಿದೆ. ಇಂತಿರುವಾಗಲೇ ಶಿವಾನಂದರ ಕುಟುಂಬ ತುಮಕೂರಿನ ಒಬ್ಬರ ತೋಟಕ್ಕೆ ವರ್ಗವಾಯಿತು. ಆದರೆ ಶ್ರೀದೇವಿ-ಶಿವಾನಂದರ ಪರೀಕ್ಷೆ ಮುಗಿದಿರಲಿಲ್ಲ.. 2-3 ತಿಂಗಳು ಅವರ ತೋಟದ ಮಾಲೀಕರ ತಂದೆಯ ಮನೆಯಲ್ಲಿ (ದೊಡ್ಡಾಲ ಮರದ) ಉಳಿದು ನಂತರ ತುಮಕೂರು ಸೇರಿದರು..
                         ಅವರು ತುಮಕೂರಿಗೆ ಹೋಗಿದ್ದೆ, ಹೋಗಿದ್ದು; ಹತ್ತಿರವಾಗಿದ್ದವರು ಕ್ರಮೇಣ ಅಪರೂಪವಾದರು.. ಅವರು ಸಿದ್ಧಗಂಗಾ ಕ್ಷೇತ್ರದಿಂದ ಸುಮಾರು ಆರೇಳು ಕಿ.ಮೀ ದೂರದಲ್ಲಿರುವ, ಕ್ಯಾತ್ಸಂದ ಮಾರ್ಗವಾಗಿ ಬರುವ ಒಂದು ಎಸ್ಟೇಟ್ನಲ್ಲಿದ್ದರು.. ವಾಸಿಸಲು ಯೋಗ್ಯವಾದ 2 ಕೊಠಡಿಗಳು ಹಾಗೂ ಒಂದು ದನದ ಕೊಠಡಿಯೂ ಸಹ ಇತ್ತು. ಕೇವಲ ಎರಡು ಎಕರೆ ಜಮೀನು, ಸೊಗಸಾದ ಪರಿಸರದಲ್ಲಿ ಇವರ ಜೀವನ ಸಾಗುತ್ತಿತ್ತು. ಒಳಕೊಠಡಿಯಲ್ಲಿ ಅಣ್ಣ-ತಂಗಿಯರು ಓದಲು ಮಾಡಿಕೊಂಡಿದ್ದ ಜಾಗ ಅದ್ಭುತ.. ತಮ್ಮಲ್ಲಿದ್ದ, ಕೈಗೆಟಕುವ ಸಾಮಗ್ರಿಗಳಿಂದಲೇ ಮೇಜು, ಖುರ್ಚಿಗಳಂತಹ ವಸ್ತುಗಳನ್ನು ನಿರ್ಮಿಸಿದ್ದರು..
                          ಶಿವಾನಂದಣ್ಣ ಅಲ್ಲಿಗೆ ಹೋದಾಗ ಬಹುಶಃ7ನೇ ತರಗತಿ, ಅವರ ಹೊಲದ ಯಜಮಾನರೇ ಇವನ ಓದಿನ ಶ್ರದ್ಧೆ ಕಂಡು ಇವನಿಗೆ ಓದಿಗೆ ಬೇಕಾದ ಎಲ್ಲಾ ಖರ್ಚನ್ನು ಭರಿಸಿದ್ದರು.. ಅಂದಿನ ದಿನಮಾನಗಳಲ್ಲೇ ಅವನನ್ನು 14 ಸಾವಿರ ಡೊನೇಷನ್ ಕಟ್ಟಿ ಆಂಗ್ಲಮಾಧ್ಯಮ ಶಾಲೆಗೆ ದಾಖಲು ಮಾಡಿದ್ದರು. ಆಗ ನಮ್ಮ ತಂದೆ-ತಾಯಿಯರಿಗೆ ನೀಡುತ್ತಿದ್ದ ಸಂಬಳವೇ ಮಾಸಿಕ 3-4 ಸಾವಿರವಾಗಿರುತ್ತಿತ್ತು. ಅಂದರೇ ಆ ಡೊನೇಷನ್ ನಮ್ಮಂಥ ಬಡಕೂಲಿಕಾರ್ಮಿಕರಿಗೆ 4 ತಿಂಗಳು ದುಡಿದು ಸಂಪಾದಿಸುವ ಹಣ. ಈ ರೀತಿಯಾಗಿ ಈ ಕುಟುಂಬ ತುಮಕೂರಿನಲ್ಲಿ ಬೀಡು ಬಿಟ್ಟಿತು. ಆ ಸಂದರ್ಭದಲ್ಲೇ ನನ್ನ ಕುಟುಂಬ ದೊಡ್ಡಾಲಮರವನ್ನು ಬಿಟ್ಟು ಕಟ್ಟಕಡೆಗೆ ತಾವರೆಕೆರೆಗೆ ಬಂದು ನೆಲೆಯೂರಿತು. ಮುಂದೆ ಇದೇ ಊರಿನಲ್ಲಿ ನನ್ನ ಮಾಧ್ಯಮಿಕ ಶಿಕ್ಷಣ (4-7) ಪೂರ್ಣಗೊಳ್ಳುತ್ತದೆ.. 
                           ನನ್ನ ಬುದ್ಧಿಗೆ ತಿಳಿದಂತೆ, ಆ ಕುಟುಂಬ ತುಮಕೂರಿಗೆ ಹೋದ ಬಳಿಕ ಸುಮಾರು ಐದಾರು ಬಾರಿ ನಾವು ಅವರು ಪರಸ್ಪರ ಭೇಟಿಯಿತ್ತಿರಬಹುದು. ನಾನು ಕಡೆಯ ಭಾರಿ ಅವರಿದ್ದ ಆ ಊರಿಗೆ ಹೋಗಿದ್ದು ಸ್ಪಷ್ಟವಾಗಿ ನೆನಪಿದೆ. ಕಾರಣ ಇಷ್ಟೇ, ಸಹೋದರಿ ಶ್ರೀದೇವಿ ಅಕ್ಕನವರ ಧಾರ್ಮಿಕ ಕ್ರಿಯೆಗಾಗಿ. ಒಂದೆರಡು ದಿನಗಳ ಕಾಲ ಅಲ್ಲೇ ಇದ್ದ ನೆನಪು. ಧಾರ್ಮಿಕ ವಿಧಿ ವಿಧಾನಗಳೆಲ್ಲವೂ ನೆರವೇರಿದ್ದವು. ಅಂದು ದೂರದರ್ಶನದಲ್ಲಿ ನೋಡಿದ ಎರಡು ವಿಚಾರಗಳು ಇನ್ನೂ ನೆನಪಿದೆ; 
●ಅಂದಿನ ಪ್ರಧಾನಿ 'ಮನಮೋಹನ್ ಸಿಂಗ್' ಸತತ  ಎರಡನೇ ಬಾರಿ ಪ್ರಧಾನಿಯಾಗಿ ಆಯ್ಕೆಗೊಂಡು ಗಿನ್ನಿಸ್ ದಾಖಲೆ ಸೃಷ್ಟಿಸಿದ್ದರು. 
●ಕೊನೆಯ ಎಸೆತದಲ್ಲಿ ಮುಂಬೈ ಇಂಡಿಯನ್ಸ್ ಗೆಲ್ಲಲು 2 ರನ್ ಅವಶ್ಯವಿದ್ದಾಗ ಕಿಂಗ್ಸ್ ಪಂಜಾಬ್ ನ ನಾಯಕ 'ಯುವರಾಜ್ ಸಿಂಗ್', ಜಾಂಟಿ ರೋಡ್ಸ್ ಶೈಲಿಯಲ್ಲಿ ವಿಕೆಟ್ಗೆ ಎಗರಿ ಎದುರಾಳಿ ತಂಡದ ಆಟಗಾರನನ್ನು ರನೌಟ್ ಬಲೆಗೆ ಕೆಡವಿ, ತನ್ನ  ತಂಡ ಒಂದು ರನ್ನಿಂದ ಗೆಲ್ಲಲು ಸಹಕಾರಿಯಾಗಿದ್ದರು..
                         ಇದಕ್ಕೂ ಮುನ್ನ ಒಮ್ಮೆ ಅವರ ಕುಟುಂಬ ಸದಸ್ಯರೆಲ್ಲರೂ ನಾವಿದ್ದ ಮೇಟಿಪಾಳ್ಯದ ತೋಟಕ್ಕೆ ಆಗಮಿಸಿದ್ದರು. ಕಾರಣ ಅಸ್ಪಷ್ಟವಾಗಿದ್ದರೂ, ಅವರೊಂದಿಗೆ ಕಳೆದ ಆ ಘಳಿಗೆ, ಕೆಲ ಘಟನೆಗಳು ಇನ್ನೂ ನನ್ನ ಸ್ಮೃತಿ ಪಟಲದಲ್ಲಿ ಅಚ್ಚಳಿಯದೇ ಸೆರೆಯಾಗಿವೆ. ಅಂದಿನ ದಿನಮಾನಗಳಲ್ಲಿ ನನಗೆ ಹಾಗೂ ನನ್ನ ತಮ್ಮನಿಗೆ ಕ್ರಿಕೆಟ್ ಎಂದರೆ ಊಟ, ನೀರು, ಆಹಾರ ಎಲ್ಲಾ!! ಇಬ್ಬರೇ ಇದ್ದರೂ ಆಡುತ್ತಿದ್ದೆವು. ಅಂದು ನಾವೇ ತಯಾರಿಸಿದ್ದ ತೆಂಗಿನ ಬ್ಯಾಟ್ನಲ್ಲಿ ಆತನೊಡಗೂಡಿ ಕ್ರಿಕೆಟ್ ಆಡಿದ್ದೆವು. ನಾವಿದ್ದ ತೋಟದ ಮುಂಭಾಗದ ಬೀಳಿನಲ್ಲಿ(ಅದೇ ಜಾಗ ಪ್ರಸ್ತುತ 30-40 ಲಕ್ಷಕ್ಕೆ ಬಿಕರಿಯಾಗುವ ನಿವೇಶನಗಳಾಗಿ ಮಾರ್ಪಾಟಾಗಿದೆ) ಆಡುತ್ತಿದ್ದೆವು. ತಾನು ತುಮಕೂರಿಗೆ ಹೋಗಿದ್ದು, ಅಲ್ಲಿ ಹೆಚ್ಚು ಸಮಯ ಕ್ರಿಕೆಟ್ ಆಡಲು ಅವಕಾಶ ಸಿಗದೆ ಇದ್ದರೂ, ಇನ್ನೂ ಕೇತೋಹಳ್ಳಿಯಲ್ಲಿ ಆಡಿ ಬೆಳೆದ ಕ್ರಿಕೆಟ್ ಮರೆತಿಲ್ಲವೆಂಬಂತೆ ಕಡೆಯ ಇನ್ನಿಂಗ್ಸ್ನಲ್ಲಿ ಬೌಂಡರಿ ಆಟವಾಡುವ ಮೂಲಕ ಗಮನ ಸೆಳೆದಿದ್ದ ಶಿವಾನಂದ! ರಾತ್ರಿಯ ವೇಳೆ ಊಟದ ಸಮಯ ಅವರೇ ಮೊಸರನ್ನು ತಂದಿದ್ದರು ಅನ್ಸುತ್ತೆ, ಅದು ಮಂಜುಗೆಡ್ಡೆಯ ರೀತಿ ಗಟ್ಟಿಯಾಗಿ ಶೇಖರಣೆಯಾಗಿತ್ತು. ಅದನ್ನು ಹೇಗೆ ಅಲ್ಲಾಡಿಸಿ, ದ್ರವರೂಪಕ್ಕೆ ಪರಿವರ್ತಿಸಿ ಸೇವಿಸುವುದು? ಎಂಬುದನ್ನು ಯೋಚಿಸುತ್ತಾ ಬಾಯಿ ಬಿಟ್ಕಂಡು ಕುಳಿತ್ತಿದ್ದೆವು. ಕಡೆಗೆ ಅಮ್ಮ ಕೈಯಿಂದಲೇ ಅದನ್ನು ಶೇಕ್ ಮಾಡಿ ಊಟಕ್ಕೆ ಬಡಿಸಿದ್ದರು. ಅಲಲೇ ಅನುಭವವಿದ್ದರೆ ಚಮಚದ ಅವಶ್ಯಕತೆಯಿಲ್ಲ ಎಂಬುದು ಮನವರಿಕೆಯಾಯಿತು.. 
                       ಮನೆಯಲ್ಲಿ ನಾನು ಬೆಳಿಗ್ಗೆ ಬೇಗ ಏಳದಿದ್ದಾಗ ಸರ್ವೇಸಾಮಾನ್ಯವಾಗಿ ಕೇಳಿ ಬರುತ್ತಿದ್ದ ಕೆಲಮಾತುಗಳಿದ್ದವು. "ಶಿವಾನಂದ ಪ್ರತಿನಿತ್ಯ ನಾಲ್ಕು ಗಂಟೆಗೆ ಎದ್ದು , ಸ್ನಾನಾದಿಗಳನ್ನು ಮುಗಿಸಿ ಮನೆಯಿಂದ ಬೈಸಿಕಲ್ನಲ್ಲಿ ಸುಮಾರು 8-10 ಕಿ.ಮೀ ಸಂಚರಿಸಿ ಮನೆಪಾಠಕ್ಕೆ ಹೋಗುತ್ತಾನೆ, ನಂತರ ಪುನಃ ಸೈಕಲ್ನಲ್ಲೇ ಹಿಂದಿರುಗುತ್ತಾನೆ. ನೀವು ಎದ್ದು ಅಷ್ಟು ದೂರ ಸೈಕಲ್ ಸವಾರಿ ಮಾಡುವುದಿರಲಿ, ಕಣ್ಣೇ ಬಿಡಲ್ವಲ್ಲ".  ಅದೇಕೋ ಈ ಮಾತುಗಳು ನನ್ನನ್ನು ಬಹಳಷ್ಟು ದಿನಗಳ ಕಾಲ ಮುಜುಗರ, ನಾಚಿಕೆಗೇಡಾಗುವಂತೆ ಮಾಡಿದ್ದವು. ಆದರೆ ನನ್ನನು ಶಿವಾನಂದನಿಗೆ ಹೋಲಿಸಿ ಬೈಯುತ್ತಿದ್ದು ನನಗ್ಯಾವತ್ತು ಬೇಸರ ತರಲಿಲ್ಲ. ಅವನ ಪ್ರತಿನಿತ್ಯದ ಆ ಶ್ರಮವನ್ನು ನಾನು ಮನಸ್ಸಲ್ಲೇ ಶ್ಲಾಘಿಸುತ್ತಿದ್ದೆನಾದ್ರೂ ಆ ಬೈಗುಳವನ್ನು ಛಲದಿಂದ ಸ್ವೀಕರಿಸಿ ಬೆಳಿಗ್ಗೆ ಬೇಗ ಏಳಬೇಕೆಂಬ ನಿಲುವನ್ನು ಬೆಳೆಸಿಕೊಳ್ಳಲೇ ಇಲ್ಲ. ಹಾಗೆ ಮಾಡಿದ ನಿರ್ಧಾರವೊಮ್ಮೆ 3 ದಿನಗಳಿಗೆ ಸೀಮಿತಗೊಂಡು ಮುಂದೆ ಸಾಗಲಿಲ್ಲ..       
             ಹೀಗಿರುವಾಗ, ಆತನ ಶಿಕ್ಷಣ ಸಹ ಮೆಟ್ರಿಕ್ ಹಂತ ತಲುಪಿತ್ತು. 10ನೇ ವರ್ಗದ ಪರೀಕ್ಷೆಯಲ್ಲಿ ಆತ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದ. ತಂದೆ ತಾಯಿ ಮನೆ ಮಂದಿಗೆಲ್ಲಾ ಹಿಗ್ಗೇ-ಹಿಗ್ಗು. ಮುಂದೆ ಡಿಪ್ಲೊಮಾ ಮಾಡಲು ನಿರ್ಧರಿಸಿದ. ತಾನು 1 ರಿಂದ 10 ರವರೆಗೆ ಕಲಿತ ಎಲ್ಲಾ ಶಿಕ್ಷಣ ಸಂಸ್ಥೆ ಶಾಲೆಗಳಿಂದ ಸ್ಟಡಿ ಸರ್ಟಿಫಿಕೇಟ್ ಹೊತ್ತೊಯ್ಯಬೇಕಿತ್ತು. ಇದಕ್ಕಾಗಿಯೇ ಅಪ್ಪನೊಡಗೂಡಿ ನೆಲಮಂಗಲ ಮಾರ್ಗವಾಗಿ ತಾವರೆಕೆರೆಗೆ ಬಂದಿದ್ದರು. ಅಲ್ಲಿಂದ ಕೇತೋಹಳ್ಳಿಗೆ ತೆರಳಿ ತಮ್ಮ ಎಲ್ಲಾ ದೃಢೀಕೃತ ಪತ್ರಗಳನ್ನು ಬರೆಸಿಕೊಂಡು ನಮ್ಮ ಮನೆಗೆ ಆಗಮಿಸಿದ್ದರು. ಅಂದೂ ಸಹ ಅವನಲ್ಲಿ ಉತ್ಸಾಹ ಎಂದಿನಂತೆ ಮನೆ ಮಾಡಿತ್ತು. ತನ್ನ ಶಿಕ್ಷಣ, ಮುಂದಿನ ದಾರಿ ಮುಂತಾದ ವಿಷಯಗಳ ಬಗ್ಗೆ ಮಾತಾಡಿದೆವು. ಅಕ್ಕರೆಯ ಸಲಹೆ ಸೂಚನೆಗಳನ್ನು ನೀಡಿದ ಶಿವಾನಂದ, ಸಮಯವಾಯಿತು ಬರುತ್ತೇನೆಂದು ಹೇಳಿ ಹೊರಟು ಹೋದ. ಆದರೆ ಅದುವೇ ನನ್ನ ಅವನ ಅಂತಿಮ ಭೇಟಿ ಎಂದು ನಾನೆಂದೂ ಕನಸು-ಮನಸಲ್ಲೂ ಊಹಿಸಿರಲಿಲ್ಲ.
             ಅಂದು ಮುಂಜಾನೆ ಸುಮಾರು 5:30 ರ ಸಮಯ, ಅಮ್ಮ ಯಾರದೋ ಫೋನಿಗೆ ಗೊಣಗುತ್ತಿದ್ದಂತಿತ್ತು. ನಾವು ಇನ್ನೂ ಹಾಸಿಗೆಯಲ್ಲಿದ್ದೆವು. "ಅಮ್ಮ, ಎಲ್ಲಿ? ಯಾವಾಗ? ಯಾಕೆ ಹೀಗಾಯಿತು?" ಎಂತೆಲ್ಲಾ ಗೋಗರೆಯುತ್ತಿದ್ದರು. ಆ ಶಬ್ಧಗಳು ನನ್ನ ಕರ್ಣಗಳಿಗೆ ಅಪ್ಪಳಿಸಿದವು. ಎಂದೂ ಅನುಭವಿಸದ ಯಾತನೆಯು ನಿದ್ರಾವಸ್ಥನಾಗಿದ್ದ ನನ್ನನ್ನು ಘಾಸಿಗೊಳಿಸಿತ್ತು. ಹೌದು ಆ ಯಾತನೆ, ಒಳದುಃಖ, ಕಣ್ಣೀರಿಲ್ಲದ ಒಣದುಃಖ, ಮನಸ್ಸು ಭಾರವಾದಂತ ಸ್ಥಿತಿಗಳು ನನ್ನನ್ನು ತೀವ್ರ ಹತಾಶೆಗೆ ಕೊಂಡೊಯ್ದವು. 
ಆಗಿದ್ದಿಷ್ಟೇ.........
            ಅಂದು ಸ್ವಾತಂತ್ರ್ಯ ದಿನೋತ್ಸವ, ಅಣ್ಣತಂಗಿ ಈರ್ವರು ಜತೆಯಲ್ಲೇ ತಮ್ಮ-ತಮ್ಮ ಕಾಲೇಜು-ಶಾಲೆಗೆ ಹೋಗಿದ್ದರು. ಅಂದಿನ ದಿನದ ಕಾರ್ಯಕ್ರಮಗಳು ಮುಗಿದ ಮೇಲೆ ಶಿವಾನಂದನು ಆತನ ಸ್ನೇಹಿತರೊಡಗೂಡಿ ಸಿನಿಮಾ(ರಾಜ್) ನೋಡಲು ತೆರಳಿದ್ದನಂತೆ. ಅಣ್ಣನ ದಾರಿ ಕಾದು-ಕಾದು ಕಡೆಗೆ ತಂಗಿಯೊಬ್ಬಳೇ ಮನೆಗೆ ಹಿಂತಿರುಗಿ ಬಂದಿದ್ದಾಳೆ.. ಅಣ್ಣನ ಅನುಪಸ್ಥಿತಿಯ ಕುರಿತು ವಿವರಿಸಿದ್ದಾಳೆ. ಈತನ ಹುಂಬು ನಿರ್ಧಾರದ ಕುರಿತು ಕೆಲ ಕಾಲ ಚರ್ಚೆಯಾಗಿದ್ದಿರಬೇಕು. ನಂತರ ಸಿನಿಮಾ ಮುಗಿಸಿ ಬಂದ ಶಿವಾನಂದ ಬೈಗುಳಗಳಿಗೆ ಗುರಿಯಾದನಂತೆ. ತನ್ನ ತಂದೆ ಏನೇನು ಬೈದನೋ ಸರಿಯಾದ ಮಾಹಿತಿ ಇಲ್ಲ. ಅವರು ಇವರು ಹೇಳಿದ ಪ್ರಕಾರ "ತಂಗಿಯನ್ನು ಒಂಟಿಯಾಗಿ ಬಿಟ್ಟು ಸಿನಿಮಾ ನೋಡಲು ಹೋಗಿದ್ದಿಯಾ!? ನಿನಗಿದೆ ತಾಳು.. ನಾಳೆ ನಿನ್ನ ಕಾಲೇಜಿಗೆ ಬಂದು ಎಲ್ಲರೆದುರು ನಿನ್ನ ಮಾನ ಕಳಿತಿನಿ" ಎಂದಷ್ಟೇ ಗದರಿದನಂತೆ.. ಈ ಮಾತುಗಳನ್ನು ಆಲಿಸಿದ ಶಿವಾನಂದ ತಮ್ಮ ತೋಟದ ಕೃಷಿ ಸಾಮಾನುಗಳನ್ನಿಟ್ಟಿದ್ದ ಕೊಠಡಿಗೆ ತೆರಳಿ ಅಲ್ಲೇ ಇಟ್ಟಿದ್ದ ಕೀಟನಾಶಕವನ್ನೆತ್ತಿ ಕುಡಿಯಲಾರಂಭಿಸಿದನಂತೆ. ಇದನ್ನು ಕಣ್ಣಾರೆ ಕಂಡ ಆತನ ತಾಯಿ ಏನೂ ತಿಳಿಯದೇ, ಕಕ್ಕಾಬಿಕ್ಕಿಯಾಗಿ ನಿಂತಲ್ಲೇ ಕುಸಿದು ಬಿದ್ದಳಂತೆ. ಈ ಸಂದರ್ಭದಲ್ಲಿ ಇವರಪ್ಪ ಇವನೊಡಗೂಡಿ ಸಿನಿಮಾಗೆ ಹೋಗಿದ್ದ ಸ್ನೇಹಿತರ ವಿಚಾರಿಸಲು ಹೋಗಿದ್ದನಂತೆ. ಪರಿಸ್ಥಿತಿ ಕೈಮೀರುವ ಮೊದಲೇ ಒಂದು ಆಟೋ ಹಿಡಿದು ಆಸ್ಪತ್ರೆಗೆ ಸಾಗಿಸಿದರಂತೆ. ಈ ಹೊತ್ತಿಗಾಗಲೇ ಕೀಟನಾಶಕದ ನಂಜು ಶರೀರವನ್ನಾವರಿಸಿತ್ತು. ಕಂಡರಿಯದ ಕ್ಷಣವೊಂದು ಕಣ್ಮುಂದೆ ಕುಣಿಯುತ್ತಿತ್ತು. ಪಾಷಾಣದ ಚಿತ್ರಹಿಂಸೆಗೆ ಜೀವ ನರಳಿ ನರಳಿ ಕೊನೆಯುಸಿರೆಳೆದಿತ್ತು. ಅಂದು ಅತ್ಯಂತ ಭೀಕರವಾದ ವಿಷಯವೊಂದು ನನ್ನೆದೆಯ ಅಪ್ಪಳಿಸಿತ್ತು. ಈ ಎಲ್ಲ ವಿದ್ಯಮಾನಗಳಲ್ಲಿ ನನ್ನನ್ನು ತೀವ್ರ ಕಾಡಿದ ವಿಚಾರವೆಂದರೆ, 'ಆತ ತನ್ನ ಅವಸಾನ ಕಾಲದಲ್ಲಿ ನರಳುತ್ತಾ ಹೊರಳಾಡಿ ಪ್ರಾಣತೆತ್ತನೆನ್ನುವುದು'. ಹೀಗೆ ನೂರಾರು ಅಂತೆ-ಕಂತೆಗಳು ಅವನ ಕಡೆ ಘಳಿಗೆಯನ್ನು ವಿವರಿಸಲ್ಪಡುತ್ತಿದ್ದವು. ದುಃಖದ ನಡುವಣ ಹೀಗೆ ಕೆಲಮಾತುಗಳು ಕಿವಿಗೆ ಬೀಳುತ್ತಿದ್ದದ್ದುಂಟು. "ಕಡೆ ಕ್ಷಣಗಳಲ್ಲಿ ಯಾವುದೇ ವ್ಯಕ್ತಿಯಾದರೂ ಸಹ ತನ್ನ ಪ್ರೀತಿಸುವ ಜೀವಗಳನ್ನು ಒಮ್ಮೆಯಾದರೂ ನೆನಪುಮಾಡಿಕೊಂಡಿರುತ್ತಾನೆ. ಜತೆಗೆ ತನ್ನ ಶೋಚನೀಯ ಸ್ಥಿತಿಯನ್ನು ಕಂಡು ಅಸಹಾಯಕನಾಗಿರುತ್ತಾನೆ" ಹೀಗೆ ಮನೆಯವರೆಲ್ಲರೂ ಮಾತಾಡಿಕೊಳ್ಳುತ್ತಿದ್ದರು. ಆತ ಕಡೆ ಕಾಲದಲ್ಲಿ ನನ್ನ ಬಗ್ಗೆಯೂ ನೆನೆದಿರಬಹುದೇ! ಈ ಪ್ರಶ್ನೆಗೆ ಉತ್ತರ ಯಾರಿಂದ ಬಯಸಲೀ?
            ಅಂದಿನ ಸಂದರ್ಭದಲ್ಲಿ ನನಗೆ ಯಾರದು ತಪ್ಪು? ಯಾರದು ಸರಿ? ಎಂದು ನಿರ್ಣಯಿಸುವುದಿರಲಿ ಕಟುಸತ್ಯವನ್ನೇ ನಂಬಲಾಗಲಿಲ್ಲ. ಕೆಲವೊಮ್ಮೆ ದುಃಖದ ಭರದಲ್ಲಿ " ಬಂಗಾರದಂತ ಹುಡುಗ. ವಿಷಸೇವಿಸುವಷ್ಟು ಅವಿವೇಕಿಯಲ್ಲ. ಅವನು ನಂಜನ್ನೇ ಕುಡಿವಷ್ಟು ಜಿಗುಪ್ಸೆಗೊಂಡಿದ್ದಾನೆ ಎಂದರೆ ಮನೆಯವರು ಏನೋ ಅನ್ನಬಾರದ್ದು ಅಂದಿದ್ದಾರೆ." ಎಂಬ ಕೊರಗು ವ್ಯಕ್ತವಾಗುತ್ತಿತ್ತು. ನಾನು ನನ್ನಲ್ಲೇ ಪರಾಮರ್ಶಿಸಿಸುತ್ತಿದ್ದೆ. ಭಗವಂತ ನೀಡಿರುವ ಈ ಭವ್ಯವಾದ ಬದುಕು, ತನ್ನ ಪ್ರೀತಿಪಾತ್ರರೆಲ್ಲರನ್ನೂ ಮರೆತು ತಮ್ಮ ಪ್ರಾಣಪಕ್ಷಿಯನ್ನೇ ಹಿಂಸಿಸುವ ಧೈರ್ಯ, ಜಿಗುಪ್ಸೆ ಜನರಲ್ಲಿ ಪ್ರಾಪ್ತವಾಗುವುದೇ?! ಈ ವಿಚಾರಗಳಿಗೆ ನನ್ನಲ್ಲಿ ಉತ್ತರವಿರಲೀ ಊಹೆಯು ಏರ್ಪಡಲಿಲ್ಲ. ಹೀಗೂ ಅನ್ನಿಸುತ್ತಿತ್ತು. ಆ ದುಷ್ಟ ವಿದ್ಯಮಾನಗಳು ಮನಸ್ಥಿತಿಯ ಸಂಯಮವನ್ನೇ ನುಚ್ಚುನೂರಾಗಿಸಿ, ತಮ್ಮನ್ನು ಅವಸಾನಗೊಳಿಸುವ ಕಾಲವೇ ಬಂದೊದಗಿದ್ದರೆ ಯಾರು ತಾನೇ, ಏನು ಮಾಡಿಯಾರು? ಎಲ್ಲ ಕಾಲದ ನಿಯಮ!

                    (ಚಿತ್ರಕೃಪೆ: ಅಂತರ್ಜಾಲ)

            ಮುಂದೆ ಅವನ ಪಾರ್ಥೀವವನ್ನು ನಮ್ಮೂರಿಗೆ ಕೊಂಡೊಯ್ದು ಅಗ್ನಿಗೆ ಸ್ಪರ್ಶಿಸಲಾಯಿತು. ನಾನು, ಅಮ್ಮ, ತಮ್ಮ ಯಾರೂ ವಿಧಿ ವಿಧಾನಗಳಿಗೆ ಹೋಗಲಾಗಲಿಲ್ಲ. ಅಪ್ಪ ಮಾತ್ರ ಹೋಗಿ ಕಾರ್ಯ ಮುಗಿಸಿ ಬಂದರು. ತಾನು ಆಡಿ ಬೆಳೆದ ಹೊಲದಂಚಿನಲ್ಲೇ ಅವನ ದೇಹ ಪಂಚಭೂತಗಳಲ್ಲಿ ಲೀನವಾಯಿತು. ನಾನು ಎಷ್ಟೋ ಬಾರಿ ಊರಿಗೆ ಹೋಗಿ ಬಂದಿದ್ದೇನೆ, ಆದರೆ ಒಮ್ಮೆಯೂ ಆತನ ಸಮಾಧಿಯ ಬಳಿ ಹೋಗಿಲ್ಲ. ಸುಮಾರು ಬಾರಿ ಹತ್ತಿರುವಿರುವ ಪವಿತ್ರಸ್ಥಳ ಕೂಡಲ ಬಳಿಯೇ ಸಾಗಿ ಬಂದಿದ್ದೇನೆ. ಇದರ ಹೊರತಾಗಿಯೂ ಅವನ ಸ್ಥಾನಕ್ಕೆ ಭೇಟಿಯಿತ್ತಿಲ್ಲ. ಇದಕ್ಕೆ ಕಾರಣ ಅಸ್ಪಷ್ಟ. ಒಂದು ರೀತಿಯ ಕಳವಳ, ಕೋಪ, ಹತಾಶೆ ಹೀಗೆ ಅನೇಕ ತಲ್ಲಣಗಳು ನನ್ನ ಮನಸ್ಸನ್ನು ಹಿಡಿದಿಟ್ಟು ನನ್ನನ್ನು ಅಲ್ಲಿಗೆ ಹಾಯದಂತೆ  ನಿರ್ಬಂಧಿಸಿವೆ ಎನ್ನಬಹುದು.
            ಅವನ ಕುರಿತ ಚಿಂತನೆ ನನ್ನನ್ನು ಅಲ್ಲಿಗೆ ನಿಲ್ಲಿಸುವುದಿಲ್ಲ. ನಾನು ಹಲವಾರು ಬಾರಿ ಯೋಚಿಸುತ್ತಾ, ಹೀಗಂದುಕೊಳ್ಳುತ್ತೇನೆ. ಶಿವಾನಂದನಿಗೆ ತಾನು ವಿಷಸೇವಿಸುವಾಗ ಬೇರೆ ಪ್ರಪಂಚ ಅವನ ಕಣ್ಣೆದುರು ಸುಳಿಯಲೇ ಇಲ್ಲವೇ? ಅವನ ಮನಸ್ಸಿಗೆ ಕೇವಲ ತನ್ನ ತಂದೆಯ ಮೇಲಿನ ಕೋಪ ಅಥವಾ ಅವರಿಂದ ಅಪಮಾನಗೊಳ್ಳುತ್ತೇನೆಂಬ ಭಯವೇ ಆವರಿಸಿತೇ? ಒಂದು ಕ್ಷಣ ಇವೆಲ್ಲವುಗಳನ್ನೂ  ಬದಿಗಿಟ್ಟು ನನಗೂ ಕುಟುಂಬವಿದೆ, ಸಾಲದಕ್ಕೆ ಪ್ರೀತಿಪಾತ್ರ ಸ್ನೇಹಿತರಿದ್ದಾರೆ, ಎಲ್ಲದಕ್ಕೂ ಮಿಗಿಲಾಗಿ ಭವ್ಯ ಅಪೂರ್ಣ ಬದುಕು ನನ್ನ ಮುಂದಿದೆ., ಎಂದು ಅವನಿಗನ್ನಿಸಿದ್ದರೆ ಶಿವಾನಂದ ನಮ್ಮಿಂದ ದೂರವಾಗುತ್ತಿರಲಿಲ್ಲ.
         
ಅಂತರಾಳ ಒಮ್ಮೊಮ್ಮೆ ಹೀಗೂ ಕನವರಿಸುವುದುಂಟು.
.
.
ಮರೆಯಾದ ಮಾಣಿಕ್ಯವ ಎಲ್ಲಿಂದ ಪಡೆಯಲೀ?

ಮಂಗಳವಾರ, ಫೆಬ್ರವರಿ 25, 2020

ನವ ಸಂವತ್ಸರ

ಆಲಸ್ಯ ಅದ್ವಿತೀಯ!
ಮನಸ್ಸು ಹತಾಶಯ!
ಬವಣೆ ಬಲಶಾಲಿ!
ನಿದಿರೆ ಉಪಕಾರಿ?
ಸಾತ್ವಿಕತೆ ಕಾಣ್ತಿಲ್ಲ ,
ಸದ್ಗುಣ ಒಲಿತಿಲ್ಲ ,
ಶಿಸ್ತು-ಸಂಯಮ ಎನಗಿಲ್ಲ!
ಆದರೂ, 
ನಾ ಹೇಗೆ ಒಪ್ಪಿಕೊಳ್ಳಲಿ ಅಪ್ರಯೋಜಕನೆಂದು?

           ( ಚಿತ್ರಕೃಪೆ: ಅಂತರ್ಜಾಲ)


ತಿರುಗುವ ಭುವಿಯು ತಿರುಗುತ್ತಿರುವಂತೆ
ಬಾನಿನ ಭಾನು ಪ್ರಕಾಶಿಸುವಂತೆ
ನದಿಯು ಕಣಿವೆಗಳಲ್ಲಿ ಅನುಕ್ಷಣವು ಹರಿವಂತೆ
ಸಾಗಿದೆ, ನನ್ನೀ ಬದುಕು ಗೊತ್ತು - ಗುರಿಯಿಲ್ಲದೆ!

ಜ್ಞಾನದ ಕಿಡಿ ಅವಿತು ಬೂದಿಯೊಳ್ ಮುಚ್ಚಿರೆ
ಅಜ್ಞಾನದ ಮಾಯೆಗೆ, ಮಾಯವಾಗಿದೆ ಅರಿವು!
ತಿಳಿವಳಿಕೆಯ ಸಂಚಾರ ಆಮೆಗತಿಯಲ್ಲಿರಲು
ಸಂಧಿಸುವ ಶುಭ-ಕ್ಷಣಕೆ ಮನ ಮಿಡಿದು ಕಾದಿದೆ!

ಪರಿವೆಯ ಅಮೃತತ್ವಕೆ  ತಂಪಾಗುವುದೇ ಉದರ?
ಬಲವಂತದ ಬದಲಾವಣೆಗೆ ಇಳಿವುದೇ ಮನ(ಣ)ಭಾರ?
ಇರಲಿ ಈ ಕಾತುರ , ಇರಲಿ ಈ ಅವಸರ!
ಆಂತರ್ಯದ ಅಂಜಿಕೆ ತೊಲಗಿ, ಶುರುವಾಗಲಿ ನವಸಂವತ್ಸರ!
 
                                     -ಎಂ.ಕೆ.ಹರಕೆ


ಮೌನಜ್ವಾಲೆ

ಹಾಡು ಬರೆಯಬೇಕು ಅಳುವ ಮರೆಯಬೇಕು ಮಾತು ಮುಗಿದ ಮೇಲೆ ವಿರಹ ಮೌನಜ್ವಾಲೆ! ಯಾವ ಭೀತಿಯಲ್ಲಿ ಯಾರ ಪ್ರೀತಿಯಲ್ಲಿ ಏನೂ ಹೇಳಲಾರೆನು ಕೂಡಿ-ಕಳೆಯಲಾರೆನು! ಅಂದವಾದ ಮೈಸಿರಿ ಕಳೆದು...