ಶನಿವಾರ, ಡಿಸೆಂಬರ್ 6, 2025

ಅಂಬೇಡ್ಕರ್!

 ನಿನ್ನ ಹೆಸರು ಕೇಳಿದರೆ ಗರ್ವ ಪಡಬೇಕಿದ್ದ ಜನ,

ನಿನ್ನನ್ನು ಕೇವಲ ಒಂದು ವಿಷಯಕ್ಕೆ ಸೀಮಿತಗೊಳಿಸಿ ಕನಿಷ್ಠರಾಗಿದ್ದಾರೆ!

ನಿನ್ನ ಕುರಿತು ಒಂದು ಪುಟ ಓದದ ಜನ,

ನಿನ್ನನ್ನು ಗಂಟೆಗಟ್ಟಲೆ ನಿಂದಿಸಿ ಭಾಷಣ ಹೊಡೆಯುತ್ತಾರೆ!

ನಿನ್ನ ಅಪರಿಮಿತ ಜ್ಞಾನದ ಅರಿವಿಲ್ಲದ ಜನ,

ನೀ ರಚಿಸಿದ ಸಂವಿಧಾನವನ್ನು ಕಾಪಿ-ಪೇಸ್ಟ್ ಎನ್ನುತ್ತಾರೆ!

ಸಂವಿಧಾನ ತಿದ್ದುಪಡಿಗು, ಬದಲಾವಣೆಗೂ ವ್ಯತ್ಯಾಸ ಗೊತ್ತಿಲ್ಲದವರೂ ಶಿಳ್ಳೆ ಹೊಡೆದು ಕೇಕೆ ಹಾಕುತ್ತಾರೆ!


                                             (ಚಿತ್ರಕೃಪೆ: ಅಂತರ್ಜಾಲ)

ನಿನ್ನ ಹೆಸರಲ್ಲಿ ಜೈಕಾರ ಹಾಕುವವರು ಸಹ,

ನಿನ್ನ ದೀರ್ಘವಾಗಿ ಓದಲಿಲ್ಲ, ನಿನ್ನ ಅಂತರಾಳ ಮುಟ್ಟಲಿಲ್ಲ!!

ನಿನ್ನ ಕಾಲದ ಯಾವ ಮಹಾತ್ಮರಿಗೂ ನೀ ಕ್ಯಾರೆ ಅನ್ನದೇ,

ತೋರಿದ ಗಟ್ಟಿತನ, ಸ್ಪಷ್ಟ ನಿಲುವು ಇಂದಿನವರಿಗಿಲ್ಲ!!

ನೀನು ಸಂದರ್ಭ ಅರಿತು ಎಲ್ಲರನ್ನು ಒಪ್ಪಿ ನಡೆದೆ,

ಆದರೆ ಜನ ನಿನ್ನ-ಅವರ ನಡುವೆ ತಂದಿಟ್ಟು ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ!!


ಸಮಾಜದ ಎಲ್ಲ ಸ್ತರದ ಮಹಿಳೆಯರು ಇಂದು,

ಆಕಾಶಕ್ಕೆ ಮುಟ್ಟುವ ಸಾಧನೆ ಮಾಡುತ್ತಿದ್ದಾರೆ;

ಸಮಾಜದ ಎಲ್ಲ ಸ್ತರದ ಜನ, ಸಮಸಮಾಜದ

ನೆಲೆಯಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುತ್ತಿದ್ದಾರೆ...

ಇದೆಲ್ಲ ನಿನ್ನ ಅಂತರ್ದರ್ಶನದ ದಿವ್ಯಫಲ!!

ನಿನ್ನ ಹೋರಾಟದ ಬದುಕಿಗೆ ಶರಣು!!

ನಿನ್ನ ಹೆಸರು ಸಂಪ್ರೀತಿಯಿಂದ ಎಲ್ಲರೆದೆಯಲ್ಲಿ ಸ್ಥಿರಗೊಳ್ಳಲಿ!!


~ ಎಂ ಕೆ ಹರಕೆ



ಬುಧವಾರ, ಡಿಸೆಂಬರ್ 18, 2024

ಅಲೆವ ದುಂಬಿ

ಚಿತ್ರಕೃಪೆ : ಅಂತರ್ಜಾಲ 





 

ಕಣ್ಣ ತುಂಬ ಹಸಿರು ತುಂಬಿ 

ಮನಸು ಈಗ ಅಲೆವ ದುಂಬಿ!


ಜೀಪು ಹತ್ತಿ ಕುಳಿತೆವು..

ಅಗ್ಗು ತಗ್ಗು ಜಿಗಿದವು!!.

ಧೂಳು ದಣಿವು ಅಂಟಲಿಲ್ಲ 

ಕೂಡಿ ನಡೆದು ಮರೆತೆವೆಲ್ಲ!!


ಗಿರಿಯ ತುದಿಯ ಹಾದಿಯಲ್ಲಿ 

ತಂಪು ಗಾಳಿ ಸೋಂಕಿದೊಡನೆ 

ನೀಲಿ ಬಾನು ಕೆಳಗೆ ಇಳಿದು,

ಮಿನುಗು ಭಾನು ಕಣ್ಣ ಹೊಡೆದು,

ಸನ್ನೆಯಲ್ಲೇ ಎಲ್ಲರನ್ನು ಬಳಿಗೆ ಕರೆದನು 

ಸ್ವರ್ಗದಂಚಿನಲ್ಲಿ ನಮ್ಮ ಬಿಟ್ಟು ಹೋದನು!!


ಸಗ್ಗದಿಂದ ಕೆಳಗೆ ಇಳಿದು,

ಗಂಗೆಯೊಲವ ಅರಸಿ ನಿಂತು,

ಹರಿವ ಜಲದ ಮೂಲ ಅರಸಿ ಹೋದೆವಲ್ಲಿಗೆ!

ಕೊರೆವ ನೀರ ಗರ್ಭದಲ್ಲಿ ಜಿಗಿದೋ ಮೆಲ್ಲಗೆ!!


ಜಾರೋ ಬಂಡೆ, ಚೂಪು ಕಲ್ಲು ಪಾದಗಳಿಗೆ ವೇದನೆ,

ಶೀತ ಶರಧಿ ಮಡಿಲಿನಲ್ಲಿ, ನಿಸರ್ಗದ ಆರಾಧನೆ!!


ನನ್ನ ಗೆಲುವು ನಿನ್ನದೆಂದು 

ನಿನ್ನ ನಲಿವು ನನ್ನದೆಂದು 

ಅರಿತು ಬೆರೆತು ನಿಲ್ಲೋ ವಯಸ್ಸು, ಇಂದು ನಾಳೆಗೆ!

 ಹಂಚಿ ಕುಡಿವ ಶುದ್ಧ ಮನಸ್ಸು, ನಮ್ಮ ಬಳಗಕೆ!!


ಪರಮಾತ್ಮನ ಒಳಗೆ ಇಳಿಸಿ 

ನರನಾಡಿಯ ಚುರುಕುಗೊಳಿಸಿ 

ಹರಟೆ ಹೊಡೆವ ಸೂಕ್ತ ಕಾಲ, ಮತ್ತೆ ಸಿಗುವುದೇ?

ನಮಗೆ, ಮತ್ತೆ ಸಿಗುವುದೇ?


ನಡು ನೀರಲಿ ಬಿಟ್ಟು ಹೋದ 

ಭಾವ-ಬಂಧ ಕೆಡಿಸಿ ಹೋದ 

ವ್ಯಕ್ತಿಗತ ಬಳಸಿ ಬರುವ, 

ಹತ್ತು ಹಲವು ಕಥೆಗಳು!

ಅವರಿಗವರದೇ ವ್ಯಥೆಗಳು!!

ಈ ಮಧ್ಯೆ, ಅವರೆಲ್ಲಾ 

ಕ್ಷಣಿಕ ಕಾಲ ದುಃಖ ಮರೆತು ಕುಣಿಯುತ್ತಿದ್ದರು!

ಬದುಕ ಶೂನ್ಯ ಬದಿಗೆ ಸರಿಸಿ ಹಾಡುತ್ತಿದ್ದರು!!

ಆದ್ದರಿಂದ,

ಆಲ್ಕೋಹಾಲಲು ಹಾಲಿದೆ!

ಎಲ್ಲರ ನೋವಲು ಪಾಲಿದೆ!!


~ ಎಂ.ಕೆ. ಹರಕೆ 






ಶುಕ್ರವಾರ, ಡಿಸೆಂಬರ್ 13, 2024

ಅವನು - ಅವಳು

ಹೀಗೊಂದು ಸನ್ನಿವೇಶ!!

.

.


 ಅಂಜದೆ ಅಳುಕದೆ ಹಿಗ್ಗದೆ ಕುಗ್ಗದೆ   

 ನಲಿಯುತ ನಗಿಸುತ ಅವನಿದ್ದ!

 ಹಾಗೆಯೇ ಸುಮ್ಮನೆ, ಒಮ್ಮಿಂದೊಮ್ಮೆಲೆ

 ತಲುಪಿತು ಅವಳ ಕಿರುವರದಿ!


 ಮಲೆಗಳ ಸಾಗರ ಹಸಿರಿನ ಬೀಡದು

 ಅವಳಿಗೆ ದೊರೆತ ಗಮ್ಯ ಸ್ಥಾನ!

 ದುಡಿಮೆಯ ಆಗರ, ಟ್ರಾಫಿಕ್ನ ತವರು 

 ಅವನಿಗೆ ಒಲಿದ ಭವ್ಯ ತಾಣ!!


 ಮನಸಲಿ ಕಾತುರ ಬಯಕೆಗಳೆಷ್ಟೋ?

 ಕುತೂಹಲ ಕುಹೂ ಕುಹೂ ಕೂಗುತಿದೆ!

 ಇನ್ಸ್ಟಾ- ಫೇಸ್ಬುಕ್, ಎಲ್ಲೆಡೆ ತೀವ್ರ 

 ಅವಳದೇ ಹುಡುಕಾಟ ನಡೆಯುತಿದೆ !!


ಚಿತ್ರಕೃಪೆ : ಅಂತರ್ಜಾಲ


 ಸಿಕ್ಕಿತೋ ಸಿಕ್ಕಿತು ಎಂದೂ ಕಾಣದ

 ಅಪರೂಪದ ಮಿಂಚಿನ ಅವಳ ಮೊಗ!

 ಉಕ್ಕಿತೋ ಉಕ್ಕಿತು, ಮರುಕ್ಷಣದಲ್ಲಿಯೇ 

 ಪ್ರೇಮದ ರೀತಿಯ ಮಧುರ ಸುಖ!!


 ಧೈರ್ಯದಿ ಚಕ್ಕನೆ, ಇನ್ಸ್ಟಾ ಪುಟದಲ್ಲಿ

 ಕಳಿಸಿದನಾಕೆಗೆ ರಿಕ್ವೆಸ್ಟು!

 ಕಾದನು ಕಾದನು ದಿನರಾತ್ರಿಗಳನು 

 ಬಾರದು ಅವಳ ಅಕ್ಸೆಪ್ಟು!!


 ಬಯಕೆಯ ಬೇಗುದಿ ಸುಂದರ ಸ್ಮರಣಿಕೆ

 ತಿವಿಯುತ ಕುಣಿದವು ಮನದೊಳಗೆ!

 ಅವಸರದಾಹುತಿ; ಅಳುಕಿನ ಅಂಜಿಕೆ

 ಮನೆಮಾಡಿದವು ಅವನೊಳಗೆ!!


 ತಿಳಿಯದು ತೀರದು ಇವರೀರ್ವರ ಕಥೆ

 ಎಲ್ಲಿಗೆ ಹೋಗಿ ಮುಟ್ಟುವುದೋ?

 ಒಂದೇ ಕೌತುಕ, ನನ್ನಯ ಪಾಲಿಗೆ

 ಅವರಿಬ್ಬರ ಮಿಲನ ಎಂದಾಗುವುದೋ?

.

.

.

ಬೇಗ ಆಗ್ಲಿ ಅಷ್ಟೇ, ಏನಂತೀರಾ?

~ಎಂ ಕೆ ಹರಕೆ 


ಶನಿವಾರ, ನವೆಂಬರ್ 11, 2023

ಮೌನಜ್ವಾಲೆ

ಹಾಡು ಬರೆಯಬೇಕು

ಅಳುವ ಮರೆಯಬೇಕು

ಮಾತು ಮುಗಿದ ಮೇಲೆ

ವಿರಹ ಮೌನಜ್ವಾಲೆ!


ಯಾವ ಭೀತಿಯಲ್ಲಿ

ಯಾರ ಪ್ರೀತಿಯಲ್ಲಿ

ಏನೂ ಹೇಳಲಾರೆನು

ಕೂಡಿ-ಕಳೆಯಲಾರೆನು!


ಅಂದವಾದ ಮೈಸಿರಿ

ಕಳೆದುಕೊಂಡ ವೈಖರಿ

ಬೀಡುಬಿಟ್ಟ ಭಾಗ್ಯವ

ಬಿಡಿಸಿ ಬಿಟ್ಟು ಕೊಟ್ಟವ!




(ಚಿತ್ರಕೃಪೆ: ಅಂತರ್ಜಾಲ)



ಅಂಚಿನಿಂದ ಅಂಜಿಕೆ

ಜಾರಿ ಬಂದ ವೇಗಕೆ

ಮಾತು ಮೌನವಾದವು

ಬಯಕೆ ದೂರವಾದವು!


ಏನು? ಎಂತ ? ಎಲ್ಲಿಗೆ?

ಘಮಿಸಿ ಹೋದೆ ಮಲ್ಲಿಗೆ

ನೆನೆದು ಬಿಕ್ಕಲಾರೆನು

ಅಳಿಸಿ ಉಳಿಯಲಾರೆನು!


ಭಾವ ಬಳಸಿ ಬಂದೆ ನೀ

ಬದುಕ ತಿಳಿಸಿ ಹೋದೆ ನೀ

ಮನಸ ಬೀದಿಯಲ್ಲಿ

ಅಡಗು ತಾಣವೆಲ್ಲಿ?


~ ಎಂ.ಕೆ.ಹರಕೆ

ಗುರುವಾರ, ನವೆಂಬರ್ 9, 2023

ಅಭಿಮಾನಿ





ನಿನಗಾಗೆ ನನ್ನೊಲವು  ಬರೆಯುತಿದೆ ಓ ಗೆಳತಿ

ನನಗಾಗಿ ಒಂದೊಮ್ಮೆ ; ಓದೇ ಒಲವಿನ ಒಡತಿ!!


ಕಾಯಿಸಿ ಕಾಯಿಸಿ ನೀ

ಕಾಯಿಲೆಯ ಬರಿಸದಿರು

ಕಾಯುವ ಎಣ್ಣೆಯಲಿ

ನನ್ನೆದೆಯ ಕುದಿಸದಿರು!!


ಅದೃಷ್ಟವೋ ಅವಕಾಶವೋ 

 ಅವತರಿಸಿದೆ ಕಣ್ಮುಂದೆ

ಹೊಂಬೆಳಕ ರಶ್ಮಿಯಲಿ

ನಸುನಗೆಯ ಚುಂಬಿಸಿದೆ !!








  (ಚಿತ್ರಕೃಪೆ: ಅಂತರ್ಜಾಲ)


ಮೇಕಪ್ಪಿನ ಮಹಾಪಾಪ

ನಿನ್ನ ವದನಕೆ ಬೇಕಿಲ್ಲ

ಸಿಂಗಾರದ ಸಂಕೋಲೆ

ನಿನ್ನ ಸಿರಿಗೆ ಸಮವಿಲ್ಲ !!


ಮೌನದ ಮಾತಲ್ಲೇ 

ನಿನ್ನ ಗುಂಗ ಹಿಡಿಸಿದೆ!

ಇಂಪಾದ ಹಾಡಲ್ಲೇ

ನನ್ನ ಹೃದಯ ತಣಿಸಿದೆ!!


ಅನುದಿನವು ಅನುಕ್ಷಣವು

ಅಭಿಮಾನಿಯೇ ನಾ ನಿನಗೆ

ಅನವರತ ಪ್ರೇಮದಲಿ

ಹಾಡುವೆಯಾ? ನೀ ನನಗೆ!!


~ ಎಂ. ಕೆ. ಹರಕೆ




ಸೋಮವಾರ, ಅಕ್ಟೋಬರ್ 31, 2022

ಏನಾದರೂ ಮಾಡು!

 

"ಏನಾದರೂ ಮಾಡು

ಶ್ರದ್ಧೆಯಿಂದ ಮಾಡು"


ಬಯಸದೆ ಬಂದವರಿಲ್ಲ

ಬೇಯದೆ ಹೋಗುವರಿಲ್ಲ!

ಬೀಳದೆ ಗೆದ್ದವರಿಲ್ಲ

ಬಾಳಲಿ ನೋವೆ ಎಲ್ಲ!











(ಚಿತ್ರಕೃಪೆ: ಅಂತರ್ಜಾಲ)


ಹೇಳುವುದ ಕೇಳಲು ಬಲ್ಲೆ

ಕೇಳುವುದ ತಿಳಿಯಲೂ ಬಲ್ಲೆ

ತಿಳಿವಳಿಕೆ ಬಂದರೆ ಸಾಕೆ?

ಅನುಸರಿಕೆ ಇಲ್ಲದೆ ಬದುಕೇ?


ಬಿಡುವುದ ಬಿಟ್ಟಂತಾಗು

ತೊಡುವುದ ತೊಟ್ಟಂತಾಗು

ಕಡೆಯಲಿ ನಿನ್ನಂತಾಗು

ಮನೆಯಲಿ ನೀ ಮಗುವಂತಾಗು!!


ಏನಾದರೂ ಮಾಡು

ಮನಸಿಟ್ಟು ಮಾಡು!

ಧೃತಿಗೆಟ್ಟು ಮಾಡು

ಖುಷಿಪಟ್ಟು ಮಾಡು!

ಅತಿ ಶ್ರದ್ಧೆಯಿಂದ ಮಾಡು...!


ಆದರೆ,

"ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ"

ಅಂತಾಗಬೇಡ!!


- ಎಂ.ಕೆ.ಹರಕೆ ✍️


ಮಂಗಳವಾರ, ಮಾರ್ಚ್ 22, 2022

ಸುಳ್ಳು

( ಚಿತ್ರಕೃಪೆ : ಅಂತರ್ಜಾಲ )


ಸುಳ್ಳನ್ನೇ ಬಿತ್ತಿ

ಸುಳ್ಳನ್ನೇ ಬೆಳೆದು

ಸುಳ್ಳನ್ನೇ ಬಿಡಿಸಿ, ಬೀಸಿ, ಜೀರ್ಣಿಸಿ

ಸುಳ್ಳಲ್ಲೇ ಜೀವಿಸಿ

ಸುಳ್ಳಲ್ಲೇ ಸುಳಿದಾಡಿ

ಸುಳ್ಳಲ್ಲೇ ತಿಳಿಯಾದ ಕನಸು ಕಾಣುವ ಕಂಗಳು..


ನೀ ಕಾಣುತ್ತಿರುವುದು ಸುಳ್ಳು;

ಸುಳ್ಳೇ ನಿನ್ನನ್ನು ಮತ್ತಷ್ಟು ಸುಳ್ಳಿಗನಾಗಿಸಿದೆ.

ಹೀಗೆ, ಮುಂದುವರೆದರೆ

ಸುಳ್ಳಿನ ಸುಳಿಯಲ್ಲಿ

ನಿನ್ನ

ಕನಸುಗಳು ಸುಳ್ಳಾಗುವವು!

ಮನಸುಗಳು ಹೋಳಾಗುವವು!



ಈ ಶುದ್ಧಸತ್ಯವನ್ನು

ಅರಿಯದೆ ಹೋದರೆ?

ಸುಳ್ಳು ನಾಲಗೆಯ ಪರಮಸ್ಥಾನಿಯಾಗುವುದು!

ಅನೃತವೇ ಅಮೃತದ ಸವಿಯ ನೀಡಲುಬಹುದು!


ಸುಳ್ಳೇ ಸೋಪನವಾಗಿ

ಸುಳ್ಳೇ ಸರಳವಾದ

ಜೀವನ ಮಾರ್ಗವಾಗಿಯೂ ಬಿಡಬಹುದು!

ಸದ್ದಿಲ್ಲದೆ

ಸುಂದರ ಸುಳಿಗೆ ಸಿಲುಕಿಸಿ

ಬದುಕ 'ಸುಲಿಗೆ' ಮಾಡಿ ಬಿಡಬಹುದು!




ಸುಳ್ಳು ಹೇಳುವವನಿಗೆ 

ಸುಳ್ಳು 

ಸೊಳ್ಳೆಯಷ್ಟೇ ಸಣ್ಣದಾಗಿ ಕಂಡರು,

ಅದರಿಂದ 

ಸಿಡಿಯುವ ಅವಿಶ್ವಾಸ ಸಲೀಸಾಗಿ

ಸರಳ

ಹೃದಯವನ್ನು ಸೀಳಿ

ಸರಪಳಿಯಲ್ಲಿ ಕಟ್ಟಿ

ಹೇಳದೆ ಕೇಳದೆ ಹುಳಿಹಿಂಡಿ ಹಿಂಸಿಸುವುದು..!

ಸಂಯಮದ ಮನಸ್ಥಿತಿ

ವಿಕಾರವಾಗಿ 

ನರಳಿ ನರಳಿ

ಸಂದಿಗ್ಧತೆಯ ಸವಾಲಿಗೆ 

ಸೋತು ಸೋತು ಸುಣ್ಣವಾಗುವುದು!


ಸುಳ್ಳೇ,

ಸಮಯವ ವ್ಯರ್ಥ ವ್ಯಯಿಸದಿರು..


ಸಾಕಿನ್ನು

ಈ ಸುಳ್ಳಿನ ಸೊಲ್ಲು!

ಸರಿಮಾಡಿ

ನಿನ್ನ ಬದುಕನು ಗೆಲ್ಲು!



ಈ ಸುಳ್ಳಿನ ಸುಳಿಯಿಂದ

ನುಸುಳಿ

ಬಹಳ ಕಾಲದ ಸರಳ ಜೀವನಕ್ಕೆ

ಮರಳಿ

ನಳನಳಿಸಿ ಬೆಳಗುವ ಬೆಳ್ಳಿಯಾಗು!!


 

ಕಾಯ್ದು ಕುಳಿತಿರುವೆ!!



~ ಎಂ.ಕೆ.ಹರಕೆ


ಅಂಬೇಡ್ಕರ್!

 ನಿನ್ನ ಹೆಸರು ಕೇಳಿದರೆ ಗರ್ವ ಪಡಬೇಕಿದ್ದ ಜನ, ನಿನ್ನನ್ನು ಕೇವಲ ಒಂದು ವಿಷಯಕ್ಕೆ ಸೀಮಿತಗೊಳಿಸಿ ಕನಿಷ್ಠರಾಗಿದ್ದಾರೆ! ನಿನ್ನ ಕುರಿತು ಒಂದು ಪುಟ ಓದದ ಜನ, ನಿನ್ನನ್ನು ಗ...