ಸೋಮವಾರ, ಸೆಪ್ಟೆಂಬರ್ 6, 2021

📖 ಹೃದಯದಿ ನಮಿಸುವೆ ಓ ಗುರುವೇ...📖


ಜೀವದ ಗುರುವೇ 

ಭಾವದ ಗುರುವೇ

ಹೃದಯದಿ ನಮಿಸುವೆ ಓ ಗುರುವೇ...

ಬಳಪದ ಬೆಳಕಲಿ

ಕತ್ತಲ ಓಡಿಸಿ

ಅಕ್ಷರ ಕಲಿಸಿದೆ ನಮಗೆ!..ಆಹಾ  

||ಪಲ್ಲವಿ||




ನೇಗಿಲಯೋಗಿಯು ಹಾಡಿದ ಹಾಗೆ

ಅಜ್ಜಿಯ ಜಂಭವು ಕರಗಿದ ಹಾಗೆ

ಗಲಿವರ ಕತೆಯ ಕೇಳುತಲಿರಲು;

 ಅಚ್ಚರಿ ಲೋಕವು ಅರಳಿದ ಹಾಗೆ!

ಕನ್ನಡ ಕಲಿಯಲು ಸಕ್ಕರೆಯಂತೆ

ಅಕ್ಷರ ಬರೆಯಲು ಮುತ್ತುಗಳಂತೆ

ಬಾಲ್ಯದ ನೀತಿಯ ಪಾಠಗಳೆಲ್ಲವೂ

ಗುರುಗಳು ನೀಡಿದ ವರವೋ.... ಆಹಾ

||ಪಲ್ಲವಿ||


ಶಾಲೆಯ ಪರಿಸರ ನೋಡಲು ಚೆಂದ

ಹೊರಗಿನ ಅಂಗಳ ಮನಸ್ಸಿಗೆ ಅಂದ

ಗೆಳೆಯರ ಜೊತೆಯಲಿ ಆಡುತಲಿದ್ದರೆ 

ಹೇಳಲು ಆಗದ ಪರಮಾನಂದ!

ಹೋಮ್ ವರ್ಕ್ ಬರೆಯದೇ ಆಡಿದ ಆಟ

ಟೀಚರ್ ಕಲಿಸಲು ಸುಂದರ ಪಾಠ

ಬಾಲ್ಯದ ಗುರುಗಳ ಮಾತುಗಳೆಲ್ಲವೂ

ಬದುಕಿಗೆ ನೀಡಿದ ಗುರಿಯೋ... ಆಹಾ!!

||ಪಲ್ಲವಿ||



~ ಎಂ. ಕೆ. ಹರಕೆ







ಭಾನುವಾರ, ಆಗಸ್ಟ್ 15, 2021

ನಶಾ ಪ್ರಪಂಚ

                  ( ಚಿತ್ರಕೃಪೆ: ಅಂತರ್ಜಾಲ )


ಅಬ್ಬಬ್ಬಾ 

ಏನ್ ಆ ಗುಂಡು ಆ ತುಂಡು!

ತುಂಡುಡಿಗೆಯ ಮಿರಿಮಿರಿ ನರ್ತನ!

ನಶೆಯ ಲೋಕವೋ ಅಥವಾ 

ಲೋಕದಲ್ಲೆಲ್ಲೂ ಸಿಗದ ನಶಾ ತಾಣವೋ!!


ಇದು ಧ್ವನಿ ಪ್ರಪಂಚವೇ?

ಇಲ್ಲ ಇಲ್ಲ..

ಅರ್ಥವಾಗದ ಭಾಷೆಯ, 

ಗೊತ್ತು ಗುರಿಯಿಲ್ಲದೆ ಸಾಗುವ,

ಬಿಡುವಿಲ್ಲದೆ ಕುಣಿಯಲು ಯೋಗ್ಯ,

ಕರ್ಣಪಟಲ ಅದುರುವಂತ ಕರ್ಕಶ ಶಬ್ಧ!


ಇದು ನಾಟ್ಯ ಪ್ರಪಂಚವೇ?

ಇಲ್ಲ ಇಲ್ಲ...

ಕೆಲವೊಮ್ಮೆ ತಾಳಕ್ಕೆ ತಕ್ಕ ಹೆಜ್ಜೆ,

ಒಮ್ಮಿಂದೊಮ್ಮೆಲೇ ಎಣೆಯಿಲ್ಲದ ಕುಣಿತ,

ಮತ್ತೊಮ್ಮೆ ನೀರಸ ಮೌನ..

ಮಗದೊಮ್ಮೆ ಒಂದಡಿ ಭೂಮಿಯೇ 

ಕೆಳ ಕುಸಿಯುವಂತ ದಾಂಡಿಗ ಹೆಜ್ಜೆಗಳು!!


ಇದು ಹುಚ್ಚರ ಪ್ರಪಂಚವೇ?

ಇಲ್ಲ ಇಲ್ಲ...

ಇಲ್ಲಿ ಬಂದವರು ದೊಡ್ಡ ದೊಡ್ಡ ಮಂದಿ

ಕೆಲವರು ಜನಪ್ರತಿನಿಧಿಗಳು,ಆರಕ್ಷಕರು..

ಇನ್ನೂ ಕೆಲವರು ಬಿಜಿನೆಸ್ ಭಯೋತ್ಪಾದಕರು,

ಒಂದಿಷ್ಟು ಮಂದಿ ದುಡ್ಡಿನ ಅಹಮ್ಮಿಗಳು

ಬಹಳಷ್ಟು ಮಂದಿ ವಿದ್ಯಾವಂತರೆ! 


ಇದು ಆನಂದ ಪ್ರಪಂಚವೇ?

ಇಲ್ಲ ಇಲ್ಲ...

ಜೊಲ್ಲು ಸುರಿಯುತ್ತಿದ್ದರೂ ಉಪ್ಪಿನಕಾಯಿ ನೆಕ್ಕುವ,

ಅರೆಪ್ರಜ್ಞನಾದರೂ ಮೇಲಿಷ್ಟು ಪರಮಾತ್ಮನ ಇಳಿಸುವ,

ಇಬ್ಬರು ಭುಜವನ್ನು ಹಿಡಿದು ನಡೆಸಿದರೂ ನಡೆಯಲಾಗದ,

ತಿಂದಿದೆಲ್ಲವನ್ನೂ ಕಾರು ಹತ್ತುವ ಮುನ್ನವೇ ಕಕ್ಕಿ,

ಪೆಕ್ರನಂತೆ ನಗುವ ಇವರಿಗೆಲ್ಲಿಯದು ಆನಂದ?

ಇವರನ್ನು ಹೊತ್ತು ಮನೆಸಾಗಿಸುವವರಿಗೆ ಯಾವ ಕರ್ಮ?


ಮತ್ತೆಂತ ಪ್ರಪಂಚವಿದು?

ರಾತ್ರಿ ಎನ್ನದೆ, ಹಗಲೆನ್ನದೆ

ವಾರವಿಡೀ ಕಂಪ್ಯೂಟರಿನಂತೆ ಕೆಲ್ಸ ಮುಗಿಸಿ,

ಸರ್ವಿಸಿಗೆ ಕೊಟ್ಟ ವಾಹನ ತೊಳೆದಂತೆ

ಅಡಿಯಿಂದ ಮುಡಿವರೆಗೆ 

ದೇಹದ ಕಲ್ಮಶಗಳನ್ನು, ಕಹಿ-ಕಂಪನಗಳನ್ನು, 

ಒಟ್ಟಾರೆ

ವಾರದ ಪೂರ್ತಿ ಒತ್ತಡವನ್ನು ತೊಳೆಯುವ ತಂತ್ರ!


ನೀವು ಉಡುವ, ತೊಡುವ,

ಉಣ್ಣುವ, ಕಕ್ಕುವ ಹಣವೆಲ್ಲ ನಿಮ್ಮ ದುಡಿಮೆಯದೆ!

ಆದರೆ,

ನಿಮ್ಮಿಂದ ಪೋಲಾಗುವ

ಗುಣಮಟ್ಟದ ಆಹಾರ, 

ಎಗ್ಗಿಲ್ಲದೆ ಉರಿಸಿದ ಇಂಧನ,

ಗುಂಗಿನಲ್ಲಿ ಒದರಿಸಿದ ಕರ್ಕಶ ಶಬ್ಧ ಇತ್ಯಾದಿ ನಿಮ್ಮದೇ??


ನಿಮ್ಮ ನಶಾ ಪ್ರಪಂಚ

ದುಡಿಯುವ ವರ್ಗ ಬೆವರಿಳಿಸಿ ಉತ್ಪಾದಿಸಿದನ್ನು

ಕ್ಷಣ ಮಾತ್ರದಲ್ಲೇ ಇಲ್ಲವಾಗಿಸುವ ನಾಶ ಪ್ರಪಂಚ!!

ನೀವು ಒಂದು ರಾತ್ರಿಯಲ್ಲಿ

ಬಳಸುವ ಸಂಪನ್ಮೂಲ,

ಬೇಕಾಬಿಟ್ಟಿ ವ್ಯಯಿಸಿದ ಖರ್ಚಿನಲ್ಲಿ 

ಕೂಳಿಲ್ಲದೆ, ಸೂರಿಲ್ಲದೆ ಕೊರಗುವ

ಒಂದು ಬಡ ಹಳ್ಳಿಯನ್ನು ಉದ್ಧರಿಸಬಹುದಿತ್ತು!!


~ಎಂ.ಕೆ.ಹರಕೆ


ಭಾನುವಾರ, ಏಪ್ರಿಲ್ 11, 2021

ಆರೋಗ್ಯವೇ ಮಹಾಭಾಗ್ಯ

ನಿನ್ನಿಂದಲೇ ನಿನ್ನಿಂದಲೇ ನಿನ್ನ ಹೆಲ್ತು ಹಾಳಾಗಿದೆ
ನಿನ್ನಿಂದಲೇ ನಿನ್ನಿಂದಲೇ ನಿನ್ನ ಬಾಳು ಮಿತವಾಗಿದೆ


ನಿನ್ನ ಬಾಡಿಲೀ ಬೊಜ್ಜೀಗ ಮನೆಮಾಡಿದೆ
ಈ ಆನ್ಲೈನ್ ಗೇಮಿಂಗ್ ಬಂದಾಗಲೇ
ಈ ಬದುಕಲ್ಲಿ ಸಿಹಿಯೆಲ್ಲ ಮರೆಯಾಗಿದೆ
ನಿನ್ನೆದುರಲ್ಲಿ ಮಧುಮೇಹ ನಿಂತಾಗಲೇ ||೧||

ನಿನ್ನಿಂದಲೇ ನಿನ್ನಿಂದಲೇ ನಿನ್ನ ಹೆಲ್ತು ಹಾಳಾಗಿದೆ
ಅದರಿಂದಲೇ ಅದರಿಂದಲೇ ನಿನ್ನ ವೆಲ್ತು ಹೋಗ್ತಾ ಇದೆ 


                   ( ಚಿತ್ರಕೃಪೆ : ಅಂತರ್ಜಾಲ )


ಬಾಯ್ ರುಚಿಗೆ ಅತಿಯಾಗಿ ಉಪ್ಪನು ತಿಂದು
ಬಿ.ಪಿಗೆ ಬಲಿಯಾದೆ ಸುಖವೇನು?
ರೋಡ್ ಸೈಡ್ ಪಾನಿಪುರಿ, ಫ್ರೈಡ್ ರೈಸ್ ನುಂಗಿ
ಮನೆಯೂಟ ಮರೆತೋದೆ ಸರಿಯೇನು?
ಈ ಫುಡ್ಡಿಗೆ ಒಣ ಬ್ರೆಡ್ಡಿಗೆ ನಿನ್ನ ಬಾಡಿ ಬೆಂಡಾಗಿದೆ
ನಿನ್ನಿಂದಲೇ ಇದರಿಂದಲೇ ನಿನ್ನ ಹೆಲ್ತು ಹದಗೆಟ್ಟಿದೆ||೨!!


ಹೋದಲ್ಲಿ ಬಂದಲ್ಲಿ ಫಿಜ್ಜಾ ಬರ್ಗರ್ 
ಸಾಲ್ದಕ್ಕೆ ಬಾಯ್ತುಂಬ ಕೂಲ್ಡ್ರಿಂಕ್ಸು !
ಪಾರ್ಟಿಯ ಹೆಸರಲ್ಲಿ ಬಾಡು-ಬ್ರಾಂಡಿ
ನಶೆಯಲ್ಲಿ ಸಿಗರೇಟು ಭಲೇಜೋಡಿ!
ಯಮರಾಯಗೆ ಸದ್ದಿಲ್ಲದೆ ನಿನ್ನ ಮೇಲೆ ಮನಸಾಗಿದೆ
ನಿನ್ನಿಂದಲೇ ನಿನ್ನಿಂದಲೇ ನಿನ್ನ ಹಾರ್ಟು ಫೇಲಾಗಿದೆ !!೩!!


ಈ ಮನಸ್ಸಿಂದು ಪ್ರತಿಕ್ಷಣವೂ ಭಯದಲ್ಲಿದೆ 
ನಿನ್ನೆದುರಲ್ಲಿ  ವೈರಾಣು ಬಂದಾಗಲೇ!
ನಿನ್ನ ತುಟಿಯಲ್ಲಿ ನಗು ಕೊಂಚ ಕಿರಿದಾಗಿದೆ
ಆ ನಗು ಕೂಡ ಈಗೀಗ ಮರೆಯಾಗಿದೆ!!

ನಿನ್ನಿಂದಲೇ ನಿನ್ನಿಂದಲೇ ನಿನ್ ಲೈಫು ಟೈಟಾಗಿದೆ
ನಿನ್ನಿಂದಲೇ ನಿನ್ನಿಂದಲೇ ಹೊಸ ಬಾಳು ಬೇಕಾಗಿದೆ!!

- ಎಂ ಕೆ ಹರಕೆ







( 'ಮಿಲನ' ಚಿತ್ರದ ನಿನ್ನಿಂದಲೇ ಗೀತೆಯ ಧಾಟಿಯಲ್ಲಿ, ವಿಶ್ವ ಆರೋಗ್ಯ ದಿನದ ಅಂಗವಾಗಿ ಬರೆದ ಗೀತೆ.. ಅದೇ ಸ್ವರಸಂಗೀತದಲ್ಲಿ ಹಾಡಿಕೊಂಡರೆ ಸಾಹಿತ್ಯಕ್ಕೆ ಮೆರುಗು! )





ಭಾನುವಾರ, ನವೆಂಬರ್ 22, 2020

'ವೈಷ್ಣವ ಜನತೋ' ಕನ್ನಡ ಅನುವಾದ

ಸರ್ವರ ಕಷ್ಟವ ಅರಿತು ನೀ ನಡೆದರೆ
(ಎಲ್ಲರ ಬೇವಿಗೆ ಬೆಲ್ಲ ನೀನಾದರೆ)
ಕಲ್ಲಿನ ದೇವನೂ ಕರಗುವನು!
ಉಪಕಾರದ ಅಭಿಮಾನವ ಮರೆತರೆ
ಪುಣ್ಯದ ಹೊಳೆಯನು ಹರಿಸುವನು!!

ಲೋಕದಿ ಸಕಲರೂ ಬಂಧುಗಳಂತೆ
ನಿಂದಿಸದಿರು ನೀ ಯಾರನ್ನೂ
ನಡೆ-ನುಡಿಯಲ್ಲಿ ಮಡಿವಂತನಾದರೆ
ತಾಯಿಗೆ ಸಿರಿತನ ಬೇಕೇನು?

ಸಮದೃಷ್ಟಿಯಲ್ಲಿ ಸರ್ವರೂ ನಿಲ್ಲಲಿ
ಪರಸ್ತ್ರೀ ಎಂದಿಗೂ ನಿನ್ನ ತಾಯಿ!
ನಾಲಗೆಯಿಂದ ಅಸತ್ಯವ ನುಡಿದು 
ನೀ ಪರಸ್ವತ್ತಿಗೆ ಕೈ ಹಾಕದಿರು!!

'ಮೋಹ' ಎಂಬ ಮಾಯೆಗೆ ಬೀಳದೆ
ದೃಢವೈರಾಗ್ಯ ಇರಿಸು ಮನದೊಳಗೆ!
ರಾಮನಾಮ ಕೇಳಿ ಪುಳಕಿತ ನೀನಾದೊಡೆ 
ಸಕಲ ತೀರ್ಥಂಗಳೂ ಎದೆಯೊಳಗೆ!!

ಜಿಪುಣಿಯಾಗದೆ ದುರಾಸೆಯ ಬಿಡುನೀ
ಕೋಪದ ಬಾವಿಗೆ ಬೀಳದಿರು!
ಕವಿ ನಿನ್ನಾ ರೂಪವ ಕಾಣಲು ಕಾಯ್ವನು
ಪುಣ್ಯದ ಪ್ರಾಪ್ತಿ ಅಂದು ಜಗಕ್ಕೆಲ್ಲಾ!!



~ ಗುಜರಾತಿ ಆದಿಕವಿ ನರಸಿಂಹ ಮೆಹ್ತಾ
 
(ಕನ್ನಡ ಭಾವಾನುವಾದ : ಮಾಳಿಂಗರಾಯ ಹರಕೆ)





NCC ಮತ್ತು ನಾನು!

2016ರ, ಆಗಸ್ಟ್ ಮಾಹೆಯ ಹೊತ್ತು. ಪ್ರಥಮ ವರ್ಷದ ನಮಗೆ, ಓರಿಯೆಂಟೇಶನ್ ಪ್ರೋಗ್ರಾಂ! ನನಗಿಲ್ಲಿ ವಿಶೇಷವಾಗಿ ಕಂಡದ್ದು ಖಾಕಿ ಸಮವಸ್ತ್ರ ಧರಿಸಿ ಶಿಸ್ತಾಗಿ ಕಾರ್ಯಕ್ರಮ ಅಚ್ಚುಗೊಳಿಸುತ್ತಿದ್ದ ಎನ್.ಸಿ.ಸಿ ಕೆಡೆಟ್ಸ್. ಅದೇ ಕ್ಷಣದಲ್ಲೇ ನಾನೂ ಈ ಸಮವಸ್ತ್ರ ಧರಿಸಿಯೇ ತೀರಬೇಕೆಂದು ನಿಶ್ಚಯಿಸಿ, ಅವರು ನಡೆಸುವ ದೇಹಧಾರ್ಢ್ಯತಾ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು NCC ಕ್ಯಾಪ್ ಧಕ್ಕಿಸಿಕೊಂಡದ್ದು ಇನ್ನೂ ಕಣ್ಣಂಚಿನಲ್ಲಿ ಉಳಿದಿರುವ ದೃಶ್ಯ.
.
.
 ಪ್ರತಿ ವಾರದಂಚಿನಲ್ಲಿ ಕ್ಲಾಸು, ಲ್ಯಾಬು ಎಲ್ಲವನ್ನೂ ಮುಗಿಸಿ ಕ್ಷಣಾರ್ಧದಲ್ಲಿ ಸಮವಸ್ತ್ರ ಧರಿಸಿ, ಬೂಟುಗಳನ್ನು ಸಿಕ್ಕಿಸಿಕೊಂಡು ಗ್ರೌಂಡಿನಲ್ಲಿ ಫಾಲ್-ಇನ್ ಆಗುವುದರೊಳಗೆ ಹೆಣಬಿದ್ದಂತಾಗುತ್ತಿತ್ತು. ಅದರ ನಡುನಡುವೆ ಶೂ ಫಾಲಿಶ್ ಇಲ್ಲದೆ, ಖಾಕಿ ಇಸ್ತ್ರಿ ಮಾಡದೆ, ಗಲಿಬಿಲಿಯೊಳಗೆ ಏನಾದರೂ ಮರೆತು ಧರಿಸದೇ ಬಂದಿದ್ದರೆ ಮುಗೀತು ನಮ್ಮ ಕಥೆ!! ಶನಿವಾರದ ಮಧ್ಯಾಹ್ನ ಊಟ ಮುಗಿದ ಕೂಡಲೇ (ನನ್ನ ಇತರ ಸ್ನೇಹಿತರು ಕಾಲೇಜಿನಲ್ಲಿ ಜಾಲಿಯಾಗಿ ಹಲ್ಲುಗಿಂಜುತ್ತಾ ಸುತ್ತುತ್ತಿರುವಾಗ) ಇಡೀ ಕಾಲೇಜನ್ನು ಅವರೆದುರು ಐದು ಸುತ್ತು ಓಡುವ ಗೀಳು, ತದನಂತರ ವ್ಯಾಯಾಮ, ಮುಗಿದೊಡನೆ ಶುರು ನೋಡಿ 'ಪರೇಡ್' ಎಂಬ ಹಬ್ಬ. ಶಿಸ್ತಿನ ಸಾಲಿನಲ್ಲಿ ನಿಂತು, ಉರಿ ಬಿಸಿಲಿನ ಧೂಳು ಹಿಂಸೆಯಲ್ಲಿ ಸೀನಿಯರ್ ನೀಡುವ ಕಮಾಂಡಿಗೆ ತಕ್ಕಂತೆ, ತಪ್ಪಿಲ್ಲದೆ ಕೈಬೀಸುವುದರಲ್ಲಿ ಏನೋ ಸಾಹಸ, ತೃಪ್ತಿ! ಈ ಸಾಹಸದಲ್ಲಿ ಹೆಣ್ಮಕ್ಕಳು ಬಿಡದೇ ನಮ್ಮೊಡನೆ ಸರಿಸಮಾನರಾಗಿ ಪಾಲ್ಗೊಳ್ಳುವ ಪರಿ ಆಶ್ಚರ್ಯಕರ ಹಾಗೂ ಶ್ಲಾಘನೀಯ..!
.
.
NCC ಎಂಬುದು ಕೇವಲ ಗ್ರೌಂಡಿನಲ್ಲಿ ಲೆಫ್ಟ್-ರೈಟ್ ಮಾಡಿ ಕೈತೊಳೆದುಕೊಳ್ಳುವ ಗುಂಪಲ್ಲ. ಕಾಲೇಜಿನ ಇತರ ಎಲ್ಲಾ ಕ್ಲಬ್ಗಳಿಗಿಂತ ಇದು ತೀರಾ ಭಿನ್ನ. ಇದು ministry of defense, GOVT of India ಇದರಡಿಯಲ್ಲಿ ಪಳಗುವ ಒಂದು ನಿರ್ದಿಷ್ಟ ಸಾಹಸಿ ಯುವ ಸಂಸ್ಥೆ. ಇದರ ಇನ್ನೊಂದು ಮುಖ ಹಲವರಿಗೆ ಪರಿಚಯವೇ ಇರುವುದಿಲ್ಲ.
ನಮ್ಮ ವರ್ಷಾಂತ್ಯದ ಪರೀಕ್ಷೆಗಳು ಮುಗಿದ ಬಳಿಕ (ಜುಲೈ-ಆಗಸ್ಟ್) ನಾವು ಕ್ಯಾಂಪ್ಗಳಿಗೆ ಹೋಗಿದ್ದಿದೆ. ನನ್ನ ಸ್ನೇಹಿತರೆಲ್ಲ ತಮ್ಮ-ತಮ್ಮ ಊರುಗಳಲ್ಲಿ ರಜೆಯೊಂದಿಗೆ ಮಜವಾಗಿದ್ದರೆ, ಪುನಃ ನಾವು ಒಂದೆಡೆ ಬೀಡು ಬಿಟ್ಟು ಬೆವರು ಹರಿಸಬೇಕಿತ್ತು. ನೆನಪಿರಲಿ, ಹೋಗುವಾಗ ಇರುವ ನಿಮ್ಮ ಮುಖ ಬಣ್ಣ ಬರುವಾಗ ಇರುವುದಿಲ್ಲ. ಆದರೆ ಕ್ಯಾಂಪ್ನಲ್ಲಿ ಭೇಟಿಯಾಗುವ ಬೇರೆ ಕಾಲೇಜಿನ ಸ್ನೇಹಿತರು, ಪರೇಡ್ ಕಲಿಸುವ ಡ್ರಿಲ್ ಮಾಸ್ತರ್, ಮೂಕವಿಸ್ಮಿತಗೊಳಿಸುವ ಮೇಜರ್-ಕರ್ನಲ್ ಸಾಹೇಬರು, ಮನಸ್ಸಿಗೆ ಮುದ ನೀಡುವ ಆಟೋಟ ಸ್ಪರ್ಧೆ ಪ್ರತಿಯೊಂದೂ ನಮ್ಮಲ್ಲಿ ವಿಶೇಷ ತೆರನ ಅನುಭವ ಹುಟ್ಟು ಹಾಕುತ್ತದೆ. ಪ್ರತಿನಿತ್ಯ ನಸುಕಿನಲ್ಲಿ ಏಳುವುದು, ಬಿಡುವಿಲ್ಲದ ಡ್ರಿಲ್, ಮ್ಯಾರಥಾನ್, ವ್ಯಾಯಾಮ, ವೆಪನ್ ಟ್ರೈನಿಂಗ್, ಮ್ಯಾಪ್ ರೀಡಿಂಗ್, ಬ್ಯಾಂಡ್, ಟೆಂಟ್ ನಿರ್ಮಿಸುವಿಕೆ, ಮಿಲಿಟರಿ ಹಿಸ್ಟರಿ, ಮಧ್ಯಾಹ್ನದ ಪಿ-ಟಿ ಈ ಎಲ್ಲವೂದರ ಜತೆಗೆ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ದಿನವಿಡೀ ನಾವು ಸುಸ್ತಾಗಿದನ್ನು ಮರೆಸುವಂತಿರುತ್ತಿತ್ತು. ಹೀಗೆ ಹತ್ತು ದಿನ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ. ಇದರ ಮಧ್ಯೆ ಚಿತ್ತಾಕರ್ಷಕ ಚಹರೆಯಿಂದ ಓಡಾಡುವ ಲಲನೆಯರ ಮೊಗಸೌಂದರ್ಯ ನಿಮ್ಮನ್ನು ಆಕರ್ಷಿಸದೆ ಇರಲಾರದು!!
ಟ್ರೆಕ್ಕಿಂಗ್ ಕ್ಯಾಂಪ್ಗಳೂ ಸಹ ನಮ್ಮ ಪಯಣದ ಒಂದು ಭಾಗ. ಕಾಲೇಜಿನ ಸಹಯೋಗದಲ್ಲಿ ನಮ್ಮ ತಂಡ ಮೊದಲ ವರ್ಷ ನಂದಿಬೆಟ್ಟ, ನಂತರದಲ್ಲಿ 'ಕುದುರೆಮುಖ' ಹಾಗೂ ಶಿವಮೊಗ್ಗದ ಸುತ್ತಲ ಪಶ್ಚಿಮ ಘಟ್ಟಗಳಲ್ಲಿ ದಣಿವರಿಯದೆ ಸುತ್ತಿ, ಸಾಗಿ ಸಂಭ್ರಮಿಸಿದ್ದು ಈಗ ನೆನಪು ಮಾತ್ರ.
.
.
                   ( ಚಿತ್ರಕೃಪೆ: ಅಂತರ್ಜಾಲ )


 ಸಾಧನೆ ಮಾಡಲು, ಸಾಧಿಸುವ ಮಾರ್ಗದಲ್ಲಿ ನಡೆಯಲು ಅನೇಕ ಅವಕಾಶಗಳನ್ನು ಎನ್.ಸಿ.ಸಿ ನಿಮಗೆ ತೆರೆದಿಡುತ್ತದೆ. ಬೇರೆಯವರು ನೋಡಿಯೂ ಇರದ ಶಸ್ತ್ರಗಳ ಪರಿಚಯ ನಿಮಗಾಗುತ್ತದೆ. ಸರಳ ರೈಫಲ್ಗಳಿಂದ ಕೆಲ ಗುಂಡುಗಳನ್ನೂ ಹಾರಿಸಲೂಬಹುದು. ಮಿಲಿಟರಿ ಬದುಕಿನ ಕೊಂಚ ಪ್ರಮಾಣದ ವಿಶಿಷ್ಟತೆ ನಮಗರಿವಾಗುತ್ತದೆ. ಹಲವಾರು ರಾಷ್ಟ್ರೀಯ ಮಟ್ಟದ ಕ್ಯಾಂಪ್ಗಳಲ್ಲಿ ಭಾಗವಹಿಸಬಹುದು. ವಿಶೇಷ ಅನುಭವಗಳನ್ನು ಸಂಪಾದಿಸಬಹುದು. ರಾಜ್-ಪಥ್ ನಲ್ಲಿ ನಡೆಯುವ RD ಪರೇಡ್ ಹಾಗೂ TSC ಕ್ಯಾಂಪ್ಗಳಿಗೆ ಆಯ್ಕೆ ಆಗಿ ಹೋಗಿ ಬಂದರಂತೂ ನಿಮ್ಮ ಅರ್ಧ ಜೀವನಕ್ಕಾಗುವಷ್ಟು (ಗೆಳೆಯರು-ನೆನಪುಗಳು) ನಿಮ್ಮನ್ನು ಬಂಧಿಸುತ್ತವೆ. ನಮ್ಮ BMSCE-NCCಯ ನನ್ನ ಮಿತ್ರರೂ ಈ ಹಂತಕ್ಕೆ ತಲುಪಿ ಸಾಧನೆಗೈದದ್ದು ನಮ್ಮೆಲ್ಲರ ಹೆಮ್ಮೆ. 
NCC ನನ್ನ ಇಂಜಿನಿಯರಿಂಗ್ ಬದುಕಿನ ಅವಿಭಾಜ್ಯ ಅಂಗ. ಸಹಸ್ರಾರು ಸಂಗತಿಗಳನ್ನು ಕಲಿಸಿದ ವೇದಿಕೆ. ಮನಮಿಡಿಯುವ ನೆನಪುಗಳ ಹೂಗುಚ್ಛ. ಈ ಸವಿ-ನೆನಪುಗಳ ಸರಮಾಲೆಯಲ್ಲಿ ಮಿಂದೆದ್ದು ಸಹಕರಿಸಿದ ನನ್ನೆಲ್ಲಾ ಸಹಪಾಠಿಗಳು, ಬೋಧಕ-ಭೋದಕೇತರ ವರ್ಗ, ವಿಶೇಷವಾಗಿ (ತಪ್ಪಿಸಿಕೊಂಡಿದ್ದ ಟೆಸ್ಟ್- ಕ್ವಿಜ್ಗಳನ್ನು ಪುನಃ ನಡೆಸಿಕೊಟ್ಟ) ಅಧ್ಯಾಪಕರಿಗೆ ನನ್ನ ಹೃದಯಸ್ಪರ್ಶಿ ಕೃತಜ್ಞತೆಗಳು!!
ಧನ್ಯವಾದ...

~ಎಂ. ಕೆ. ಹರಕೆ

ಗುರುವಾರ, ನವೆಂಬರ್ 12, 2020

'ಬಯಕೆ'


ಬರಿದಾದ ಬದುಕಲೂ 
ಭರಪೂರ ಭರವಸೆ ಬಿತ್ತಿ
'ಬಯಕೆ' ಬೇಯಿತು ಬಿಡದೆ ಬರಿಮಾತಿನಲ್ಲಿ!

ಬತ್ತಳಿಕೆಯ ಬಾಣ 
ಬಾರದು ಬಯಸಿದಾಗ
ಬವಣೆ ಭಾಗ್ಯವ ಬೆನ್ನಟ್ಟುವುದು ಬಹಳ
ಭಾರವಾಯಿತು ಬದುಕು 
ಬಾಗಿತು ಭವಿಷ್ಯದ ಬಳ್ಳಿ
ಬಿರುಸಿನ ಬಿರುಗಾಳಿಗೆ ಬೆಲೆತೆತ್ತಿತು!

              ( ಚಿತ್ರಕೃಪೆ: ಅಂತರ್ಜಾಲ )


ಬಂಧುಗಳ ಬೆನ್ನುಡಿ
ಬಿನ್ನಾಣದ ಬಿಡಿಗಾಸು
ಬಿರಿಯದೇ ಭಾವದ ಬಸಿರ ಬಂದೂಕಿನಲ್ಲಿ?
ಬಿಕ್ಕಟ್ಟಿನ ಬಿಂದಿಗೆಯಲ್ಲೇ
ಬಾಳಿನ ಬೇಗೆಯ ಬಿಗಿದು
ಬದುಕ ಬಿಂಬಿಸುವ ಭಾವವೇ ಬಲಿಯಾಗಿದೆ!

ಬೆಲ್ಲದ ಭಾಗ್ಯೋದಯಕೆ
ಬದಲಾದ ಬಯಲಾಟವು
ಬಳಲಿಸಿದೆ ಬಣ್ಣದ ಬಾಳ ಬಡಿದಾಡಿಸಿ
'ಬಯಕೆ'ಯನ್ನು ಬಿಟ್ಟು
ಬಿರುದಾವಳಿಗಳ ಬದಿಗೊತ್ತಿ
ಬಾಯ್ಮುಚ್ಚಿ ಬಿಡದೇ ಭಜಿಸು ಭಗವಂತನ!
ಬರೀ, ಭಯ ಭಕ್ತಿಯಲಿ ಭಜಿಸು ಬಯಲಾತ್ಮನ!


~ಎಂ.ಕೆ.ಹರಕೆ

ಭಾನುವಾರ, ನವೆಂಬರ್ 1, 2020

ನೂರು ಭಾಷೆ ಮೀರಿ ನಿಲ್ಲುವ ಭಾಷೆ ನನ್ನದು!

ನೂರು ಭಾಷೆ ಮೀರಿ ನಿಲ್ಲುವ
 ಭಾಷೆ ನನ್ನದು!
ಅಂತರಂಗ ಸೂರೆಗೊಳ್ಳುವ
ನುಡಿಯು ನನ್ನದು....|
ಹರಿವಾ ಕಾವೇರಿಯಲ್ಲಿ ಜಿಗಿದು
ಸ್ವರವಾಗಿ ಚಿಮ್ಮುವ|
ಜನರ ಉಸಿರಲ್ಲಿ ಬೆರೆತು
ಧಗಿಸಿ ದನಿಯಾಗಿ ಹೊಮ್ಮುವ....||

ಇತಿಹಾಸದ ಗತವೈಭವ
ನನ್ನ ಭಾಷೆಯ ಐಸಿರಿ|
ರನ್ನ-ಪೊನ್ನರು ಕವಿ ಪಂಪನೂ
ರಸಕಾವ್ಯದ ವೈಖರಿ...|
ಕುಮಾರವ್ಯಾಸನ ಭಾರತ
ಕರುನಾಡ ಕಾವ್ಯ ಚೆಲುವು|
ನಮ್ಮ ದಾಸ-ಶರಣ ನುಡಿಸಂಸ್ಕೃತಿ
ಈ ಭಾಷೆ ಕಂಡ ಗೆಲುವು.....|

                       【ಚಿತ್ರಕೃಪೆ: ಅಂತರ್ಜಾಲ】

ನೂರು ಭಾಷೆ ಮೀರಿ ನಿಲ್ಲುವ
ಭಾಷೆ ನನ್ನದು...!
ಅಂತರಂಗ ಸೂರೆಗೊಳ್ಳುವ
ನುಡಿಯು ನನ್ನದು!!

ಶಿಲೆಶಾಸನ ಕಲ್ಬಂಡೆಯೂ
ಈ ಭಾಷೆಗೆ ಮಂದಿರ|
ಗಡಿನಾಡಲೂ ಒಳನಾಡಲೂ
ನುಡಿಯಾಗಿದೆ ಸುಮಧುರ...|
ಕುವೆಂಪು ಬೇಂದ್ರೆ ಕವಿ ಶ್ರೇಷ್ಠರು
'ಜೈ' ಎಂದು ನುಡಿದ ಭಾಷೆ|
ಕರ್ಣಾಟ ಜನಮನ ಅನುಕ್ಷಣ
'ಕೈ' ಎತ್ತಿ ಮುಗಿವ ಭಾಷೆ....|

ಎಂದೂ ಎಂದೆಂದೂ ನುಡಿ
ಕನ್ನಡ ಸಿರಿಗನ್ನಡ....
ಬಾಳಲ್ಲಿ ಎಂದೆಂದೂ ನುಡಿ
ಕನ್ನಡ ಸಿರಿಗನ್ನಡ||

                        
   ~ಎಂ.ಕೆ.ಹರಕೆ


(ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಜೊತೆಜೊತೆಯಲಿ' ಧಾರಾವಾಹಿಯ ಶೀರ್ಷಿಕೆ ಗೀತೆಯ ಕವರ್ ಸಾಂಗ್ ಇದಾಗಿದ್ದು, ಅದೇ ಧಾಟಿಯಲ್ಲಿ ಹಾಡಿಕೊಂಡರೆ ಮತ್ತಷ್ಟು ಮೆರಗು ಸಾಹಿತ್ಯಕ್ಕೆ!)




ಅಂಬೇಡ್ಕರ್!

 ನಿನ್ನ ಹೆಸರು ಕೇಳಿದರೆ ಗರ್ವ ಪಡಬೇಕಿದ್ದ ಜನ, ನಿನ್ನನ್ನು ಕೇವಲ ಒಂದು ವಿಷಯಕ್ಕೆ ಸೀಮಿತಗೊಳಿಸಿ ಕನಿಷ್ಠರಾಗಿದ್ದಾರೆ! ನಿನ್ನ ಕುರಿತು ಒಂದು ಪುಟ ಓದದ ಜನ, ನಿನ್ನನ್ನು ಗ...