ಭಾನುವಾರ, ಏಪ್ರಿಲ್ 11, 2021

ಆರೋಗ್ಯವೇ ಮಹಾಭಾಗ್ಯ

ನಿನ್ನಿಂದಲೇ ನಿನ್ನಿಂದಲೇ ನಿನ್ನ ಹೆಲ್ತು ಹಾಳಾಗಿದೆ
ನಿನ್ನಿಂದಲೇ ನಿನ್ನಿಂದಲೇ ನಿನ್ನ ಬಾಳು ಮಿತವಾಗಿದೆ


ನಿನ್ನ ಬಾಡಿಲೀ ಬೊಜ್ಜೀಗ ಮನೆಮಾಡಿದೆ
ಈ ಆನ್ಲೈನ್ ಗೇಮಿಂಗ್ ಬಂದಾಗಲೇ
ಈ ಬದುಕಲ್ಲಿ ಸಿಹಿಯೆಲ್ಲ ಮರೆಯಾಗಿದೆ
ನಿನ್ನೆದುರಲ್ಲಿ ಮಧುಮೇಹ ನಿಂತಾಗಲೇ ||೧||

ನಿನ್ನಿಂದಲೇ ನಿನ್ನಿಂದಲೇ ನಿನ್ನ ಹೆಲ್ತು ಹಾಳಾಗಿದೆ
ಅದರಿಂದಲೇ ಅದರಿಂದಲೇ ನಿನ್ನ ವೆಲ್ತು ಹೋಗ್ತಾ ಇದೆ 


                   ( ಚಿತ್ರಕೃಪೆ : ಅಂತರ್ಜಾಲ )


ಬಾಯ್ ರುಚಿಗೆ ಅತಿಯಾಗಿ ಉಪ್ಪನು ತಿಂದು
ಬಿ.ಪಿಗೆ ಬಲಿಯಾದೆ ಸುಖವೇನು?
ರೋಡ್ ಸೈಡ್ ಪಾನಿಪುರಿ, ಫ್ರೈಡ್ ರೈಸ್ ನುಂಗಿ
ಮನೆಯೂಟ ಮರೆತೋದೆ ಸರಿಯೇನು?
ಈ ಫುಡ್ಡಿಗೆ ಒಣ ಬ್ರೆಡ್ಡಿಗೆ ನಿನ್ನ ಬಾಡಿ ಬೆಂಡಾಗಿದೆ
ನಿನ್ನಿಂದಲೇ ಇದರಿಂದಲೇ ನಿನ್ನ ಹೆಲ್ತು ಹದಗೆಟ್ಟಿದೆ||೨!!


ಹೋದಲ್ಲಿ ಬಂದಲ್ಲಿ ಫಿಜ್ಜಾ ಬರ್ಗರ್ 
ಸಾಲ್ದಕ್ಕೆ ಬಾಯ್ತುಂಬ ಕೂಲ್ಡ್ರಿಂಕ್ಸು !
ಪಾರ್ಟಿಯ ಹೆಸರಲ್ಲಿ ಬಾಡು-ಬ್ರಾಂಡಿ
ನಶೆಯಲ್ಲಿ ಸಿಗರೇಟು ಭಲೇಜೋಡಿ!
ಯಮರಾಯಗೆ ಸದ್ದಿಲ್ಲದೆ ನಿನ್ನ ಮೇಲೆ ಮನಸಾಗಿದೆ
ನಿನ್ನಿಂದಲೇ ನಿನ್ನಿಂದಲೇ ನಿನ್ನ ಹಾರ್ಟು ಫೇಲಾಗಿದೆ !!೩!!


ಈ ಮನಸ್ಸಿಂದು ಪ್ರತಿಕ್ಷಣವೂ ಭಯದಲ್ಲಿದೆ 
ನಿನ್ನೆದುರಲ್ಲಿ  ವೈರಾಣು ಬಂದಾಗಲೇ!
ನಿನ್ನ ತುಟಿಯಲ್ಲಿ ನಗು ಕೊಂಚ ಕಿರಿದಾಗಿದೆ
ಆ ನಗು ಕೂಡ ಈಗೀಗ ಮರೆಯಾಗಿದೆ!!

ನಿನ್ನಿಂದಲೇ ನಿನ್ನಿಂದಲೇ ನಿನ್ ಲೈಫು ಟೈಟಾಗಿದೆ
ನಿನ್ನಿಂದಲೇ ನಿನ್ನಿಂದಲೇ ಹೊಸ ಬಾಳು ಬೇಕಾಗಿದೆ!!

- ಎಂ ಕೆ ಹರಕೆ







( 'ಮಿಲನ' ಚಿತ್ರದ ನಿನ್ನಿಂದಲೇ ಗೀತೆಯ ಧಾಟಿಯಲ್ಲಿ, ವಿಶ್ವ ಆರೋಗ್ಯ ದಿನದ ಅಂಗವಾಗಿ ಬರೆದ ಗೀತೆ.. ಅದೇ ಸ್ವರಸಂಗೀತದಲ್ಲಿ ಹಾಡಿಕೊಂಡರೆ ಸಾಹಿತ್ಯಕ್ಕೆ ಮೆರುಗು! )





ಭಾನುವಾರ, ನವೆಂಬರ್ 22, 2020

'ವೈಷ್ಣವ ಜನತೋ' ಕನ್ನಡ ಅನುವಾದ

ಸರ್ವರ ಕಷ್ಟವ ಅರಿತು ನೀ ನಡೆದರೆ
(ಎಲ್ಲರ ಬೇವಿಗೆ ಬೆಲ್ಲ ನೀನಾದರೆ)
ಕಲ್ಲಿನ ದೇವನೂ ಕರಗುವನು!
ಉಪಕಾರದ ಅಭಿಮಾನವ ಮರೆತರೆ
ಪುಣ್ಯದ ಹೊಳೆಯನು ಹರಿಸುವನು!!

ಲೋಕದಿ ಸಕಲರೂ ಬಂಧುಗಳಂತೆ
ನಿಂದಿಸದಿರು ನೀ ಯಾರನ್ನೂ
ನಡೆ-ನುಡಿಯಲ್ಲಿ ಮಡಿವಂತನಾದರೆ
ತಾಯಿಗೆ ಸಿರಿತನ ಬೇಕೇನು?

ಸಮದೃಷ್ಟಿಯಲ್ಲಿ ಸರ್ವರೂ ನಿಲ್ಲಲಿ
ಪರಸ್ತ್ರೀ ಎಂದಿಗೂ ನಿನ್ನ ತಾಯಿ!
ನಾಲಗೆಯಿಂದ ಅಸತ್ಯವ ನುಡಿದು 
ನೀ ಪರಸ್ವತ್ತಿಗೆ ಕೈ ಹಾಕದಿರು!!

'ಮೋಹ' ಎಂಬ ಮಾಯೆಗೆ ಬೀಳದೆ
ದೃಢವೈರಾಗ್ಯ ಇರಿಸು ಮನದೊಳಗೆ!
ರಾಮನಾಮ ಕೇಳಿ ಪುಳಕಿತ ನೀನಾದೊಡೆ 
ಸಕಲ ತೀರ್ಥಂಗಳೂ ಎದೆಯೊಳಗೆ!!

ಜಿಪುಣಿಯಾಗದೆ ದುರಾಸೆಯ ಬಿಡುನೀ
ಕೋಪದ ಬಾವಿಗೆ ಬೀಳದಿರು!
ಕವಿ ನಿನ್ನಾ ರೂಪವ ಕಾಣಲು ಕಾಯ್ವನು
ಪುಣ್ಯದ ಪ್ರಾಪ್ತಿ ಅಂದು ಜಗಕ್ಕೆಲ್ಲಾ!!



~ ಗುಜರಾತಿ ಆದಿಕವಿ ನರಸಿಂಹ ಮೆಹ್ತಾ
 
(ಕನ್ನಡ ಭಾವಾನುವಾದ : ಮಾಳಿಂಗರಾಯ ಹರಕೆ)





NCC ಮತ್ತು ನಾನು!

2016ರ, ಆಗಸ್ಟ್ ಮಾಹೆಯ ಹೊತ್ತು. ಪ್ರಥಮ ವರ್ಷದ ನಮಗೆ, ಓರಿಯೆಂಟೇಶನ್ ಪ್ರೋಗ್ರಾಂ! ನನಗಿಲ್ಲಿ ವಿಶೇಷವಾಗಿ ಕಂಡದ್ದು ಖಾಕಿ ಸಮವಸ್ತ್ರ ಧರಿಸಿ ಶಿಸ್ತಾಗಿ ಕಾರ್ಯಕ್ರಮ ಅಚ್ಚುಗೊಳಿಸುತ್ತಿದ್ದ ಎನ್.ಸಿ.ಸಿ ಕೆಡೆಟ್ಸ್. ಅದೇ ಕ್ಷಣದಲ್ಲೇ ನಾನೂ ಈ ಸಮವಸ್ತ್ರ ಧರಿಸಿಯೇ ತೀರಬೇಕೆಂದು ನಿಶ್ಚಯಿಸಿ, ಅವರು ನಡೆಸುವ ದೇಹಧಾರ್ಢ್ಯತಾ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು NCC ಕ್ಯಾಪ್ ಧಕ್ಕಿಸಿಕೊಂಡದ್ದು ಇನ್ನೂ ಕಣ್ಣಂಚಿನಲ್ಲಿ ಉಳಿದಿರುವ ದೃಶ್ಯ.
.
.
 ಪ್ರತಿ ವಾರದಂಚಿನಲ್ಲಿ ಕ್ಲಾಸು, ಲ್ಯಾಬು ಎಲ್ಲವನ್ನೂ ಮುಗಿಸಿ ಕ್ಷಣಾರ್ಧದಲ್ಲಿ ಸಮವಸ್ತ್ರ ಧರಿಸಿ, ಬೂಟುಗಳನ್ನು ಸಿಕ್ಕಿಸಿಕೊಂಡು ಗ್ರೌಂಡಿನಲ್ಲಿ ಫಾಲ್-ಇನ್ ಆಗುವುದರೊಳಗೆ ಹೆಣಬಿದ್ದಂತಾಗುತ್ತಿತ್ತು. ಅದರ ನಡುನಡುವೆ ಶೂ ಫಾಲಿಶ್ ಇಲ್ಲದೆ, ಖಾಕಿ ಇಸ್ತ್ರಿ ಮಾಡದೆ, ಗಲಿಬಿಲಿಯೊಳಗೆ ಏನಾದರೂ ಮರೆತು ಧರಿಸದೇ ಬಂದಿದ್ದರೆ ಮುಗೀತು ನಮ್ಮ ಕಥೆ!! ಶನಿವಾರದ ಮಧ್ಯಾಹ್ನ ಊಟ ಮುಗಿದ ಕೂಡಲೇ (ನನ್ನ ಇತರ ಸ್ನೇಹಿತರು ಕಾಲೇಜಿನಲ್ಲಿ ಜಾಲಿಯಾಗಿ ಹಲ್ಲುಗಿಂಜುತ್ತಾ ಸುತ್ತುತ್ತಿರುವಾಗ) ಇಡೀ ಕಾಲೇಜನ್ನು ಅವರೆದುರು ಐದು ಸುತ್ತು ಓಡುವ ಗೀಳು, ತದನಂತರ ವ್ಯಾಯಾಮ, ಮುಗಿದೊಡನೆ ಶುರು ನೋಡಿ 'ಪರೇಡ್' ಎಂಬ ಹಬ್ಬ. ಶಿಸ್ತಿನ ಸಾಲಿನಲ್ಲಿ ನಿಂತು, ಉರಿ ಬಿಸಿಲಿನ ಧೂಳು ಹಿಂಸೆಯಲ್ಲಿ ಸೀನಿಯರ್ ನೀಡುವ ಕಮಾಂಡಿಗೆ ತಕ್ಕಂತೆ, ತಪ್ಪಿಲ್ಲದೆ ಕೈಬೀಸುವುದರಲ್ಲಿ ಏನೋ ಸಾಹಸ, ತೃಪ್ತಿ! ಈ ಸಾಹಸದಲ್ಲಿ ಹೆಣ್ಮಕ್ಕಳು ಬಿಡದೇ ನಮ್ಮೊಡನೆ ಸರಿಸಮಾನರಾಗಿ ಪಾಲ್ಗೊಳ್ಳುವ ಪರಿ ಆಶ್ಚರ್ಯಕರ ಹಾಗೂ ಶ್ಲಾಘನೀಯ..!
.
.
NCC ಎಂಬುದು ಕೇವಲ ಗ್ರೌಂಡಿನಲ್ಲಿ ಲೆಫ್ಟ್-ರೈಟ್ ಮಾಡಿ ಕೈತೊಳೆದುಕೊಳ್ಳುವ ಗುಂಪಲ್ಲ. ಕಾಲೇಜಿನ ಇತರ ಎಲ್ಲಾ ಕ್ಲಬ್ಗಳಿಗಿಂತ ಇದು ತೀರಾ ಭಿನ್ನ. ಇದು ministry of defense, GOVT of India ಇದರಡಿಯಲ್ಲಿ ಪಳಗುವ ಒಂದು ನಿರ್ದಿಷ್ಟ ಸಾಹಸಿ ಯುವ ಸಂಸ್ಥೆ. ಇದರ ಇನ್ನೊಂದು ಮುಖ ಹಲವರಿಗೆ ಪರಿಚಯವೇ ಇರುವುದಿಲ್ಲ.
ನಮ್ಮ ವರ್ಷಾಂತ್ಯದ ಪರೀಕ್ಷೆಗಳು ಮುಗಿದ ಬಳಿಕ (ಜುಲೈ-ಆಗಸ್ಟ್) ನಾವು ಕ್ಯಾಂಪ್ಗಳಿಗೆ ಹೋಗಿದ್ದಿದೆ. ನನ್ನ ಸ್ನೇಹಿತರೆಲ್ಲ ತಮ್ಮ-ತಮ್ಮ ಊರುಗಳಲ್ಲಿ ರಜೆಯೊಂದಿಗೆ ಮಜವಾಗಿದ್ದರೆ, ಪುನಃ ನಾವು ಒಂದೆಡೆ ಬೀಡು ಬಿಟ್ಟು ಬೆವರು ಹರಿಸಬೇಕಿತ್ತು. ನೆನಪಿರಲಿ, ಹೋಗುವಾಗ ಇರುವ ನಿಮ್ಮ ಮುಖ ಬಣ್ಣ ಬರುವಾಗ ಇರುವುದಿಲ್ಲ. ಆದರೆ ಕ್ಯಾಂಪ್ನಲ್ಲಿ ಭೇಟಿಯಾಗುವ ಬೇರೆ ಕಾಲೇಜಿನ ಸ್ನೇಹಿತರು, ಪರೇಡ್ ಕಲಿಸುವ ಡ್ರಿಲ್ ಮಾಸ್ತರ್, ಮೂಕವಿಸ್ಮಿತಗೊಳಿಸುವ ಮೇಜರ್-ಕರ್ನಲ್ ಸಾಹೇಬರು, ಮನಸ್ಸಿಗೆ ಮುದ ನೀಡುವ ಆಟೋಟ ಸ್ಪರ್ಧೆ ಪ್ರತಿಯೊಂದೂ ನಮ್ಮಲ್ಲಿ ವಿಶೇಷ ತೆರನ ಅನುಭವ ಹುಟ್ಟು ಹಾಕುತ್ತದೆ. ಪ್ರತಿನಿತ್ಯ ನಸುಕಿನಲ್ಲಿ ಏಳುವುದು, ಬಿಡುವಿಲ್ಲದ ಡ್ರಿಲ್, ಮ್ಯಾರಥಾನ್, ವ್ಯಾಯಾಮ, ವೆಪನ್ ಟ್ರೈನಿಂಗ್, ಮ್ಯಾಪ್ ರೀಡಿಂಗ್, ಬ್ಯಾಂಡ್, ಟೆಂಟ್ ನಿರ್ಮಿಸುವಿಕೆ, ಮಿಲಿಟರಿ ಹಿಸ್ಟರಿ, ಮಧ್ಯಾಹ್ನದ ಪಿ-ಟಿ ಈ ಎಲ್ಲವೂದರ ಜತೆಗೆ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ದಿನವಿಡೀ ನಾವು ಸುಸ್ತಾಗಿದನ್ನು ಮರೆಸುವಂತಿರುತ್ತಿತ್ತು. ಹೀಗೆ ಹತ್ತು ದಿನ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ. ಇದರ ಮಧ್ಯೆ ಚಿತ್ತಾಕರ್ಷಕ ಚಹರೆಯಿಂದ ಓಡಾಡುವ ಲಲನೆಯರ ಮೊಗಸೌಂದರ್ಯ ನಿಮ್ಮನ್ನು ಆಕರ್ಷಿಸದೆ ಇರಲಾರದು!!
ಟ್ರೆಕ್ಕಿಂಗ್ ಕ್ಯಾಂಪ್ಗಳೂ ಸಹ ನಮ್ಮ ಪಯಣದ ಒಂದು ಭಾಗ. ಕಾಲೇಜಿನ ಸಹಯೋಗದಲ್ಲಿ ನಮ್ಮ ತಂಡ ಮೊದಲ ವರ್ಷ ನಂದಿಬೆಟ್ಟ, ನಂತರದಲ್ಲಿ 'ಕುದುರೆಮುಖ' ಹಾಗೂ ಶಿವಮೊಗ್ಗದ ಸುತ್ತಲ ಪಶ್ಚಿಮ ಘಟ್ಟಗಳಲ್ಲಿ ದಣಿವರಿಯದೆ ಸುತ್ತಿ, ಸಾಗಿ ಸಂಭ್ರಮಿಸಿದ್ದು ಈಗ ನೆನಪು ಮಾತ್ರ.
.
.
                   ( ಚಿತ್ರಕೃಪೆ: ಅಂತರ್ಜಾಲ )


 ಸಾಧನೆ ಮಾಡಲು, ಸಾಧಿಸುವ ಮಾರ್ಗದಲ್ಲಿ ನಡೆಯಲು ಅನೇಕ ಅವಕಾಶಗಳನ್ನು ಎನ್.ಸಿ.ಸಿ ನಿಮಗೆ ತೆರೆದಿಡುತ್ತದೆ. ಬೇರೆಯವರು ನೋಡಿಯೂ ಇರದ ಶಸ್ತ್ರಗಳ ಪರಿಚಯ ನಿಮಗಾಗುತ್ತದೆ. ಸರಳ ರೈಫಲ್ಗಳಿಂದ ಕೆಲ ಗುಂಡುಗಳನ್ನೂ ಹಾರಿಸಲೂಬಹುದು. ಮಿಲಿಟರಿ ಬದುಕಿನ ಕೊಂಚ ಪ್ರಮಾಣದ ವಿಶಿಷ್ಟತೆ ನಮಗರಿವಾಗುತ್ತದೆ. ಹಲವಾರು ರಾಷ್ಟ್ರೀಯ ಮಟ್ಟದ ಕ್ಯಾಂಪ್ಗಳಲ್ಲಿ ಭಾಗವಹಿಸಬಹುದು. ವಿಶೇಷ ಅನುಭವಗಳನ್ನು ಸಂಪಾದಿಸಬಹುದು. ರಾಜ್-ಪಥ್ ನಲ್ಲಿ ನಡೆಯುವ RD ಪರೇಡ್ ಹಾಗೂ TSC ಕ್ಯಾಂಪ್ಗಳಿಗೆ ಆಯ್ಕೆ ಆಗಿ ಹೋಗಿ ಬಂದರಂತೂ ನಿಮ್ಮ ಅರ್ಧ ಜೀವನಕ್ಕಾಗುವಷ್ಟು (ಗೆಳೆಯರು-ನೆನಪುಗಳು) ನಿಮ್ಮನ್ನು ಬಂಧಿಸುತ್ತವೆ. ನಮ್ಮ BMSCE-NCCಯ ನನ್ನ ಮಿತ್ರರೂ ಈ ಹಂತಕ್ಕೆ ತಲುಪಿ ಸಾಧನೆಗೈದದ್ದು ನಮ್ಮೆಲ್ಲರ ಹೆಮ್ಮೆ. 
NCC ನನ್ನ ಇಂಜಿನಿಯರಿಂಗ್ ಬದುಕಿನ ಅವಿಭಾಜ್ಯ ಅಂಗ. ಸಹಸ್ರಾರು ಸಂಗತಿಗಳನ್ನು ಕಲಿಸಿದ ವೇದಿಕೆ. ಮನಮಿಡಿಯುವ ನೆನಪುಗಳ ಹೂಗುಚ್ಛ. ಈ ಸವಿ-ನೆನಪುಗಳ ಸರಮಾಲೆಯಲ್ಲಿ ಮಿಂದೆದ್ದು ಸಹಕರಿಸಿದ ನನ್ನೆಲ್ಲಾ ಸಹಪಾಠಿಗಳು, ಬೋಧಕ-ಭೋದಕೇತರ ವರ್ಗ, ವಿಶೇಷವಾಗಿ (ತಪ್ಪಿಸಿಕೊಂಡಿದ್ದ ಟೆಸ್ಟ್- ಕ್ವಿಜ್ಗಳನ್ನು ಪುನಃ ನಡೆಸಿಕೊಟ್ಟ) ಅಧ್ಯಾಪಕರಿಗೆ ನನ್ನ ಹೃದಯಸ್ಪರ್ಶಿ ಕೃತಜ್ಞತೆಗಳು!!
ಧನ್ಯವಾದ...

~ಎಂ. ಕೆ. ಹರಕೆ

ಗುರುವಾರ, ನವೆಂಬರ್ 12, 2020

'ಬಯಕೆ'


ಬರಿದಾದ ಬದುಕಲೂ 
ಭರಪೂರ ಭರವಸೆ ಬಿತ್ತಿ
'ಬಯಕೆ' ಬೇಯಿತು ಬಿಡದೆ ಬರಿಮಾತಿನಲ್ಲಿ!

ಬತ್ತಳಿಕೆಯ ಬಾಣ 
ಬಾರದು ಬಯಸಿದಾಗ
ಬವಣೆ ಭಾಗ್ಯವ ಬೆನ್ನಟ್ಟುವುದು ಬಹಳ
ಭಾರವಾಯಿತು ಬದುಕು 
ಬಾಗಿತು ಭವಿಷ್ಯದ ಬಳ್ಳಿ
ಬಿರುಸಿನ ಬಿರುಗಾಳಿಗೆ ಬೆಲೆತೆತ್ತಿತು!

              ( ಚಿತ್ರಕೃಪೆ: ಅಂತರ್ಜಾಲ )


ಬಂಧುಗಳ ಬೆನ್ನುಡಿ
ಬಿನ್ನಾಣದ ಬಿಡಿಗಾಸು
ಬಿರಿಯದೇ ಭಾವದ ಬಸಿರ ಬಂದೂಕಿನಲ್ಲಿ?
ಬಿಕ್ಕಟ್ಟಿನ ಬಿಂದಿಗೆಯಲ್ಲೇ
ಬಾಳಿನ ಬೇಗೆಯ ಬಿಗಿದು
ಬದುಕ ಬಿಂಬಿಸುವ ಭಾವವೇ ಬಲಿಯಾಗಿದೆ!

ಬೆಲ್ಲದ ಭಾಗ್ಯೋದಯಕೆ
ಬದಲಾದ ಬಯಲಾಟವು
ಬಳಲಿಸಿದೆ ಬಣ್ಣದ ಬಾಳ ಬಡಿದಾಡಿಸಿ
'ಬಯಕೆ'ಯನ್ನು ಬಿಟ್ಟು
ಬಿರುದಾವಳಿಗಳ ಬದಿಗೊತ್ತಿ
ಬಾಯ್ಮುಚ್ಚಿ ಬಿಡದೇ ಭಜಿಸು ಭಗವಂತನ!
ಬರೀ, ಭಯ ಭಕ್ತಿಯಲಿ ಭಜಿಸು ಬಯಲಾತ್ಮನ!


~ಎಂ.ಕೆ.ಹರಕೆ

ಭಾನುವಾರ, ನವೆಂಬರ್ 1, 2020

ನೂರು ಭಾಷೆ ಮೀರಿ ನಿಲ್ಲುವ ಭಾಷೆ ನನ್ನದು!

ನೂರು ಭಾಷೆ ಮೀರಿ ನಿಲ್ಲುವ
 ಭಾಷೆ ನನ್ನದು!
ಅಂತರಂಗ ಸೂರೆಗೊಳ್ಳುವ
ನುಡಿಯು ನನ್ನದು....|
ಹರಿವಾ ಕಾವೇರಿಯಲ್ಲಿ ಜಿಗಿದು
ಸ್ವರವಾಗಿ ಚಿಮ್ಮುವ|
ಜನರ ಉಸಿರಲ್ಲಿ ಬೆರೆತು
ಧಗಿಸಿ ದನಿಯಾಗಿ ಹೊಮ್ಮುವ....||

ಇತಿಹಾಸದ ಗತವೈಭವ
ನನ್ನ ಭಾಷೆಯ ಐಸಿರಿ|
ರನ್ನ-ಪೊನ್ನರು ಕವಿ ಪಂಪನೂ
ರಸಕಾವ್ಯದ ವೈಖರಿ...|
ಕುಮಾರವ್ಯಾಸನ ಭಾರತ
ಕರುನಾಡ ಕಾವ್ಯ ಚೆಲುವು|
ನಮ್ಮ ದಾಸ-ಶರಣ ನುಡಿಸಂಸ್ಕೃತಿ
ಈ ಭಾಷೆ ಕಂಡ ಗೆಲುವು.....|

                       【ಚಿತ್ರಕೃಪೆ: ಅಂತರ್ಜಾಲ】

ನೂರು ಭಾಷೆ ಮೀರಿ ನಿಲ್ಲುವ
ಭಾಷೆ ನನ್ನದು...!
ಅಂತರಂಗ ಸೂರೆಗೊಳ್ಳುವ
ನುಡಿಯು ನನ್ನದು!!

ಶಿಲೆಶಾಸನ ಕಲ್ಬಂಡೆಯೂ
ಈ ಭಾಷೆಗೆ ಮಂದಿರ|
ಗಡಿನಾಡಲೂ ಒಳನಾಡಲೂ
ನುಡಿಯಾಗಿದೆ ಸುಮಧುರ...|
ಕುವೆಂಪು ಬೇಂದ್ರೆ ಕವಿ ಶ್ರೇಷ್ಠರು
'ಜೈ' ಎಂದು ನುಡಿದ ಭಾಷೆ|
ಕರ್ಣಾಟ ಜನಮನ ಅನುಕ್ಷಣ
'ಕೈ' ಎತ್ತಿ ಮುಗಿವ ಭಾಷೆ....|

ಎಂದೂ ಎಂದೆಂದೂ ನುಡಿ
ಕನ್ನಡ ಸಿರಿಗನ್ನಡ....
ಬಾಳಲ್ಲಿ ಎಂದೆಂದೂ ನುಡಿ
ಕನ್ನಡ ಸಿರಿಗನ್ನಡ||

                        
   ~ಎಂ.ಕೆ.ಹರಕೆ


(ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಜೊತೆಜೊತೆಯಲಿ' ಧಾರಾವಾಹಿಯ ಶೀರ್ಷಿಕೆ ಗೀತೆಯ ಕವರ್ ಸಾಂಗ್ ಇದಾಗಿದ್ದು, ಅದೇ ಧಾಟಿಯಲ್ಲಿ ಹಾಡಿಕೊಂಡರೆ ಮತ್ತಷ್ಟು ಮೆರಗು ಸಾಹಿತ್ಯಕ್ಕೆ!)




ಬುಧವಾರ, ಜುಲೈ 8, 2020

ಬದುಕು ಬದಲಿಸಿದ ಬಾಲಕ!

ಉರಿ ಉರಿ ಬಿಸಿಲು, ಒಣಧೂಳು, ಬಂಡೆ ಸೀಳುವಂತ ಕರ್ಕಶ ಶಬ್ಧಕ್ಕೆ ಬೇಯುತ್ತಿರುವ ತ್ರಾಣವನ್ನು ಮುಖಕ್ಕಂಟಿದ್ದ ಮುಖಗವಸು ಮತ್ತಷ್ಟು ಪೀಡಿಸುತ್ತಿದ್ದ ದೃಶ್ಯ. ಇದರ ನಡುವೆ ಧೂಳಿನಿಂದಾವೃತವಾದ ಕಣ್ರೆಪ್ಪೆ, ಉಸುಕಿನಲ್ಲಿ ತೇಯ್ದ ತಲೆಕೂದಲು, ಆ ತಲೆಮೇಲೊಂದು ಸಿಂಬಿ, ಡೊಗಳು ಅಂಗಿ, ತುಂಡ ಪ್ಯಾಂಟೊಂದನ್ನು ಧರಿಸಿದ್ದ ಬಾಲಕ ಎದುರಾದ. ಕಲ್ಲೇಶನಿಗೆ ತಾನು ಕಂಡ ದೃಶ್ಯದಲ್ಲಿ ಈ ಬಾಲಕನ ಹರ್ಷ ಚಹರೆಯೊಂದೆ ಆಕರ್ಷಿತ, ಮತ್ತೆಲ್ಲವೂ ಗೌಣ. ಆ ಹುಡುಗನ ಸಾಮೀಪ್ಯ ಧಾವಿಸಿ ಕಲ್ಲ ಹೀಗಂದ-

'ಏನು ನಿನ್ನ ಹೆಸ್ರು?'

'ರಂಜನ್ ಅಂತಾರೆ ನನ್ನ, ನೀವು ಬೇಕಾದರೆ ರಂಜು ಅಂತಲೂ ಕರೀಬಹುದು!'

ಹುಡುಗನ ಪ್ರತ್ಯುತ್ತರ ಕೇಳಿ ಕಲ್ಲೇಶನಿಗೆ ಕಲ್ಲು ಬಡಿದಂತಾಯಿತು. ಆದರೂ ಬಾಲಕನ ಧೈರ್ಯೋಚಿತ ಮಾತುಗಳಿಗೆ ಮನಸ್ಸು ಶರಣಾಯಿತು. ಹುಡುಗನ ಬಗ್ಗೆ ಕುತೂಹಲ ಹೆಚ್ಚಿತು.
.
ತಿರುಗಿ ನೋಡಲು ಹುಡುಗ ಅಲ್ಲಿರಲಿಲ್ಲ. ಬುಟ್ಟಿಯಲ್ಲಿ ಉಸುಕು ಹೊತ್ತು ಮೇಸ್ತ್ರಿ ಇದ್ದಲ್ಲಿಗೆ ದೌಡಾಯಿಸಿದ್ದ.
ಕಲ್ಲೇಶ ಕರಗುವ ಮನಸ್ಸುಳ್ಳವನು, ಭಾವಜೀವಿ. ಓದೋವಯಸ್ಸಿನ ಪುಟ್ಟಬಾಲಕನೋರ್ವನ ಕಷ್ಟ-ಕಾರ್ಪಣ್ಯ ಕಂಡು ಮನದೊಳಗೆ ಬಿಕ್ಕಿದ. ಅಂದ ಹಾಗೆ, ಈದಿನ ಕಲ್ಲೇಶನೂ ಸಹ ಇಲ್ಲಿ ನಡೆಯುತ್ತಿದ್ದ ಕಟ್ಟಡ ಕಾಮಗಾರಿಗೆ ಕೂಲಿಕನಾಗಿ ಆಗಮಿಸಿದ್ದ. ಇನ್ನೂ ಓದುತ್ತಿರುವ ಹೈದ. ಬೆಂಗ್ಳುರಿನ ದೊಡ್ಡ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ಅಭ್ಯಸಿಸುತ್ತಿದ್ದ. ಡಿಗ್ರಿ ಕೈಸೇರುವ ಹೊತ್ತಲ್ಲಿ ಕೋವಿಡ್-19 ರ ಛಾಯೆ ಅಡ್ಡಲಾಗಿ ಎಲ್ಲವನ್ನೂ ಮುಂದೂಡಿತ್ತು. ಮನೆಯಲ್ಲಿದ್ದು ಎಂತ ಮಾಡುವುದೆಂದು, ತಾನು ಓದುತ್ತಿರುವ ವಿಷಯಕ್ಕನುಗುಣ ಏನಾದರೂ ಕಲಿತಂತಾಗುತ್ತದೆಂದು ಕಾಮಗಾರಿ ಸ್ಥಳಕ್ಕೆ ಕಾಲಿಟ್ಟಿದ್ದ. ಇವನಿಗೆ ಈ ಕೆಲ್ಸ ಹೊಸತಲ್ಲದಿದ್ದರೂ ತುಂಬಾ ದಿನಗಳ ವಿಶ್ರಮದ ಕಾರಣ ಜಡದೇಹಿಯಾಗಿದ್ದ. ಕೊಂಚ ದುಗುಡವೂ, ನಿರುತ್ಸಾಹವೂ ಮನದೊಳಗೆ ಮನೆಮಾಡಿದ್ದವು. ಈ ಬಾಲಕನ ಕಂಡಾಕ್ಷಣದಿಂದ ಒಂದಿಷ್ಟು ಉತ್ಸಾಹ ನೀರೊಡೆದು, ಕಾಯಕದ ಉಲ್ಲಾಸ ಕೈಬೀಸಿ ಕರೆಯುತ್ತಿತ್ತು.
.
ಮೇಸ್ತ್ರಿ ಪಕ್ಕದೂರಿನವ. ಯಜಮಾನನಿಂದ ಕೆಲಸ ಒಪ್ಪಿಕೊಂಡು ಕಾಂಪೌಂಡ್ ಕಟ್ಟುತ್ತಿದ್ದ ಕಾರಣಕ್ಕೆ ಎಲ್ಲ ಕೂಲಿಕರನ್ನು  'ಬಿರ್ ಬಿರ್ರನೆ ಬನ್ನಿ' ಎಂದು ಸದ್ದು ಮಾಡಿ ಕರೆಯುತ್ತಿರುತ್ತಿದ್ದ. ದಿನಗೂಲಿಗೂ, ಒಪ್ಪಿಕೊಂಡು ಮಾಡುವ ಕೆಲಸಕ್ಕೆ ವ್ಯತ್ಯಾಸವಿದೆ. 'ದಿನಗೂಲಿ'ಯೆಂದರೆ ಯಜಮಾನನು ಕಾರ್ಯಸ್ಥಾನದಲ್ಲಿ ನಿಂತು ಕೆಲಸ ಮಾಡಿಸಿ ಮೇಸ್ತ್ರಿ ಸೇರಿದಂತೆ ಎಲ್ಲ ಕೂಲಿಕಾರರಿಗೆ ದಿನಕ್ಕಿಂತಿಷ್ಟೆಂದು ನೀಡುವ ಹಣ. 'ಒಪ್ಪಿದ ಕೆಲಸ'ವೆಂದರೆ ಯಜಮಾನ ಇಷ್ಟು ಪ್ರಮಾಣದ ಕೆಲಸವನ್ನು ಮೇಸ್ತ್ರೀಗೆ ಒಪ್ಪಿಸಿ ಇಂತಿಷ್ಟು ಹಣವನ್ನು ಒಮ್ಮೆಲೇ ಮೇಸ್ತ್ರಿಯ ಕೈಗೊಪ್ಪಿಸುತ್ತಾನೆ. ಕಡಿಮೆ ದಿನಗಳಲ್ಲಿ ಕೆಲಸ ಮುಗಿದರೆ ಕೂಲಿಕರಿಗೆ ನೀಡುವ ತುಸು ಹಣ ಮಿಕ್ಕಿ, ಮೇಸ್ತ್ರಿ ಲಾಭಗಳಿಸುತ್ತಾನೆ. ಆದ್ದರಿಂದ ಯಾರಾದರೂ ಒಂದುಕ್ಷಣ ಸುಧಾರಿಸಿಕೊಳ್ಳುತ್ತ ನಿಂತಿದ್ದರೆ,
'ಅಲ್ಲಯ್ಯ, ಹಿಂಗ್ ನಿಂತ್ರೆ ಗೋಡೆ ಯಾವಾಗ್ ಏರ್ಸೋದು?' 
ಎಂದು ವ್ಯಂಗ್ಯವಾಡುತ್ತಿದ್ದ. ಅಂತೂ ಕೆಲಸ ಕಾಮಗಾರಿ ಸರಾಗವಾಗಿ ನಡೆಯುತ್ತಿತ್ತು.
.
ಬಂದ ಕಲ್ಲೇಶನಿಗೆ ಕಲ್ಲೆತ್ತುವ ಕೆಲಸ ನಿಗಧಿಯಾಯಿತು. ತನ್ನ ಹೆಸರಿಗೆ ಅನ್ವರ್ಥವಿರುವ ಕೆಲಸ ಕಂಡು ಮನಸ್ಸೊಳಗೆ ಮುಗುಳ್ನಕ್ಕ 'ಕಲ್ಲ'. ಸುಮಾರು 20 ಕೆಜಿ ತೂಗುವ ಬಂಡೆಗಲ್ಲುಗಳನ್ನು ಹುಮ್ಮಸ್ಸಿನಲ್ಲಿ ಎತ್ತಿ ತಂದು ಗೋಡೆ ಕಟ್ಟುವ ಜಾಗಕ್ಕೆ ತಂದೆಸೆಯತೊಡಗಿದ. ಹುಡುಗನ ವೀರಾವೇಶವನ್ನು ಕಂಡು ಅಲ್ಲಿದ್ದ ಹಿರಿಜೀವಗಳು ಒಳಗೊಳಗೆ ಹುಸಿನಗೆಯಿತ್ತರು. ಈ ನಗೆಯಿಂದ ಕಲ್ಲನ ಹುಮ್ಮಸ್ಸು ಕರಗಿ ಎಲ್ಲರಂತೆ ಸಾವಕಾಶದ ಕಾರ್ಯಕ್ಕೆ ಅಣಿಯಾದ. ಇದರಿಂದ ಅವನ ಒಣತ್ರಾಣವು ಕೊಂಚ ಉಸಿರಾಡುವಂತಾಯಿತು. ಸೂರ್ಯನ ರಶ್ಮಿ ನೆತ್ತಿಯನು ದಾಟಿ ಪಶ್ಚಿಮದ ಕಡೆಯಿಂದ ಒರೆಯಾಗಲಾರಂಭಿಸಿದವು. ಸಮಯ ಎರಡಾಯಿತು.
'ಊಟ ಮುಗಿಸಿ ಬನ್ನಿ ಬೇಗ, ಹೊರಡಿ' ಎಂದು ಆಜ್ಞೆಯಿತ್ತ ಟೋಪಿ ಧರಿಸಿದ್ದ, ಕೈಯಲ್ಲಿ ಕರಣಿಯಾಡಿಸುವ 'ಮೇಸ್ತ್ರಿ'.
.
ಬಿಡುವಿಲ್ಲದೆ ಕಲ್ಲು ಮಣ್ಣು ಹೊತ್ತು, ಹಸಿದು ಹೈರಾಣಾಗಿ ಕಂಗೆಟ್ಟಿದ್ದ ಕೂಲಿ ಮಾಡುವ ಜೀವಗಳಿಗೆ ಕೊಂಚ ವಿರಾಮ ದೊರೆಯಿತು. ಜೀವಕ್ಕೆ ಚೈತನ್ಯ ಸ್ಫುರಣವಾಯಿತು.ಕಲ್ಲ ಭಾರದ ನಡಿಗೆಯಲ್ಲಿ ಬಂದು, ಧೂಳಾಗಿದ್ದ ಕೈಕಾಲು ತೊಳೆದು ಕಟ್ಟಡದ ಪಕ್ಕದಲ್ಲಿಯೇ ಇದ್ದ ಮರದ ನೆರಳಿನಲ್ಲಿ ಊಟ ಮಾಡಲು ಬುತ್ತಿಯನ್ನು ಹರವಿದ. ಮತ್ತೆಲ್ಲರೂ ತಮ್ಮ-ತಮ್ಮ ಬುತ್ತಿಯನ್ನು ಬಿಚ್ಚಿ ಅದಾಗಲೇ ಪ್ರಸಾದ ಸವಿಯುತ್ತಿದ್ದರು. ತಾನೂ ಬುತ್ತಿ ಬಿಚ್ಚಿ ಅರ್ಧ ತಿನ್ನುತ್ತಲೇ ರಂಜು ಹಾಗೂ ಆತನ ತಂದೆತಾಯಿಯರು ಕೈಗೆಟಕುವ ದೂರದಲ್ಲೇ ಪಿಸುಗುಟ್ಟುತ್ತ ತಿನ್ನುತ್ತಿರುವುದನ್ನು ಕಂಡ. ಕಣ್ಣಿನ ಸನ್ನೆಯಿಂದಲೇ ಅರಿತು ರಂಜು, ಕಲ್ಲನ ಬಳಿ ಬಂದು 'ಊಟ ಮುಗಿಯಿತೇ ಅಣ್ಣಯ್ಯ?' ಎಂದ. 'ತಗೋ ಈ ಸಿಹಿಯನ್ನು, ಹ್ಞೂ ಈಗ ಮುಗೀತು ನೋಡು!' ಎಂದು ಬುಟ್ಟಿಯಂಚಿನಲ್ಲಿದ್ದ ಸಿಹಿಖಾದ್ಯವನ್ನು ಅವನ ಕರದಲ್ಲಿಟ್ಟ. ರಂಜು ಸಿಹಿಪ್ರಿಯ. ಕ್ಷಣಾರ್ಧದಲ್ಲಿ ತಿಂದು ತೇಗಿದ.
.
ಬುತ್ತಿ ಕಟ್ಟಿಟ್ಟು ಪಕ್ಕದಲ್ಲಿ ಹರಿಯುತ್ತಿದ್ದ ಪೈಪಿನ ನೀರಿನಲ್ಲಿ ಕೈತೊಳೆದ ಕಲ್ಲ ಮುಗುಳ್ನಗುತ್ತಾ ಹೀಗಂದನು.
'ಎಷ್ಟು ಮಂದಿ, ನಿಮ್ಮನೇಲಿ?'

'ನಾಲ್ವರು ನಾವು'

'ಯಾರ್ಯಾರಿದ್ದೀರಿ?'

'ನಾನು ನನ್ನ ತಂಗಿ, ಜತೆಗೆ ಅಪ್ಪ-ಅಮ್ಮ'

'ಓಹ್ ಚಿಕ್ಕ ಕುಟುಂಬ ಚೊಕ್ಕ ಕುಟುಂಬ'

'ಅದೆಂತ ಚೊಕ್ಕ? ನಾ ಓದಿ ದುಡಿದು ತಿರುವವರೆಗೂ,
ಚೊಕ್ಕದ ಮಾತೆಲ್ಲಿ!'

ತಕ್ಷಣ ಟೋಪಿವಾಲ ಮೇಸ್ತ್ರಿಯಿಂದ ಕಿರುಚಾಟ ಶುರುವಾಯಿತು. 'ಮಾಡ ಆಗಿದೆ, ಮಳೆ ಬರೋ ಹೊತ್ತು! ಬಿರ್ರನೆ ಕೆಲ್ಸ ಮುಗ್ಸದ್ರೆ ಮನೆ. ಬನ್ನಿ ಬೇಗಬೇಗ'..
.
ಆಜ್ಞೆ ಹೊರಬೀಳುತ್ತಲೇ ಹುಡುಗ ಮರುಮಾತಾಡದೆ ಅಲ್ಲಿಂದ ಕೆಲಸಕ್ಕೆ ಹಿಂತಿರುಗಿದ. ಕಲ್ಲನ ತಲೆಯಲ್ಲಿ ಇನ್ನೂ ಏನೋ ಓಡಾಡುತ್ತಿತ್ತು. ರಂಜು ಉಸುರಿದ ಮಾತುಗಳು, ಅವನಲ್ಲಿದ್ದ ಜವಾಬ್ದಾರಿತನ, ಕಷ್ಟಗಳನ್ನು ಹಿಮ್ಮೆಟ್ಟಿಸಿ ದುಡಿದು ಮಕ್ಕಳೀರ್ವರಿಗೆ ಶಿಕ್ಷಣವೀಯುತ್ತಿರುವ ಆತನ ಪೋಷಕರು ಎಲ್ಲವೂ ಕಣ್ಣಿನಂಚಿನ ಪರದೆಯಲ್ಲಿ ಸಾಗಿ ಓಡಿದವು.
.
ಎಂತಹ ಜಾಣ್ಮೆ, ಆದರ್ಶಪ್ರಾಯ ಬದುಕು ಈತನದು. ಇವನ ತೇಜಸ್ಸನ್ನು ನೋಡಿದರೆ ಮುಂದೆ ಅಪ್ರತಿಮ ಸಾಧಕನಾಗುವುದರಲ್ಲಿ ಸಂಶಯವಿಲ್ಲಯೆಂದುಕೊಂಡ ಕಲ್ಲ. ಒಂದರ್ಥದಲ್ಲಿ 'ದುಡಿಮೆಯೇ ದೇವರು', 'ದುಡಿಮೆಯನ್ನೇ ನಂಬಿ ಬದುಕು' ಎಂಬ ಸಿದ್ಧಾಂತದಲ್ಲಿ ನಂಬಿಕಸ್ಥನೀತ. ಆದರೆ ಇತ್ತೀಚಿಗೆ ತುಸು ದೇಹ ದಣಿದರೆ ಸಂಕಟವಾದಂತೆ ಅನ್ನಿಸುತ್ತಿರಬೇಕು. ಅವ್ವ-ಅಪ್ಪ ಏನಾದ್ರೂ ಸಣ್ಣ ಕೆಲಸ ಹೇಳಿದರೂ ಸಿಡಿಮಿಡಿಗೊಳ್ಳುತ್ತಿದ್ದ. ರಂಜುವಿನ ಕಾರ್ಯ ನೋಡಿ ಈತನಿಗೂ ಅರಿವಾಗಿರಬೇಕು; 'ಜಡದೇಹ ವ್ಯರ್ಥಕಾಯವೆಂದು!'
.
ಕಲ್ಲನು ಯೋಚನಾಲಹರಿಯಿಂದ ಹೊರಬರಲು, ಮೇಸ್ತ್ರಿ ಮತ್ತೊಮ್ಮೆ ಅಬ್ಬರಿಸಿ ಕರೆಯಬೇಕಾಯಿತು. ಈ ಸರತಿಯ ಕೂಗು 'ಲೌಡ್ ಸ್ಪೀಕರ್'ಗಳನ್ನು ಮೀರಿಸುವಂತಿತ್ತು. ಕರ್ಣಪಟಲಗಳನ್ನೇ ಗೋಳಿಟ್ಟ ಕರೆಗೆ, ಕಂಗಾಲಾದ ಕಲ್ಲ ಮತ್ತೆ ಕಲ್ಲೆತ್ತುವ ಕೆಲಸಕ್ಕೆ ಮುನ್ನಡೆದ.
.
ಕೆಲಸದಲ್ಲಿನ ತಲ್ಲೀನತೆ ಸಮಯ ಸಾಗಿದ್ದನ್ನೇ ಮರೆಮಾಚಿತ್ತು. ಸಂಜೆ ಐದರ ಹೊತ್ತು. ಹೆಣ್ಣಾಳುಗಳು ಕ್ರಮೇಣ ಕರಣಿ, ಸಣಿಕೆ, ಬುಟ್ಟಿ ಮುಂತಾದ ಸಾಮಗ್ರಿಗಳನ್ನು ತೊಳೆದು ಇಡುವ ಜಾಗದಲ್ಲಿ ನೇಮಿಸುತ್ತಿದ್ದರು. ಮೆಸ್ತ್ರೀಯು ಗೋಡೆಯ ಎತ್ತರ ನೆತ್ತಿ ಎತ್ತರಕೆ ಏರಿದ್ದನ್ನು ಕಂಡು ಸಮಾಧಾನಿಯಾಗಿದ್ದ. ಕೆಲಸಿಗರು ಅಲ್ಲಲ್ಲೇ ಸುಧಾರಿಸಿ ನೀರು ಕುಡಿಯುತ್ತಾ ವಿಶ್ರಮಿಸಿದ್ದರು. ಇನ್ನೂ ಕೆಲವರು ಬೀಡಿಯ ಹೊಗೆಯನ್ನು ಗಾಳಿಯಲ್ಲಿ ಸೂಸುತ್ತಿದ್ದರು! ಬಿಡುವಾಗಿದ್ದ ಕಲ್ಲ, ರಂಜುವಿನ ಸಂಗಡ ಮಾತನಾಡಲು ಅವನ ಹತ್ತಿರ ಸುಳಿದನು.
.
'ಅಂತೂ ಕೆಲ್ಸ ಮುಗೀತು, ಅಬ್ಬಾ!'

'ಏನೋ ಅಣ್ಣಾ, ಶೀಘ್ರ ಮುಗೀತು, ನೆಮ್ಮದಿ'

'ಮತ್ತೆ, ಏನು ಓದುತ್ತಿದ್ದೀಯ? ಎಕ್ಸಾಮು ಮುಗೀತಾ?'

'ನಾನು ಒಂಬತ್ತನೇ ವರ್ಗ, ಅದೇನೋ ಪಾಸು ಮಾಡಿ ಮುಂದಕ್ಕೆ ಹಾಕ್ತಾರಂತೆ. ನಮ್ಗೆ'

'ಪರೀಕ್ಷೆ ನಡೀಲಿಲ್ಲ ಒಳ್ಳೇದು ಅಲ್ವಾ, ಯಾರ್ಗ್ ಬೇಕು ಆ ಸಾವು'

'ಹಾಗೇನಿಲ್ಲ.. ಅದರಲ್ಲೇನು? ಒಂದ್ ವಾರ ಬುಕ್ ಹಿಡದ್ರೆ ಸಾಕು, 90+ ಗೆ ಬರೀಬಹುದು'

'ಓಹ್, ಭೇಷ್.. ಏನು ಅಷ್ಟು ಧೈರ್ಯ! ಎಲ್ಲಾ ಓದಿ ಅಭ್ಯಾಸ ಮಾಡಿದ್ದಿಯ ಅಂತಾಯ್ತು. ಇರಲಿ ಬಿಡು, ನಿನ್ ತಂಗಿ?'

'ಅವ್ಳು 7ನೇ ಮುಗ್ಸಿ ಎಂಟಕ್ಕೆ ಹೋಗ್ತಾಳೆ. ಮನೇಲಿ ಅದೇನೋ ಅಡುಗೆ, ಪಾತ್ರೆ ಅಂತ ಇರ್ತಾಳೆ. ಬಿಡುವಿದ್ದಾಗ ಬೊಂಬೆ ಹಿಡೀತಾಳೆ. ಅದೂ ಬೇಡವಾದಾಗ ಅದೆಂತವೋ ಬುಕ್ಸ್ ಎಲ್ಲಾ ಓದುತ್ತಿರ್ತಾಳೆ. ನನ್ನನ್ನೇ ಜಾಣ ಅಂತಾರೆ, ಆದ್ರೆ ನಂಕಿಂತ ಜಾಣೆ ನನ್ ತಂಗಿ'

'ಹೋಗ್ಲಿ ಏನು ಆಗ್ಬೇಕಂತಿದಿಯಾ? ಮುಂದೆ.'

'ನಂಗಿನ್ನೂ ಏನು ಕ್ಲಾರಿಟಿ ಇಲ್ಲ. ಆದ್ರೆ ವಿಶ್ವೇಶ್ವರಯ್ಯ ತರ ಇಂಜಿನಿಯರ್ ಆಗ್ತೀನಿ. ಒಂದೊಂದ್ಸಲ ಐಎಎಸ್ ಆಫೀಸರ್ ಆಗ್ಬೇಕು ಅಂತಾನೂ ಅನ್ಸುತ್ತೆ'

ಹೀಗೆ ನುಡಿದ ರಂಜನ್, ತನ್ನ ಪೋಷಕರ ಕರೆಗೆ ಓಗೊಟ್ಟು ಅವರೆಡೆಗೆ ಓಡಿದ. ತನ್ನವ್ವ ಅಪ್ಪನ ಜತೆಗಿನ ರಂಜು, ಅವನ ಕನಸು, ಅವನಲ್ಲಿನ ಆತ್ಮಸ್ಥೈರ್ಯ ಎಲ್ಲವೂ ಕಲ್ಲನ ಕಂಗಳಿಗೆ ಹರ್ಷವನ್ನು ತುಂಬಿದವು. ಅವನಲ್ಲಿ ಆಗಾಗ್ಗೆ ಕಾಡುತ್ತಿದ್ದ ಕೊರಗು, ನಿರುತ್ಸಾಹ ಇವರಲ್ಲಿನ ಉತ್ಸಾಹದ ಸ್ಪರ್ಶಕ್ಕೆ ತನ್ನಿಂತಾನೇ ಕರಗಲಾರಂಭಿಸಿತು. ಹೊಸ ಹುಮ್ಮಸ್ಸು ಮನಸ್ಸಿಗೆ ಚೈತನ್ಯ ತುಂಬಿ ಸಾಂತ್ವನ ಹೇಳಿತು.
.
ತನ್ನ ಬದುಕೂ ಇದೆ ತೆರನಾಗಿ ಅಂದರೆ, ರಂಜುವಿನ ಬದುಕಿನಂತೆ ಸಾಗಿ ಬಂದದ್ದನ್ನು ನೆನಪಿಸಿಕೊಂಡು ಗದ್ಗದಿತನಾದ 'ಕಲ್ಲ'. ತಾನು ಕಳೆದ ಬಡತನದ ಬಾಲ್ಯ. ಅವ್ವ-ಅಪ್ಪನ ದುಡಿಮೆ. ಕಾರ್ಪಣ್ಯಗಳನ್ನು ಬಲವಂತವಾಗಿ ಬದಿಗೊತ್ತಿ ಕಟ್ಟಿಕೊಂಡ ಕಲಿಕಾ ಬದುಕು. ಕಲಿಯುತ್ತಲೇ ಕಳೆದ ವಿದ್ಯಾರ್ಥಿ ಜೀವನ. ಇಂಜಿನಿಯರಿಂಗ್ ಓದುವಾಗ ಬದಲಾದ ಜೀವನಕ್ರಮ. ತಾನು ಮಾನಸಿಕವಾಗಿ ನೊಂದು ಬೆಂದ ದಿನಗಳು, ಉಡಾಫೆಯಲ್ಲೇ ಮುಗಿಸಿದ ತಾಂತ್ರಿಕ ವಿದ್ಯಾಭ್ಯಾಸ ಅಪ್ರಯೋಜಕವಾಯಿತೆಂದು ಕೊಂಚ ಬೇಸತ್ತ. ಕಾಲ ಬದಲಾಗಿತ್ತು. ಇನ್ನೊಬ್ಬರ ಬದುಕಿನ ಪರೋಕ್ಷ ದೃಷ್ಟಾಂತ ತನ್ನ ಬದುಕಿನ ಭವ್ಯತೆಯನ್ನು ಪರಾಮರ್ಶಿಸಿತು. ಬದುಕು ಸಾಗಬೇಕಿದ್ದ ದಾರಿಗೆ ಪುನಃ ತಂದು ತಲುಪಿಸಿತ್ತು. 'ರಂಜು'ವಿನ ಮುಖೇನ ತನ್ನನ್ನೇ ತಾ ಕಂಡ ಕಲ್ಲೇಶ. ಆತನಿಗೆ ಆ ಹುಡುಗ ತನ್ನಂತೆ ಚಿಗುರುತ್ತಿರುವ ಮತ್ತೋರ್ವ ಸಾಹಸಿಗನೆನಿಸಿತು.
.
ಆಲೋಚನೆಗಳ ಆಲಾಪಗಳ ನಡುವೆ ರಂಜು 'ಬೈ ಅಣ್ಣಾ' ಅಂದಿದ್ದು ಈತನಿಗೆ ಕೇಳಿಸಿರಬೇಕು. ಕಣ್ಣರಳಿಸಿ ಮತ್ತೊಮ್ಮೆ ಆತನಲ್ಲಿ ದೃಷ್ಟಿ ಹಾಯಿಸಿ ತುಟಿಬಿಚ್ಚದೆ ಕೈಬೀಸಿ ಹೋಗಿ ಬಾಯೆಂದನು. ತಂದೆ ತಾಯಿಯರ ಕನಸಿನ ಕೂಸು ಅವರಿಬ್ಬರ ಜತೆ ಉಲ್ಲಾಸದಿ ಸಾಗಿತು.

ಚಿತ್ರಕೃಪೆ: ಅಂತರ್ಜಾಲ
.
ಕಲ್ಲನ ಅರಳಿದ ಕಣ್ಣುಗಳು ತೆರೆದೇ ಇದ್ದವು. ಕಣ್ಣಿನಂಚಿನಲ್ಲಿ ಕೊಂಚ ಕಾಣದ ಕಣ್ಣೀರಿದ್ದವು. ಅದೆಂಥ ಸಡಿಲಿಕೆ, ಅದೆಂಥ ನಿರಾಳತೆ, ಅದೆಂತಹ ಮನಸ್ಥಿತಿ.. 
ಹೇಳತೀರದ ಬದಲಾವಣೆಗೆ ಶುರುವಾಗಿತ್ತು ಕ್ಷಣಗಣನೆ...

ಪರಿವರ್ತಿತ ಕಲ್ಲನ ಹೃದಯ ಸದ್ದಿಲ್ಲದೇ ಸಾಗಿತು, ಮನೆಕಡೆಗೆ!

      **  **  ***  **  **  ***  ***  ** **  **  ***  

~ಎಂ.ಕೆ.ಹರಕೆ

ಗುರುವಾರ, ಜೂನ್ 18, 2020

ಕಾಯಕದ ಹೊಳಪು!

ಹೊಳೆಯುವ ಹೊಳಪು, ಹೊಳಪಲ್ಲ
ಚಿಂತನಾ ಕ್ರಾಂತಿಯ ಹರಿವು!
ಹೊಳೆದು ಹರಿದು ಮುನ್ನುಗ್ಗಿ ಭುಗಿಲೆದ್ದು
ನಭಾತೀರದ ಕದವ ತಟ್ಟಿ
ಮುಗಿಲ ಮಲ್ಲಿಗೆಯೊಳು ಸದ್ದಿಲ್ಲದೆ ರಮಿಸುವುದು!
ಹೊಳೆವುದು ಹೊಳಪು ಹದವಿಲ್ಲದೆ||


                     (ಚಿತ್ರಕೃಪೆ: ಅಂತರ್ಜಾಲ)

ಒಂದರ್ಥದಲಿ ಮಿಗಿಲು ಕಾಯಕಗಯ್ಯುವುದು
ಭೂದೇವಿಯ ಮಡಿಲ ಸುಪ್ಪತ್ತಿಗೆಯಲಿ|
ಗೆಲ್ಲುವುದು ಮನವು ಬಿಡದೆ ಗೈದರೆ ತಾನು
ಒಗ್ಗದೇ ಹರಿವ ಬೆವರ ತ್ರಾಣದಲಿ|
ಒಗ್ಗುವುದು ಹಿಗ್ಗುವುದು ಒಗ್ಗಿನೊಳು ಹೊಕ್ಕಿದರೆ
ಒಗ್ಗದ ಕಾಯವೊಮ್ಮೆಲೆ ಒಗ್ಗರಣೆಯ ಸಕ್ಕರೆ|
ಮನವ ಸೈರಿಸಿ ದುಡಿದೊಡೆ 
ಭಕ್ತಿ ಕಾಣ, ಅದುವೇ ಮುಕ್ತಿ||

ಬಯಸಿ ಬರದಿರೆ ದೇಹ, ಆಕ್ರಮಿಸಿ ಕರೆ ತಾ
ದೇಹವಿದು ಅಲ್ಪ, ಕೊಳಕು ಪಿಂಡ|
ಸಿಟ್ಟಿನಲಿ ಮೋಹದಲಿ ಅರಿಷಡ್ವರ್ಗರಾದಿಯಲಿ
ಕ್ಷಣಿಕ ಸುಖಕೆ ಮೀಯ್ವ ಮಂಕು ಹೊಂಡ||

ದೇಹವಿದು ಕ್ಷಣಿಕ, ನೀರಮೇಲಣ ಗುಳ್ಳೆ
ಎನಿತುಪಕಾರದ ಬಳಿಕ ಮುಚ್ಚಲಿ ನಾಸಿಕ ಹೊಳ್ಳೆ|
ಕಾಲ-ಕಾಲರಾದಿಯಲೂ ಕಾಯಕದೆ ಜಯಾ-ವಿಜಯ
ಕಾಯಕಶೂನ್ಯದವಗೆ ತಪ್ಪದು ಪರಾಜಯ|
'ಜೀವನ ಗ್ರಹಿಕೆ' ಇದುವೇ ಬದುಕಿನ ನಿಜಮಂತ್ರ
ಜೀವ ಜಂಜಾಟದಲಿ ಅರಿತುಕೋ ಈ ತಂತ್ರ||

-ಎಂ.ಕೆ.ಹರಕೆ

ಅಂಬೇಡ್ಕರ್!

 ನಿನ್ನ ಹೆಸರು ಕೇಳಿದರೆ ಗರ್ವ ಪಡಬೇಕಿದ್ದ ಜನ, ನಿನ್ನನ್ನು ಕೇವಲ ಒಂದು ವಿಷಯಕ್ಕೆ ಸೀಮಿತಗೊಳಿಸಿ ಕನಿಷ್ಠರಾಗಿದ್ದಾರೆ! ನಿನ್ನ ಕುರಿತು ಒಂದು ಪುಟ ಓದದ ಜನ, ನಿನ್ನನ್ನು ಗ...