ಬುಧವಾರ, ಜುಲೈ 8, 2020

ಬದುಕು ಬದಲಿಸಿದ ಬಾಲಕ!

ಉರಿ ಉರಿ ಬಿಸಿಲು, ಒಣಧೂಳು, ಬಂಡೆ ಸೀಳುವಂತ ಕರ್ಕಶ ಶಬ್ಧಕ್ಕೆ ಬೇಯುತ್ತಿರುವ ತ್ರಾಣವನ್ನು ಮುಖಕ್ಕಂಟಿದ್ದ ಮುಖಗವಸು ಮತ್ತಷ್ಟು ಪೀಡಿಸುತ್ತಿದ್ದ ದೃಶ್ಯ. ಇದರ ನಡುವೆ ಧೂಳಿನಿಂದಾವೃತವಾದ ಕಣ್ರೆಪ್ಪೆ, ಉಸುಕಿನಲ್ಲಿ ತೇಯ್ದ ತಲೆಕೂದಲು, ಆ ತಲೆಮೇಲೊಂದು ಸಿಂಬಿ, ಡೊಗಳು ಅಂಗಿ, ತುಂಡ ಪ್ಯಾಂಟೊಂದನ್ನು ಧರಿಸಿದ್ದ ಬಾಲಕ ಎದುರಾದ. ಕಲ್ಲೇಶನಿಗೆ ತಾನು ಕಂಡ ದೃಶ್ಯದಲ್ಲಿ ಈ ಬಾಲಕನ ಹರ್ಷ ಚಹರೆಯೊಂದೆ ಆಕರ್ಷಿತ, ಮತ್ತೆಲ್ಲವೂ ಗೌಣ. ಆ ಹುಡುಗನ ಸಾಮೀಪ್ಯ ಧಾವಿಸಿ ಕಲ್ಲ ಹೀಗಂದ-

'ಏನು ನಿನ್ನ ಹೆಸ್ರು?'

'ರಂಜನ್ ಅಂತಾರೆ ನನ್ನ, ನೀವು ಬೇಕಾದರೆ ರಂಜು ಅಂತಲೂ ಕರೀಬಹುದು!'

ಹುಡುಗನ ಪ್ರತ್ಯುತ್ತರ ಕೇಳಿ ಕಲ್ಲೇಶನಿಗೆ ಕಲ್ಲು ಬಡಿದಂತಾಯಿತು. ಆದರೂ ಬಾಲಕನ ಧೈರ್ಯೋಚಿತ ಮಾತುಗಳಿಗೆ ಮನಸ್ಸು ಶರಣಾಯಿತು. ಹುಡುಗನ ಬಗ್ಗೆ ಕುತೂಹಲ ಹೆಚ್ಚಿತು.
.
ತಿರುಗಿ ನೋಡಲು ಹುಡುಗ ಅಲ್ಲಿರಲಿಲ್ಲ. ಬುಟ್ಟಿಯಲ್ಲಿ ಉಸುಕು ಹೊತ್ತು ಮೇಸ್ತ್ರಿ ಇದ್ದಲ್ಲಿಗೆ ದೌಡಾಯಿಸಿದ್ದ.
ಕಲ್ಲೇಶ ಕರಗುವ ಮನಸ್ಸುಳ್ಳವನು, ಭಾವಜೀವಿ. ಓದೋವಯಸ್ಸಿನ ಪುಟ್ಟಬಾಲಕನೋರ್ವನ ಕಷ್ಟ-ಕಾರ್ಪಣ್ಯ ಕಂಡು ಮನದೊಳಗೆ ಬಿಕ್ಕಿದ. ಅಂದ ಹಾಗೆ, ಈದಿನ ಕಲ್ಲೇಶನೂ ಸಹ ಇಲ್ಲಿ ನಡೆಯುತ್ತಿದ್ದ ಕಟ್ಟಡ ಕಾಮಗಾರಿಗೆ ಕೂಲಿಕನಾಗಿ ಆಗಮಿಸಿದ್ದ. ಇನ್ನೂ ಓದುತ್ತಿರುವ ಹೈದ. ಬೆಂಗ್ಳುರಿನ ದೊಡ್ಡ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ಅಭ್ಯಸಿಸುತ್ತಿದ್ದ. ಡಿಗ್ರಿ ಕೈಸೇರುವ ಹೊತ್ತಲ್ಲಿ ಕೋವಿಡ್-19 ರ ಛಾಯೆ ಅಡ್ಡಲಾಗಿ ಎಲ್ಲವನ್ನೂ ಮುಂದೂಡಿತ್ತು. ಮನೆಯಲ್ಲಿದ್ದು ಎಂತ ಮಾಡುವುದೆಂದು, ತಾನು ಓದುತ್ತಿರುವ ವಿಷಯಕ್ಕನುಗುಣ ಏನಾದರೂ ಕಲಿತಂತಾಗುತ್ತದೆಂದು ಕಾಮಗಾರಿ ಸ್ಥಳಕ್ಕೆ ಕಾಲಿಟ್ಟಿದ್ದ. ಇವನಿಗೆ ಈ ಕೆಲ್ಸ ಹೊಸತಲ್ಲದಿದ್ದರೂ ತುಂಬಾ ದಿನಗಳ ವಿಶ್ರಮದ ಕಾರಣ ಜಡದೇಹಿಯಾಗಿದ್ದ. ಕೊಂಚ ದುಗುಡವೂ, ನಿರುತ್ಸಾಹವೂ ಮನದೊಳಗೆ ಮನೆಮಾಡಿದ್ದವು. ಈ ಬಾಲಕನ ಕಂಡಾಕ್ಷಣದಿಂದ ಒಂದಿಷ್ಟು ಉತ್ಸಾಹ ನೀರೊಡೆದು, ಕಾಯಕದ ಉಲ್ಲಾಸ ಕೈಬೀಸಿ ಕರೆಯುತ್ತಿತ್ತು.
.
ಮೇಸ್ತ್ರಿ ಪಕ್ಕದೂರಿನವ. ಯಜಮಾನನಿಂದ ಕೆಲಸ ಒಪ್ಪಿಕೊಂಡು ಕಾಂಪೌಂಡ್ ಕಟ್ಟುತ್ತಿದ್ದ ಕಾರಣಕ್ಕೆ ಎಲ್ಲ ಕೂಲಿಕರನ್ನು  'ಬಿರ್ ಬಿರ್ರನೆ ಬನ್ನಿ' ಎಂದು ಸದ್ದು ಮಾಡಿ ಕರೆಯುತ್ತಿರುತ್ತಿದ್ದ. ದಿನಗೂಲಿಗೂ, ಒಪ್ಪಿಕೊಂಡು ಮಾಡುವ ಕೆಲಸಕ್ಕೆ ವ್ಯತ್ಯಾಸವಿದೆ. 'ದಿನಗೂಲಿ'ಯೆಂದರೆ ಯಜಮಾನನು ಕಾರ್ಯಸ್ಥಾನದಲ್ಲಿ ನಿಂತು ಕೆಲಸ ಮಾಡಿಸಿ ಮೇಸ್ತ್ರಿ ಸೇರಿದಂತೆ ಎಲ್ಲ ಕೂಲಿಕಾರರಿಗೆ ದಿನಕ್ಕಿಂತಿಷ್ಟೆಂದು ನೀಡುವ ಹಣ. 'ಒಪ್ಪಿದ ಕೆಲಸ'ವೆಂದರೆ ಯಜಮಾನ ಇಷ್ಟು ಪ್ರಮಾಣದ ಕೆಲಸವನ್ನು ಮೇಸ್ತ್ರೀಗೆ ಒಪ್ಪಿಸಿ ಇಂತಿಷ್ಟು ಹಣವನ್ನು ಒಮ್ಮೆಲೇ ಮೇಸ್ತ್ರಿಯ ಕೈಗೊಪ್ಪಿಸುತ್ತಾನೆ. ಕಡಿಮೆ ದಿನಗಳಲ್ಲಿ ಕೆಲಸ ಮುಗಿದರೆ ಕೂಲಿಕರಿಗೆ ನೀಡುವ ತುಸು ಹಣ ಮಿಕ್ಕಿ, ಮೇಸ್ತ್ರಿ ಲಾಭಗಳಿಸುತ್ತಾನೆ. ಆದ್ದರಿಂದ ಯಾರಾದರೂ ಒಂದುಕ್ಷಣ ಸುಧಾರಿಸಿಕೊಳ್ಳುತ್ತ ನಿಂತಿದ್ದರೆ,
'ಅಲ್ಲಯ್ಯ, ಹಿಂಗ್ ನಿಂತ್ರೆ ಗೋಡೆ ಯಾವಾಗ್ ಏರ್ಸೋದು?' 
ಎಂದು ವ್ಯಂಗ್ಯವಾಡುತ್ತಿದ್ದ. ಅಂತೂ ಕೆಲಸ ಕಾಮಗಾರಿ ಸರಾಗವಾಗಿ ನಡೆಯುತ್ತಿತ್ತು.
.
ಬಂದ ಕಲ್ಲೇಶನಿಗೆ ಕಲ್ಲೆತ್ತುವ ಕೆಲಸ ನಿಗಧಿಯಾಯಿತು. ತನ್ನ ಹೆಸರಿಗೆ ಅನ್ವರ್ಥವಿರುವ ಕೆಲಸ ಕಂಡು ಮನಸ್ಸೊಳಗೆ ಮುಗುಳ್ನಕ್ಕ 'ಕಲ್ಲ'. ಸುಮಾರು 20 ಕೆಜಿ ತೂಗುವ ಬಂಡೆಗಲ್ಲುಗಳನ್ನು ಹುಮ್ಮಸ್ಸಿನಲ್ಲಿ ಎತ್ತಿ ತಂದು ಗೋಡೆ ಕಟ್ಟುವ ಜಾಗಕ್ಕೆ ತಂದೆಸೆಯತೊಡಗಿದ. ಹುಡುಗನ ವೀರಾವೇಶವನ್ನು ಕಂಡು ಅಲ್ಲಿದ್ದ ಹಿರಿಜೀವಗಳು ಒಳಗೊಳಗೆ ಹುಸಿನಗೆಯಿತ್ತರು. ಈ ನಗೆಯಿಂದ ಕಲ್ಲನ ಹುಮ್ಮಸ್ಸು ಕರಗಿ ಎಲ್ಲರಂತೆ ಸಾವಕಾಶದ ಕಾರ್ಯಕ್ಕೆ ಅಣಿಯಾದ. ಇದರಿಂದ ಅವನ ಒಣತ್ರಾಣವು ಕೊಂಚ ಉಸಿರಾಡುವಂತಾಯಿತು. ಸೂರ್ಯನ ರಶ್ಮಿ ನೆತ್ತಿಯನು ದಾಟಿ ಪಶ್ಚಿಮದ ಕಡೆಯಿಂದ ಒರೆಯಾಗಲಾರಂಭಿಸಿದವು. ಸಮಯ ಎರಡಾಯಿತು.
'ಊಟ ಮುಗಿಸಿ ಬನ್ನಿ ಬೇಗ, ಹೊರಡಿ' ಎಂದು ಆಜ್ಞೆಯಿತ್ತ ಟೋಪಿ ಧರಿಸಿದ್ದ, ಕೈಯಲ್ಲಿ ಕರಣಿಯಾಡಿಸುವ 'ಮೇಸ್ತ್ರಿ'.
.
ಬಿಡುವಿಲ್ಲದೆ ಕಲ್ಲು ಮಣ್ಣು ಹೊತ್ತು, ಹಸಿದು ಹೈರಾಣಾಗಿ ಕಂಗೆಟ್ಟಿದ್ದ ಕೂಲಿ ಮಾಡುವ ಜೀವಗಳಿಗೆ ಕೊಂಚ ವಿರಾಮ ದೊರೆಯಿತು. ಜೀವಕ್ಕೆ ಚೈತನ್ಯ ಸ್ಫುರಣವಾಯಿತು.ಕಲ್ಲ ಭಾರದ ನಡಿಗೆಯಲ್ಲಿ ಬಂದು, ಧೂಳಾಗಿದ್ದ ಕೈಕಾಲು ತೊಳೆದು ಕಟ್ಟಡದ ಪಕ್ಕದಲ್ಲಿಯೇ ಇದ್ದ ಮರದ ನೆರಳಿನಲ್ಲಿ ಊಟ ಮಾಡಲು ಬುತ್ತಿಯನ್ನು ಹರವಿದ. ಮತ್ತೆಲ್ಲರೂ ತಮ್ಮ-ತಮ್ಮ ಬುತ್ತಿಯನ್ನು ಬಿಚ್ಚಿ ಅದಾಗಲೇ ಪ್ರಸಾದ ಸವಿಯುತ್ತಿದ್ದರು. ತಾನೂ ಬುತ್ತಿ ಬಿಚ್ಚಿ ಅರ್ಧ ತಿನ್ನುತ್ತಲೇ ರಂಜು ಹಾಗೂ ಆತನ ತಂದೆತಾಯಿಯರು ಕೈಗೆಟಕುವ ದೂರದಲ್ಲೇ ಪಿಸುಗುಟ್ಟುತ್ತ ತಿನ್ನುತ್ತಿರುವುದನ್ನು ಕಂಡ. ಕಣ್ಣಿನ ಸನ್ನೆಯಿಂದಲೇ ಅರಿತು ರಂಜು, ಕಲ್ಲನ ಬಳಿ ಬಂದು 'ಊಟ ಮುಗಿಯಿತೇ ಅಣ್ಣಯ್ಯ?' ಎಂದ. 'ತಗೋ ಈ ಸಿಹಿಯನ್ನು, ಹ್ಞೂ ಈಗ ಮುಗೀತು ನೋಡು!' ಎಂದು ಬುಟ್ಟಿಯಂಚಿನಲ್ಲಿದ್ದ ಸಿಹಿಖಾದ್ಯವನ್ನು ಅವನ ಕರದಲ್ಲಿಟ್ಟ. ರಂಜು ಸಿಹಿಪ್ರಿಯ. ಕ್ಷಣಾರ್ಧದಲ್ಲಿ ತಿಂದು ತೇಗಿದ.
.
ಬುತ್ತಿ ಕಟ್ಟಿಟ್ಟು ಪಕ್ಕದಲ್ಲಿ ಹರಿಯುತ್ತಿದ್ದ ಪೈಪಿನ ನೀರಿನಲ್ಲಿ ಕೈತೊಳೆದ ಕಲ್ಲ ಮುಗುಳ್ನಗುತ್ತಾ ಹೀಗಂದನು.
'ಎಷ್ಟು ಮಂದಿ, ನಿಮ್ಮನೇಲಿ?'

'ನಾಲ್ವರು ನಾವು'

'ಯಾರ್ಯಾರಿದ್ದೀರಿ?'

'ನಾನು ನನ್ನ ತಂಗಿ, ಜತೆಗೆ ಅಪ್ಪ-ಅಮ್ಮ'

'ಓಹ್ ಚಿಕ್ಕ ಕುಟುಂಬ ಚೊಕ್ಕ ಕುಟುಂಬ'

'ಅದೆಂತ ಚೊಕ್ಕ? ನಾ ಓದಿ ದುಡಿದು ತಿರುವವರೆಗೂ,
ಚೊಕ್ಕದ ಮಾತೆಲ್ಲಿ!'

ತಕ್ಷಣ ಟೋಪಿವಾಲ ಮೇಸ್ತ್ರಿಯಿಂದ ಕಿರುಚಾಟ ಶುರುವಾಯಿತು. 'ಮಾಡ ಆಗಿದೆ, ಮಳೆ ಬರೋ ಹೊತ್ತು! ಬಿರ್ರನೆ ಕೆಲ್ಸ ಮುಗ್ಸದ್ರೆ ಮನೆ. ಬನ್ನಿ ಬೇಗಬೇಗ'..
.
ಆಜ್ಞೆ ಹೊರಬೀಳುತ್ತಲೇ ಹುಡುಗ ಮರುಮಾತಾಡದೆ ಅಲ್ಲಿಂದ ಕೆಲಸಕ್ಕೆ ಹಿಂತಿರುಗಿದ. ಕಲ್ಲನ ತಲೆಯಲ್ಲಿ ಇನ್ನೂ ಏನೋ ಓಡಾಡುತ್ತಿತ್ತು. ರಂಜು ಉಸುರಿದ ಮಾತುಗಳು, ಅವನಲ್ಲಿದ್ದ ಜವಾಬ್ದಾರಿತನ, ಕಷ್ಟಗಳನ್ನು ಹಿಮ್ಮೆಟ್ಟಿಸಿ ದುಡಿದು ಮಕ್ಕಳೀರ್ವರಿಗೆ ಶಿಕ್ಷಣವೀಯುತ್ತಿರುವ ಆತನ ಪೋಷಕರು ಎಲ್ಲವೂ ಕಣ್ಣಿನಂಚಿನ ಪರದೆಯಲ್ಲಿ ಸಾಗಿ ಓಡಿದವು.
.
ಎಂತಹ ಜಾಣ್ಮೆ, ಆದರ್ಶಪ್ರಾಯ ಬದುಕು ಈತನದು. ಇವನ ತೇಜಸ್ಸನ್ನು ನೋಡಿದರೆ ಮುಂದೆ ಅಪ್ರತಿಮ ಸಾಧಕನಾಗುವುದರಲ್ಲಿ ಸಂಶಯವಿಲ್ಲಯೆಂದುಕೊಂಡ ಕಲ್ಲ. ಒಂದರ್ಥದಲ್ಲಿ 'ದುಡಿಮೆಯೇ ದೇವರು', 'ದುಡಿಮೆಯನ್ನೇ ನಂಬಿ ಬದುಕು' ಎಂಬ ಸಿದ್ಧಾಂತದಲ್ಲಿ ನಂಬಿಕಸ್ಥನೀತ. ಆದರೆ ಇತ್ತೀಚಿಗೆ ತುಸು ದೇಹ ದಣಿದರೆ ಸಂಕಟವಾದಂತೆ ಅನ್ನಿಸುತ್ತಿರಬೇಕು. ಅವ್ವ-ಅಪ್ಪ ಏನಾದ್ರೂ ಸಣ್ಣ ಕೆಲಸ ಹೇಳಿದರೂ ಸಿಡಿಮಿಡಿಗೊಳ್ಳುತ್ತಿದ್ದ. ರಂಜುವಿನ ಕಾರ್ಯ ನೋಡಿ ಈತನಿಗೂ ಅರಿವಾಗಿರಬೇಕು; 'ಜಡದೇಹ ವ್ಯರ್ಥಕಾಯವೆಂದು!'
.
ಕಲ್ಲನು ಯೋಚನಾಲಹರಿಯಿಂದ ಹೊರಬರಲು, ಮೇಸ್ತ್ರಿ ಮತ್ತೊಮ್ಮೆ ಅಬ್ಬರಿಸಿ ಕರೆಯಬೇಕಾಯಿತು. ಈ ಸರತಿಯ ಕೂಗು 'ಲೌಡ್ ಸ್ಪೀಕರ್'ಗಳನ್ನು ಮೀರಿಸುವಂತಿತ್ತು. ಕರ್ಣಪಟಲಗಳನ್ನೇ ಗೋಳಿಟ್ಟ ಕರೆಗೆ, ಕಂಗಾಲಾದ ಕಲ್ಲ ಮತ್ತೆ ಕಲ್ಲೆತ್ತುವ ಕೆಲಸಕ್ಕೆ ಮುನ್ನಡೆದ.
.
ಕೆಲಸದಲ್ಲಿನ ತಲ್ಲೀನತೆ ಸಮಯ ಸಾಗಿದ್ದನ್ನೇ ಮರೆಮಾಚಿತ್ತು. ಸಂಜೆ ಐದರ ಹೊತ್ತು. ಹೆಣ್ಣಾಳುಗಳು ಕ್ರಮೇಣ ಕರಣಿ, ಸಣಿಕೆ, ಬುಟ್ಟಿ ಮುಂತಾದ ಸಾಮಗ್ರಿಗಳನ್ನು ತೊಳೆದು ಇಡುವ ಜಾಗದಲ್ಲಿ ನೇಮಿಸುತ್ತಿದ್ದರು. ಮೆಸ್ತ್ರೀಯು ಗೋಡೆಯ ಎತ್ತರ ನೆತ್ತಿ ಎತ್ತರಕೆ ಏರಿದ್ದನ್ನು ಕಂಡು ಸಮಾಧಾನಿಯಾಗಿದ್ದ. ಕೆಲಸಿಗರು ಅಲ್ಲಲ್ಲೇ ಸುಧಾರಿಸಿ ನೀರು ಕುಡಿಯುತ್ತಾ ವಿಶ್ರಮಿಸಿದ್ದರು. ಇನ್ನೂ ಕೆಲವರು ಬೀಡಿಯ ಹೊಗೆಯನ್ನು ಗಾಳಿಯಲ್ಲಿ ಸೂಸುತ್ತಿದ್ದರು! ಬಿಡುವಾಗಿದ್ದ ಕಲ್ಲ, ರಂಜುವಿನ ಸಂಗಡ ಮಾತನಾಡಲು ಅವನ ಹತ್ತಿರ ಸುಳಿದನು.
.
'ಅಂತೂ ಕೆಲ್ಸ ಮುಗೀತು, ಅಬ್ಬಾ!'

'ಏನೋ ಅಣ್ಣಾ, ಶೀಘ್ರ ಮುಗೀತು, ನೆಮ್ಮದಿ'

'ಮತ್ತೆ, ಏನು ಓದುತ್ತಿದ್ದೀಯ? ಎಕ್ಸಾಮು ಮುಗೀತಾ?'

'ನಾನು ಒಂಬತ್ತನೇ ವರ್ಗ, ಅದೇನೋ ಪಾಸು ಮಾಡಿ ಮುಂದಕ್ಕೆ ಹಾಕ್ತಾರಂತೆ. ನಮ್ಗೆ'

'ಪರೀಕ್ಷೆ ನಡೀಲಿಲ್ಲ ಒಳ್ಳೇದು ಅಲ್ವಾ, ಯಾರ್ಗ್ ಬೇಕು ಆ ಸಾವು'

'ಹಾಗೇನಿಲ್ಲ.. ಅದರಲ್ಲೇನು? ಒಂದ್ ವಾರ ಬುಕ್ ಹಿಡದ್ರೆ ಸಾಕು, 90+ ಗೆ ಬರೀಬಹುದು'

'ಓಹ್, ಭೇಷ್.. ಏನು ಅಷ್ಟು ಧೈರ್ಯ! ಎಲ್ಲಾ ಓದಿ ಅಭ್ಯಾಸ ಮಾಡಿದ್ದಿಯ ಅಂತಾಯ್ತು. ಇರಲಿ ಬಿಡು, ನಿನ್ ತಂಗಿ?'

'ಅವ್ಳು 7ನೇ ಮುಗ್ಸಿ ಎಂಟಕ್ಕೆ ಹೋಗ್ತಾಳೆ. ಮನೇಲಿ ಅದೇನೋ ಅಡುಗೆ, ಪಾತ್ರೆ ಅಂತ ಇರ್ತಾಳೆ. ಬಿಡುವಿದ್ದಾಗ ಬೊಂಬೆ ಹಿಡೀತಾಳೆ. ಅದೂ ಬೇಡವಾದಾಗ ಅದೆಂತವೋ ಬುಕ್ಸ್ ಎಲ್ಲಾ ಓದುತ್ತಿರ್ತಾಳೆ. ನನ್ನನ್ನೇ ಜಾಣ ಅಂತಾರೆ, ಆದ್ರೆ ನಂಕಿಂತ ಜಾಣೆ ನನ್ ತಂಗಿ'

'ಹೋಗ್ಲಿ ಏನು ಆಗ್ಬೇಕಂತಿದಿಯಾ? ಮುಂದೆ.'

'ನಂಗಿನ್ನೂ ಏನು ಕ್ಲಾರಿಟಿ ಇಲ್ಲ. ಆದ್ರೆ ವಿಶ್ವೇಶ್ವರಯ್ಯ ತರ ಇಂಜಿನಿಯರ್ ಆಗ್ತೀನಿ. ಒಂದೊಂದ್ಸಲ ಐಎಎಸ್ ಆಫೀಸರ್ ಆಗ್ಬೇಕು ಅಂತಾನೂ ಅನ್ಸುತ್ತೆ'

ಹೀಗೆ ನುಡಿದ ರಂಜನ್, ತನ್ನ ಪೋಷಕರ ಕರೆಗೆ ಓಗೊಟ್ಟು ಅವರೆಡೆಗೆ ಓಡಿದ. ತನ್ನವ್ವ ಅಪ್ಪನ ಜತೆಗಿನ ರಂಜು, ಅವನ ಕನಸು, ಅವನಲ್ಲಿನ ಆತ್ಮಸ್ಥೈರ್ಯ ಎಲ್ಲವೂ ಕಲ್ಲನ ಕಂಗಳಿಗೆ ಹರ್ಷವನ್ನು ತುಂಬಿದವು. ಅವನಲ್ಲಿ ಆಗಾಗ್ಗೆ ಕಾಡುತ್ತಿದ್ದ ಕೊರಗು, ನಿರುತ್ಸಾಹ ಇವರಲ್ಲಿನ ಉತ್ಸಾಹದ ಸ್ಪರ್ಶಕ್ಕೆ ತನ್ನಿಂತಾನೇ ಕರಗಲಾರಂಭಿಸಿತು. ಹೊಸ ಹುಮ್ಮಸ್ಸು ಮನಸ್ಸಿಗೆ ಚೈತನ್ಯ ತುಂಬಿ ಸಾಂತ್ವನ ಹೇಳಿತು.
.
ತನ್ನ ಬದುಕೂ ಇದೆ ತೆರನಾಗಿ ಅಂದರೆ, ರಂಜುವಿನ ಬದುಕಿನಂತೆ ಸಾಗಿ ಬಂದದ್ದನ್ನು ನೆನಪಿಸಿಕೊಂಡು ಗದ್ಗದಿತನಾದ 'ಕಲ್ಲ'. ತಾನು ಕಳೆದ ಬಡತನದ ಬಾಲ್ಯ. ಅವ್ವ-ಅಪ್ಪನ ದುಡಿಮೆ. ಕಾರ್ಪಣ್ಯಗಳನ್ನು ಬಲವಂತವಾಗಿ ಬದಿಗೊತ್ತಿ ಕಟ್ಟಿಕೊಂಡ ಕಲಿಕಾ ಬದುಕು. ಕಲಿಯುತ್ತಲೇ ಕಳೆದ ವಿದ್ಯಾರ್ಥಿ ಜೀವನ. ಇಂಜಿನಿಯರಿಂಗ್ ಓದುವಾಗ ಬದಲಾದ ಜೀವನಕ್ರಮ. ತಾನು ಮಾನಸಿಕವಾಗಿ ನೊಂದು ಬೆಂದ ದಿನಗಳು, ಉಡಾಫೆಯಲ್ಲೇ ಮುಗಿಸಿದ ತಾಂತ್ರಿಕ ವಿದ್ಯಾಭ್ಯಾಸ ಅಪ್ರಯೋಜಕವಾಯಿತೆಂದು ಕೊಂಚ ಬೇಸತ್ತ. ಕಾಲ ಬದಲಾಗಿತ್ತು. ಇನ್ನೊಬ್ಬರ ಬದುಕಿನ ಪರೋಕ್ಷ ದೃಷ್ಟಾಂತ ತನ್ನ ಬದುಕಿನ ಭವ್ಯತೆಯನ್ನು ಪರಾಮರ್ಶಿಸಿತು. ಬದುಕು ಸಾಗಬೇಕಿದ್ದ ದಾರಿಗೆ ಪುನಃ ತಂದು ತಲುಪಿಸಿತ್ತು. 'ರಂಜು'ವಿನ ಮುಖೇನ ತನ್ನನ್ನೇ ತಾ ಕಂಡ ಕಲ್ಲೇಶ. ಆತನಿಗೆ ಆ ಹುಡುಗ ತನ್ನಂತೆ ಚಿಗುರುತ್ತಿರುವ ಮತ್ತೋರ್ವ ಸಾಹಸಿಗನೆನಿಸಿತು.
.
ಆಲೋಚನೆಗಳ ಆಲಾಪಗಳ ನಡುವೆ ರಂಜು 'ಬೈ ಅಣ್ಣಾ' ಅಂದಿದ್ದು ಈತನಿಗೆ ಕೇಳಿಸಿರಬೇಕು. ಕಣ್ಣರಳಿಸಿ ಮತ್ತೊಮ್ಮೆ ಆತನಲ್ಲಿ ದೃಷ್ಟಿ ಹಾಯಿಸಿ ತುಟಿಬಿಚ್ಚದೆ ಕೈಬೀಸಿ ಹೋಗಿ ಬಾಯೆಂದನು. ತಂದೆ ತಾಯಿಯರ ಕನಸಿನ ಕೂಸು ಅವರಿಬ್ಬರ ಜತೆ ಉಲ್ಲಾಸದಿ ಸಾಗಿತು.

ಚಿತ್ರಕೃಪೆ: ಅಂತರ್ಜಾಲ
.
ಕಲ್ಲನ ಅರಳಿದ ಕಣ್ಣುಗಳು ತೆರೆದೇ ಇದ್ದವು. ಕಣ್ಣಿನಂಚಿನಲ್ಲಿ ಕೊಂಚ ಕಾಣದ ಕಣ್ಣೀರಿದ್ದವು. ಅದೆಂಥ ಸಡಿಲಿಕೆ, ಅದೆಂಥ ನಿರಾಳತೆ, ಅದೆಂತಹ ಮನಸ್ಥಿತಿ.. 
ಹೇಳತೀರದ ಬದಲಾವಣೆಗೆ ಶುರುವಾಗಿತ್ತು ಕ್ಷಣಗಣನೆ...

ಪರಿವರ್ತಿತ ಕಲ್ಲನ ಹೃದಯ ಸದ್ದಿಲ್ಲದೇ ಸಾಗಿತು, ಮನೆಕಡೆಗೆ!

      **  **  ***  **  **  ***  ***  ** **  **  ***  

~ಎಂ.ಕೆ.ಹರಕೆ

6 ಕಾಮೆಂಟ್‌ಗಳು:

  1. ಬಹಳ ಚೆನ್ನಾಗಿದೆ ಅಣ್ಣ, ನೀವು ಇದೇ ರೀತಿಯಲ್ಲಿ ಬರೆದು ನಮ್ಮನ್ನು ಖುಷಿಪಡಿಸಬೇಕೆಂದು ಹಾರೈಸುತ್ತೇನೆ.

    ಪ್ರತ್ಯುತ್ತರಅಳಿಸಿ
  2. ಸುಮಧುರ ❤ ಪದಗಳ ವಾಕ್ಯ ರಚನಾ ವಿನ್ಯಾಸವು
    .ಮಾ.......👣

    ಪ್ರತ್ಯುತ್ತರಅಳಿಸಿ

ಮೌನಜ್ವಾಲೆ

ಹಾಡು ಬರೆಯಬೇಕು ಅಳುವ ಮರೆಯಬೇಕು ಮಾತು ಮುಗಿದ ಮೇಲೆ ವಿರಹ ಮೌನಜ್ವಾಲೆ! ಯಾವ ಭೀತಿಯಲ್ಲಿ ಯಾರ ಪ್ರೀತಿಯಲ್ಲಿ ಏನೂ ಹೇಳಲಾರೆನು ಕೂಡಿ-ಕಳೆಯಲಾರೆನು! ಅಂದವಾದ ಮೈಸಿರಿ ಕಳೆದು...